ಮಂಗಳೂರು, ಜ.15 : ಬಿಕರ್ನಕಟ್ಟೆ ಕಾರ್ಮೆಲ್ ಗುಡ್ಡೆಯ ಬಾಲಯೇಸು ಕ್ಷೇತ್ರದ ವಾರ್ಷಿಕ ಮಹೋತ್ಸವ ಬುಧವಾರ ಜರಗಿತು. ಸಂಜೆ ನಡೆದ ಬಲಿಪೂಜೆಯಲ್ಲಿ ಬರೇಲಿ ಧರ್ಮಪ್ರಾಂತದ ಬಿಷಪ್ ಡಾ. ಇಗ್ನೇಶಿಯಸ್ ಡಿಸೋಜ ಪ್ರಧಾನ ಗುರುಗಳಾಗಿ ಭಾಗವಹಿಸಿದ್ದರು. ಬಿಕರ್ನಕಟ್ಟೆ ಸೈಂಟ್ ಜೋಸ್ಪ್ ಮೊನಾಸ್ಟರಿಯ ರೆಕ್ಟರ್. ಜೋ ತಾವ್ರೊ ಬೈಬಲ್ ವಾಚಿಸಿದರು.
ಹಬ್ಬದ ದಿನ ಸಂಭ್ರಮದ ಬಲಿ ಪೂಜೆ ಸೇರಿದಂತೆ ಒಟ್ಟು 8 ಬಳಿ ಪೂಜೆಗಳು ಮತ್ತು ಒಂದು ಪ್ರಾರ್ಥನಾ ವಿಧಿ ನಡೆದವು. ಭಕ್ತರು ಮೇಣದ ಬತ್ತಿಗಳನ್ನು ಉರಿಸಿ ಪ್ರಾರ್ಥಿಸಿದರು ಹಾಗೂ ತಮ್ಮ ಹರಕೆಗಳನ್ನು ಸಲ್ಲಿಸಿದರು.
ಕುಟುಂಬದ ಅನುಬಂಧ, ಸ್ವರ್ಗದ ಆನಂದ ಕುಟುಂಬದ ಅನುಬಂಧ, ಸ್ವರ್ಗದ ಆನಂದ- ಇದು ಈ ವರ್ಷದ ಮಹೋತ್ಸವದ ಮುಖ್ಯ ವಿಷಯವಾಗಿದ್ದು, ಈ ಬಗ್ಗೆ ಬಿಷಪ್ ಇಗ್ನೇಶಿಯಸ್ ಡಿಸೋಜ ಪ್ರವಚನ ನೀಡಿದರು. ನೈತಿಕತೆ ಮತ್ತು ಸಾತ್ವಿಕ ಭಾವನೆಯ ಕೊರತೆ ಹಾಗೂ ದೇವರ ಬಗೆಗೆ ಭಯ ಇಲ್ಲದಿರುವುದು, ತ್ಯಾಗ ಮನೋಭಾವನೆ ಕಡಿಮೆಯಾಗಿರುವುದು ಇವತ್ತಿನ ಕೌಟುಂಬಿಕ ಬದುಕಿನ ಸಮಸ್ಯೆಗಳಿಗೆ ಕಾರಣ ಎಂದವರು ವಿಶ್ಲೇಷಿಸಿದರು.
ಪರಸ್ಪರ ಸಹಕಾರ ಭಾವನೆಯಿಂದ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಬದುಕುವುದು, ಉದಾರ ಮನೋಭಾವ, ತಪ್ಪುಗಳನ್ನು ತಿದ್ದಿಕೊಂಡು ಸಹನೆಯಿಂದ ಜೀವನ ನಡೆಸಲು ಕಲಿಯಬೇಕೆಂದು ಸಲಹೆ ಮಾಡಿದರು. ಬಾಲ ಯೇಸು ಮಂದಿರದ ನಿರ್ದೇಶಕ ಎಲಿಯಾಸ್ ಡಿಸೋಜ ಮತ್ತು ಕಾರ್ಮೆಲ್ ಸಂಸ್ಥೆಯ ಇತರ ಗುರುಗಳು ಉಪಸ್ಥಿತರಿದ್ದರು.