ಮಂಗಳೂರು,ಜ.05: ಜಗತ್ತಿಗೆ ಸಾಂಸ್ಕೃತಿಕವಾಗಿ ಅದ್ಭುತ ಕೊಡುಗೆ ನೀಡಿದ ದೇಶ ಭಾರತ. ಈ ರಾಷ್ಟ್ರದ ಶಕ್ತಿಯಾದ ಯುವ ಸಮೂಹ ವಿಜ್ಞಾನ, ಉದ್ಯಮ, ಸಾಹಿತ್ಯ, ಸಂಗೀತ ಹೀಗೆ ನಾನಾ ಕ್ಷೇತ್ರದಲ್ಲಿ ಅರ್ಥಪೂರ್ಣವಾಗಿ ತೊಡಗಿಸಿಕೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ಪರಿಕಲ್ಪನೆ ಸಾಕಾರಗೊಳಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ನಗರದ ಶ್ರೀನಿವಾಸ್ ಗ್ರೂಪ್ ಆಫ್ ಕಾಲೇಜಸ್ ವತಿಯಿಂದ ವಳಚ್ಚಿಲ್ನ ಶ್ರೀನಿವಾಸ್ ಕಾಲೇಜು ಕ್ಯಾಂಪಸ್ ಆವರಣದಲ್ಲಿ ಭಾನುವಾರ ‘ಯುವ ಪರಿವರ್ತನ 2015’ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂತಹ ಕಾರ್ಯಕ್ರಮದ ಮೂಲಕ ಯುವ ಪರಿವರ್ತನೆ ಸಾಧ್ಯ. ಇದು ಇಲ್ಲಿಂದ ಆರಂಭಗೊಂಡಿದೆ. ಇಲ್ಲಿ ದೇಶದ ನಾನಾ ಪ್ರದೇಶಗಳ ಸಂಸ್ಕೃತಿಯ ಪ್ರದರ್ಶನ ಆಗುವ ಮೂಲಕ ಭಾರತ ದರ್ಶನವೂ ಆಗಿದೆ. ಭಾರತಮಾತೆಯ ಅರ್ಚನೆಯೂ ಆಗಿದೆ ಎಂದರು.
ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ನಮ್ಮ ದೇಶ ವಿಶ್ವದಲ್ಲಿಯೇ ಅತೀ ಹೆಚ್ಚು ಯುವ ಸಂಪತ್ತನ್ನು ಹೊಂದಿದೆ. ಈ ಮಾನವ ಸಂಪನ್ಮೂಲವನ್ನು ದೇಶದ ಸಂಪತ್ತನ್ನಾಗಿ ಮಾಡುವ ಕೆಲಸ ಇಂತಹ ಯುವ ಪರಿವರ್ತನ್ ಕಾರ್ಯಕ್ರಮದ ಮೂಲಕ ಆಗಬೇಕಾಗಿದೆ ಎಂದರು.

















