ಮಂಗಳೂರು: ಉತ್ತರ ಪ್ರದೇಶ ಮೂಲದ ಕೂಲಿ ಕಾರ್ಮಿಕೆ, ವಿವಾಹಿತ ಮಹಿಳೆಯೋರ್ವಳನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೀನಕಳೀಯ ಎಂಬಲ್ಲಿ ನಡೆದಿದ್ದು, ಪ್ರಕರಣ ಮಂಗಳವಾರ ಬೆಳಕಿಗೆ ಬಂದಿದೆ. ಮೃತ ಮಹಿಳೆಯನ್ನು ಉತ್ತರ ಪ್ರದೇಶ ಮೂಲದ ಕೂಲಿ ಕಾರ್ಮಿಕೆ ಕಲ್ಪನ(25) ಎಂದು ಹೆಸರಿಸಲಾಗಿದೆ.
ಪೊಲೀಸರ ಪ್ರಕಾರ ಮೃತಳ ಗಂಡ ರಾಜೇಶ್ ಎಂಬಾತನು ಸೋಮವಾರ ರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ಹೋಗಿದ್ದು ಮಂಗಳವಾರ ಬೆಳಗ್ಗೆ ಮನೆಗೆ ವಾಪಾಸು ಬಂದಾಗ ಕೊಲೆ ಕೃತ್ಯ ಬಯಲಾಗಿದೆ. ಕಲ್ಪನಳ ರಕ್ತ ಸಿಕ್ತ ಶವವು ಬಚ್ಚಲು ಮನೆಯಲ್ಲಿ ಬಿದ್ದಿದ್ದು ಆಕೆಯ ತಲೆಗೆ ಕಲ್ಲನ್ನು ಎತ್ತಿ ಹಾಕಲಾಗಿದೆ ಎಂದು ತಿಳಿದು ಬಂದಿದೆ.
ರಾಜೇಶ್ ಮತ್ತು ಕಲ್ಪನ ಉತ್ತರ ಪ್ರದೆಶ ಮೂಲದಾವರಾಗಿದ್ದು, ಕೆಲ ತಿಂಗಳ ಹಿಂದಷ್ಟೇ ಇವರು ವಿವಾಹವಾಗಿದ್ದರು. ಮಂಗಳೂರಿಗೆ ಕೆಲಸಕ್ಕೆಂದು ಆಗಮಿಸಿದ ಇವರು ಮೀನಕಳಿಯ ಬಳಿ ಕಳೆದ ನಾಲ್ಕು ತಿಂಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕಲ್ಪನ ಹಗಲಿನಲ್ಲಿ ಕೆಲಸಕ್ಕೆ ಹೊಗುತ್ತಿದ್ದರೆ, ರಾಜೇಶ ಹಗಲು ಮತ್ತು ರಾತ್ರಿ ಪಾಳಿಯಲ್ಲಿ ದುಡಿಯುತ್ತಿದ್ದ. ಇದೀಗ ರಾಜೇಶನನ್ನು ಹೆಚ್ಚಿನ ವಿಚಾರಣೆ ಒಳಪಡಿಸಲಾಗಿದೆ.
ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪಣಂಬೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ.