ಮಂಗಳೂರು,ಜ.3 : ಕೃಷಿ ಕಾರ್ಮಿಕರ ಕೊರತೆ ಇರುವುದರಿಂದ ಅನೆಕ ರೈತರು ಕೃಷಿಯನ್ನು ಕೈಬಿಟ್ಟು ಕೃಷಿ ಭೂಮಿ ಅದರಲ್ಲೂ ವಿಶೇಷವಾಗಿ ಭತ್ತ ಬೆಳೆಯುತ್ತಿದ್ದ ಗದ್ದೆಗಳನ್ನು ಅನ್ಯ ಕಾರ್ಯಕ್ಕೆ ಬಳಸುತ್ತಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭತ್ತ ಬೆಳೆಯುವ ಭೂಮಿಯ ವಿಸ್ತಾರ ಕಡಿಮೆಯಾಗುತ್ತಿದೆ.ಇದಕ್ಕೆ ಪರ್ಯಾಯ ಮಾರ್ಗ ಭತ್ತದ ಕೃಷಿಯಲ್ಲಿ ಯಾಂತ್ರೀಕರಣ ಅಳವಡಿಕೆಯೊಂದೇ ಎಂದು ಜಂಟಿ ಕೃಷಿ ನಿರ್ದೇಶಕ ಡಾ.ಕೆಂಪೇಗೌಡರು ತಿಳಿಸಿದ್ದಾರೆ.
ಅವರು ಶನಿವಾರ ಮಂಗಳೂರು ತಾಲ್ಲೂಕು ಸುರತ್ಕಲ್ ಹೋಬಳಿಯ ಮದ್ಯ ಗ್ರಾಮದ ಶ್ರೀಧರ ಶೆಟ್ಟಿ ಅವರ ಗದ್ದೆಯಲ್ಲಿ ಕೃಷಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ಯಾಂತ್ರೀಕೃತ ಭತ್ತದ ನಾಟಿ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು. ಯಾಂತ್ರೀಕರಣದಿಂದಾಗಿ ಉತ್ತಮ ಇಳುವರಿ ವೆಚ್ಚ ಉಳಿತಾಯ ಸಮಯ ಉಳಿತಾಯವಾಗಲಿದೆ ಎಂದು ತಿಳಿಸಿದ ಜಂಟಿ ಕೃಷಿ ನಿರ್ದೇಶಕರು ಒಂದು ನಾಟಿ ಯಂತ್ರದಿಂದ ಒಂದು ದಿನ 3 ಎಕರೆಯಲ್ಲಿ ನಾಟಿ ಮಾಡಬಹುದೆಂದು ಅವರು ತಿಳಿಸಿದರು.
ಭತ್ತದ ನೇಜಿ ಹಾಕಲು ಕಾಂಕ್ರೀಟ್ ನೆಲಹಾಸು ಸಾಕು ಇದರಿಂದ ನೇಜಿ ತೆಗೆಯಲು ಸಹ ಸುಲಭ. ಇಂತಹ ನೆಲಹಾಸನ್ನು ನಿರ್ಮಿಸಲು ಉದ್ಯೋಗ ಖಾತರಿ ಯೋಜನೆಯಲ್ಲಿ ರೈತರಿಗೆ ನೆರವು ನೀಡಲಾಗುವುದೆಂದು ತರಬೇತಿ ಉದ್ಘಾಟನೆಗೊಳಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ ತಿಳಿಸಿದರು.
ಸಮಾರಂಭದಲ್ಲಿ ತಾಲೂಕು ಪಂಚಾಯತ್ ಸದಸ್ಯೆ ವಜ್ರಾಕ್ಷಿ, ಮದ್ಯ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪುಷ್ಪರಾಜ್, ಸುರತ್ಕಲ್ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಕೆ.ದಾಮೋದರ ಶೆಟ್ಟಿ, ಗದ್ದೆ ಮಾಲೀಕ ಹಾಗೂ ಪ್ರಗತಿ ಪರ ರೈತ ಶ್ರೀದರ ಶೆಟ್ಟಿ, ಕೃಷಿ ಉಪನಿರ್ದೇಶಕ ಮುನೇಗೌಡ ಹಾಗೂ ಮದ್ಯ ಗ್ರಾಮದ ಸುತ್ತಮುತ್ತಲಿನ ರೈತರು ಭಾಗವಹಿಸಿದ್ದರು. ಸಹಾಯಕ ಕೃಷಿ ಅಧಿಕಾರಿ ಬಷೀರ್ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದರು.