ಕುಂದಾಪುರ: ಇಲ್ಲಿಗೆ ಸಮೀಪದ ಕೋಟೇಶ್ವರzಲ್ಲಿ ಶನಿವಾರ ನಡೆದ ಇಲ್ಲಿನ ಇತಿಹಾಸ ಪ್ರಸಿದ್ದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವೈಭವದ ಬ್ರಹ್ಮರಥೋತ್ಸವ ಹಾಗೂ ’ಕೊಡಿ’ ಹಬ್ಬಕ್ಕೆ ದೇಶ-ವಿದೇಶದಿಂದ ಬಂದ ಸಾವಿರಾರು ಭಕ್ತರು ಸಾಕ್ಷಿಯಾದರು.
ವೃಶ್ಚಿಕಮಾಸದಂದು ನಡೆಯುವ ಇಲ್ಲಿನ ಬ್ರಹ್ಮರಥೋತ್ಸವಕ್ಕಾಗಿ ಶನಿವಾರ ನಸುಕಿನಲ್ಲಿಯೇ ದೇವಸ್ಥಾನಕ್ಕೆ ಆಗಮಿಸುತ್ತಿದ್ದ ಭಕ್ತರು, ಕೋಟಿತೀರ್ಥ ಪುಷ್ಕರಣಿಯಲ್ಲಿ ಸ್ನಾನವನ್ನು ಮುಗಿಸಿ, ಸರೋವರದ ಸುತ್ತ ಹಾಸಿರುವ ಬಳಿಯ ಬಟ್ಟೆ ಮೇಲೆ ಅಪೇಕ್ಷಿತರಿಗೆ ಅಕ್ಕಿಯನ್ನು ಚಲ್ಲುವುದರ ಮೂಲಕ ಸುತ್ತಕ್ಕಿ ಸೇವೆಯನ್ನು ಸಲ್ಲಿಸಿ ದೇವರ ದರ್ಶನ ಪಡೆದರು.
ಕೋಟಿಲಿಂಗೇಶ್ವರ ದೇವಸ್ಥಾನದ ಮುಂಭಾಗದ ರಥಬೀದಿಯಲ್ಲಿ ಇರಿಸಲಾದ ಬ್ರಹ್ಮರತದಲ್ಲಿ ದೇವರ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿ ರಥಾರೋಹಣ ನಡೆಸಲಾಯಿತು. ಸಂಜೆ ೬.೩೦ರವೇಳೆ ರಥದ ಅವರೋಹಣ ನಡೆಯಿತು.
ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ವಕ್ವಾಡಿ ಪ್ರಭಾಕರ ಶೆಟ್ಟಿ, ಸ್ಥಳೀಯ ಪ್ರಮುಖರಾದ ಮಾರ್ಕೋಡು ಗೋಪಾಲಕೃಷ್ಣ ಶೆಟ್ಟಿ, ಮಾರ್ಕೋಡು ಸುಧೀರ್ ಕುಮಾರ್ ಶೆಟ್ಟಿ, ರಮೇಶ್ ಭಟ್, ಜಿಲ್ಲಾ ಪಂಚಾಯಿತಿ ಸದಸ್ಯ ಗಣಪತಿ ಟಿ ಶ್ರೀಯಾನ್, ಬುದ್ಧ ರಾಜಜ್ ಶೆಟ್ಟಿ ಕೋಟೇಶ್ವರ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಶೇಖರ ಶೆಟ್ಟಿ, ಶ್ರೀನಿವಾಸ ಕುಂದರ್, ಡಾ. ಸುಧಾಕರ ನಂಬಿಯಾರ್, ಕುಸುಮಾ ದೇವಾಡಿಗ ಮೊದಲಾದವರಿದ್ದರು.
ಕೋಟೇಶ್ವರದ ಕೊಡಿ ಹಬ್ಬಕ್ಕೆ ಬಂದು ದೇವರ ದರ್ಶನ ಮಾಡಿ ಕೊಡಿ (ಕಬ್ಬಿನ ಜಲ್ಲೆ) ಯನ್ನು ತೆಗೆದುಕೊಂಡು ಹೋದರೆ, ದಂಪತಿಗಳ ಬಾಳಿನಲ್ಲಿ ಕೊಡಿ ಅರಳುತ್ತದೆ ಎನ್ನುವ ನಂಬಿಕೆಗಳು ಇರುವುದರಿಂದ, ತಾಲ್ಲೂಕಿನ ವಿವಿಧ ಭಾಗಗಳಿಂದ ಬಂದ ನವ ದಂಪತಿಗಳ ದೇವರ ದರ್ಶನ ಮಾಡಿ ಕಬ್ಬನ್ನು ಪಡೆದುಕೊಂಡು ತೆರಳಿದರು.
ಜಾತ್ರೆಗೆ ಬಂದವರಿಗಾಗಿ ಸ್ಥಳೀಯ ಸಂಘ ಸಂಸ್ಥೆಗಳಿಂದ ಪಾನಕ ಹಾಗೂ ತಂಪು ಪಾನೀಯದ ವ್ಯವಸ್ಥೆ ಮಾಡಲಾಗಿತ್ತು.