ಕುಂದಾಪುರ: ಪ್ರಸಿದ್ಧ ಗಾಯಕ ಜೇಸುದಾಸ್ ಅವರು ಪ್ರತಿ ವರ್ಷದಂತೆ ಜ.10 ಶನಿವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ತಮ್ಮ 75ನೇ ಹುಟ್ಟುಹಬ್ಬ ಆಚರಿಸಿಕೊಂಡರು.
ಬೆಳಗ್ಗೆ ದೇವಸ್ಥಾನಕ್ಕೆ ಆಗಮಿಸಿದ ಜೇಸುದಾಸ್ ಅವರು ದೇವರ ದರ್ಶನ ಪಡೆದು ಹುಟ್ಟು ಹಬ್ಬದ ನಿಮಿತ್ತ ಸಂಕಲ್ಪದಂತೆ ಚಂಡಿಕಾ ಹೋಮ ನೆರವೇರಿಸಿ ಪೂರ್ಣಾಹುತಿ ಸಲ್ಲಿಸಿದರು. ಬಳಿಕ ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಕ್ಷೇತ್ರದಲ್ಲಿ ಅಕ್ಷರಾಭ್ಯಾಸ ಸೇವೆ ನಡೆಸಿದರು. ಕ್ಷೇತ್ರದಲ್ಲಿ ನೆರೆದಿದ್ದ ನೂರಾರು ಅಭಿಮಾನಿಗಳು, ಭಕ್ತರು ಜೇಸುದಾಸ್ ಮೂಲಕ ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿಕೊಂಡರು. ಜೇಸುದಾಸ್ ಇದೇ ಸಂದರ್ಭ ದೇವಿ ಸಮ್ಮುಖದಲ್ಲಿ ಭಕ್ತಿಗೀತೆಯನ್ನು ಹಾಡಿದರು. ಅಸಂಖ್ಯ ಭಕ್ತರು ಜೇಸುದಾಸ್ ಗಾಯನದಿಂದ ಭಾವಪರವಶರಾದರು.
ವರ್ಷವೂ ಕೂಡ ಜೇಸುದಾಸ್ ಹುಟ್ಟಿದ ದಿನದಂದು ಶ್ರೀ ಕ್ಷೇತ್ರದಲ್ಲಿ ಅವರ ಅಭಿಮಾಇಗಳು ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು ರೂಢಿಯಲ್ಲಿದೆ. ಅಂತೆಯೇ ಶನಿವಾರವೂ ಕೂಡ ಸಂಗೀತ ಕಾರ್ಯಕ್ರಮ ಜೋರಾಗಿಯೇ ನಡೆದಿತ್ತು. ಅಲ್ಲದೇ ದೇವಳದಲ್ಲಿಯೂ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಜೇಸುದಾಸ್ ಅವರನ್ನು ಕಣ್ತುಂಬಿಕೊಂಡ ಅಭಿಮಾನಿಗಳು ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಜೇಸುದಾಸ್, ತಾನೂ ಶ್ರೀ ದೇವಿಯ ಭಕ್ತನಾಗಿದ್ದು, ಕಳೆದ ಹಲವು ವರ್ಷಗಳಿಂದ ಹುಟ್ಟಿದ ದಿನದಂದು ಶ್ರೀ ದೇವಿ ದರ್ಶನ ಪಡೆಯುತ್ತಿದ್ದೇನೆ. ತಾನೂ ಸಂಗೀತದ ಒಬ್ಬ ವಿದ್ಯಾರ್ಥಿಯೇ ಹೊರತು ಪ್ರವೀಣನಲ್ಲ, ಕಲಿಯಲು ಇನ್ನು ಬಹಳಷ್ಟಿದೆ ಎಂಬ ಮಾತಿನಲ್ಲಿ ತಮ್ಮ ಸರಳತೆ ಪ್ರದರ್ಶಿಸಿದರು.