ಕುಂದಾಪುರ: ಶಿರೂರು ಸಮೀಪದ ಒತ್ತಿನೆಣೆ ತಿರುವಿನಲ್ಲಿ ಶಾಲಾ ವಾಹನ ಪಲ್ಟಿಯಾದ ಘಟನೆ ಗುರುವಾರ ಬೆಳಿಗ್ಗೆ ಸಂಭವಿಸಿದೆ. ಶಿರೂರಿನಿಂದ ಮಕ್ಕಳನ್ನು ಹತ್ತಿಸಿಕೊಂಡು ಶಾಲೆಗೆ ಬೈಂದೂರಿನ ಎಚ್.ಎಮ್.ಎಮ್.ಎಮ್.ಎಸ್. ಶಾಲೆಗೆ ಬರುತ್ತಿದ್ದ ವಾಹನ ಪಲ್ಟಿಯಾಗಿದ್ದು ಸುಮಾರು ಮೂವತ್ತು ಮಕ್ಕಳು ಗಾಯಗೊಂಡು ಮೂವರು ಗಂಭೀರ ಗಾಯಗೊಂಡಿದ್ದಾರೆ.
ಶಾರುಖ್, ಖಲಿಕಾ ವಿದಾತ್, ಅಫಾನ್ ಮೂವರು ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿಗಳಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರ: ಶಿರೂರಿನಿಂದ ಬೈಂದೂರಿನ ಎಚ್.ಎಮ್.ಎಮ್.ಎಮ್.ಎಸ್. ಆಂಗ್ಲ ಮಾಧ್ಯಮ ಶಾಲೆಗೆ ಮಕ್ಕಳನ್ನು ಕರೆತರುತ್ತಿದ್ದ ಶಾಲೆಯ ಬಸ್ಸು ಇದಾಗಿದ್ದು ಒತ್ತಿನೆಣೆ ಸಮೀಪ ಬರುವಾಗ ಚಲಕನ ನಿಯಂತ್ರಣ ತಪ್ಪಿ ಬಲ ಬದಿಯ ಸಿಮೆಂಟು ಗೋಡೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಸ್ಥಳಿಯರು ವಾಹನವನ್ನು ಎತ್ತುವ ಮೂಲಕ ಮಕ್ಕಳನ್ನು ರಕ್ಷಿಸಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಸಿಮೆಂಟು ದಂಡೆ ಹಾಗೂ ಮರದ ಆಧಾರದಿಂದ ಬಸ್ಸು ಪಲ್ಟಿಯಾಗದೇ ನಿಂತಿದ್ದು ಇಲ್ಲದ್ದಿದ್ದರೇ 50ಕ್ಕೂ ಅಡಿ ಆಳದ ಕಂದಕಕ್ಕೆ ಉರುಳುವ ಸಾಧ್ಯತೆಯಿತ್ತು ಎನ್ನಲಾಗಿದೆ. ಗಾಯಾಳು ಮಕ್ಕಳನ್ನು ಮೊದಲು ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆತಂದು ಬಳಿಕ ಗಂಭೀರ ಗಾಯಗೊಂಡ ಮೂವರನ್ನು ಮಣಿಪಾಲಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ಕೊಂಡೊಯ್ಯಲಾಗಿದೆ. ಉಳಿದ 27 ಮಕ್ಕಳು ಕುಂದಾಪುರದಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಕ್ಕಳ ಚೀರಾಟ, ಪೋಷಕರ ಆಕ್ರಂಧನ: ಕುಂದಾಪುರ ಚಿನ್ಮಯೀ ಆಸ್ಪತ್ರೆಯಲ್ಲಿ ಮಕ್ಕಳ ಪೋಷಕರು ಸಂಬಂಧಿಕರು ಜಮಾಯಿಸಿದ್ದು ಮಕ್ಕಳು ನೋವಿನಿಂದ ಚೀರಾಡುತ್ತಿದ್ದರೇ ಅವರ ಪೋಷಕರು ಮಕ್ಕಳ ಸ್ಥಿತಿ ಕಂಡು ಮರುಗುತ್ತಿದ್ದ ದೃಶ್ಯ ಕಂಡುಬಂದಿತ್ತು. ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಹುತೇಕ ಮಕ್ಕಳಿಗೆ ಕೈ, ತಲೆ, ಕಾಲು ಹಾಗೂ ಮುಖದ ಭಾಗಕ್ಕೆ ಗಾಯಗಳಾಗಿದೆ ಎನ್ನಲಾಗಿದೆ.
ಬೇಜವಬ್ದಾರಿ ಆಡಳಿತ ಮಂಡಳಿ: ಶಿರೂರು ಒತ್ತಿನೆಣೆ ಸಮೀಪ ೮.೪೫ ರ ಸುಮಾರಿಗೆ ಘಟನೆ ನಡೆದೂ ಎಲ್ಲೆಡೆ ಸುದ್ದಿ ಹರಡಿದರೂ ಕೂಡ ಶಾಲೆಯ ಆಡಳಿತ ಮಂಡಳಿ ಮದ್ಯಾಹ್ನ ೧೨ ಗಂಟೆಯವರೆಗೂ ಆಸ್ಪತ್ರೆಯತ್ತ ಬರುವಂತಹ ಕೆಲಸ ಮಾಡದಿರುವುದು ಮಕ್ಕಳ ಪೋಷಕರನ್ನು ಕೆರಳಿಸಿದ ಘಟನೆಯೂ ನಡೆಯಿತು. ಮೂರ್ನಾಲ್ಕು ಶಿಕ್ಷಕಿಯರು ಮಾತ್ರವೇ ಬಂದು ಮಕ್ಕಳ ಯೋಗಕ್ಷೇಮ ವಿಚಾರಿಸಿದ್ದು ಅವರ ಬಳಿ ಮಕ್ಕಳ ಪಟ್ಟಿಯೂ ಇರಲಿಲ್ಲ. ಇನ್ನು ಶಾಲೆಯ ಆಡಳಿತ ಮಂಡಳಿಯ ಬಳಿಯೂ ಹಾಹನದಲ್ಲಿರುವ ಮಕ್ಕಳ ಪಟ್ಟಿ ಇಲ್ಲದಿರುವುದು ಶಾಲಾ ಆಡಳಿತ ಮಂಡಳಿಯ ಬೇಜವಬ್ದರಿ ತೋರಿಸುವಂತಿತ್ತು.
ಗಾಯಾಳುಗಳು: ಅನಿತ್, ರಾಹಿಲ್, ಅಬ್ದುಲ್ ರಮೀದ್, ಮುಮ್ದು ರೆಹಮಾನ್, ನಿಜಾವ್ ತಸ್ಲೀಮ್, ಇಸ್ಮಾಯಿಲ್ ಅಜೀಮ್, ಶಾಬಿಬ್, ಶ್ರದ್ಧಾ, ರಿಹಾ, ಮುಜಾಹಿತ್, ಮುಸ್ತಾಖ್ ಅಹಮ್ಮದ್,, ಹಿಂಕರ್ ಮುಸ್ತಾಫ್, ಇಲ್ವಾ, ಯತಿಶಮ, ಅನಾಮ್, ನಿಹಾಲ್, ರಾಬಿ, ಅಲ್ತಾಮಿಶ್, ಮಹಮ್ಮದ್ ರೋಹನ್, ಶಾಫೀ ಮಹಮ್ಮದ್, ಮಹಮ್ಮದ್ ಸಾಫಿಯಾನ್, ಅಫೀನ್ ಬೇಗಂ, ಫಹಿ ಅಲಾಂ, ಮಹಮದ್ ಶಹೀರ್, ವಾರ್ದಾ, ನುರಾ, ನುಜಿಫಾ ಮೊದಲಾದವರು ಕುಂದಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಂದಾಪುರ ಆಸ್ಪತ್ರೆಗೆ ಕುಂದಪುರ ಎಸಿ ಚಾರುಲತಾ ಸೋಮಾಲ್, ತಹಶಿಲ್ದಾರ್ ಗಾಯತ್ರಿ ನಾಯಕ್, ಡಿ.ಡಿ.ಫಿ.ಐ. ದಿವಾಕರ ಶೆಟ್ಟಿ, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಭಾಸ್ಕರ ಶೆಟ್ಟಿ, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ, ಉಡುಪಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಪ್ರಕಾಶ ಮೆಂಡನ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ತಾ.ಪಂ. ಸದಸ್ಯ ರಾಜು ಪೂಜಾರಿ ಮೊದಲಾದವರು ಭೇಟಿ ನೀಡಿದ್ದಾರೆ.