ಬಿ.ಸಿ.ರೋಡು: ಬಂಟ್ವಾಳ ಉಪವಿಭಾಗದ ಲೋಕೋಪಯೋಗಿ ಇಲಾಖೆಯ ಜೂನಿಯರ್ ಎಂಜಿನಿಯರ್ ಅರುಣ್ ಪ್ರಕಾಶ್ ಡಿಸೋಜ ಅವರ ಬಂಟ್ವಾಳ ಹಾಗೂ ಮಂಗಳೂರು ಮನೆಗೆ ಮಂಗಳೂರು ಲೋಕಾಯುಕ್ತ ಪೊಲೀಸರು ಶನಿವಾರ ಮುಂಜಾನೆ ದಿಢೀರ್ ದಾಳಿ ನಡೆಸಿದ್ದಾರೆ.
ಅರುಣ್ ಪ್ರಕಾಶ್ ಡಿಸೋಜ ಅವರ ಎರಡೂ ಮನೆಗಳಿಂದ ಸುಮಾರು 1.20 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ. ಶೇ.260 ಪ್ರಮಾಣದಷ್ಟು ಆಸ್ತಿಯನ್ನು ಅಕ್ರಮವಾಗಿ ಸಂಪಾದಿಸುವುದಾಗಿ ಲೋಕಾಯುಕ್ತ ಎಸ್ಪಿ ಸದಾನಂದ ವರ್ಣೇಕರ್ ತಿಳಿಸಿದ್ದಾರೆ.
ಬಂಟ್ವಾಳದಲ್ಲಿ ಆರ್ಸಿಸಿ ಮನೆ, ಮಂಗಳೂರು ಕದ್ರಿಯಲ್ಲಿ ಫ್ಲ್ಯಾಟ್, 2 ಬ್ಯಾಂಕ್ ಲಾಕರ್, 1 ಸ್ವಿಪ್ಟ್, 1 ಝೆನ್, ಒಂದೂವರೆ ಕೆ.ಜಿ. ಚಿನ್ನ, ಅರ್ಧ ಕೆ.ಜಿ. ಬೆಳ್ಳಿ, ಭೂ ದಾಖಲೆ ಪತ್ರ, ಬ್ಯಾಂಕ್ ಉಳಿತಾಯ ಖಾತೆ ಮತ್ತಿತರ ದಾಖಲೆ ಪತ್ರಗಳನ್ನು ವಶಪಡಿಸಲಾಗಿದೆ ಎಂದವರು ತಿಳಿಸಿದ್ದಾರೆ. ಶನಿವಾರ ಮುಂಜಾನೆ 4ರಿಂದ ಸಂಜೆ 4ರ ತನಕ ಲೋಕಾಯುಕ್ತ ಪೊಲೀಸರು ಮನೆಯಲ್ಲಿ ಮಹಜರು, ವಿಚಾರಣೆ ನಡೆಸಿದರು.
ಕಾರ್ಯಾಚರಣೆಯ ನೇತೃತ್ವವನ್ನು ಎಸ್ಪಿ ಸದಾನಂದ ವರ್ಣೇಕರ್ ವಹಿಸಿದ್ದು, ಡಿವೈಎಸ್ಪಿ ವಿಠಲದಾಸ ಪೈ, ಉಮೇಶ್ ಶೇಟ್, ಇನ್ಸ್ಪೆಕ್ಟರ್ಗಳಾದ ದಿಲೀಪ್ ಕುಮಾರ್, ವಿಜಯಪ್ರಸಾದ್, ನವೀನ್ ಜೋಗಿ, ಸಿಬ್ಬಂದಿಗಳಾದ ಭಾಸ್ಕರ್ ದೇರಳಕಟ್ಟೆ, ಸುದರ್ಶನ್, ಹರಿಶ್ಚಂದ್ರ, ಶಿವಪ್ರಸಾದ್, ಪ್ರವೀಣ್, ಸುಮತಿ, ಲೋಕೇಶ್, ರಾಧೇಶ್, ಸಲೀಂ, ಜಾರ್ಚ್ ತಂಡದಲ್ಲಿದ್ದರು. ಎಂಜಿನಿಯರ್ ಅರುಣ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲು ಇಲಾಖೆಗೆ ಶಿಫಾರಸು ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.