ಉಡುಪಿ: ಹಪ್ತಾಕ್ಕಾಗಿ ಬೆದರಿಕೆಯೊಡ್ಡಿದ ಕುಖ್ಯಾತ ಪ್ರವೀಣ್ ಕುಲಾಲ್ ಒರ್ವಾಡಿ ಸಂಗಡಿಗರ ತಂಡ ಮಾರಕಾಸ್ತ್ರಗಳೊಂದಿಗೆ ಬಾರ್ ಒಳಗೆ ನುಗ್ಗಿ ಮಾಲೀಕನ ಮೇಲೆ ತಲವಾರು ಬೀಸಿ ಕೊಲೆ ಯತ್ನ ನಡೆಸಿದ ಘಟನೆ ಮೂಡುಬೆಳ್ಳೆ ಕಟ್ಟಿಂಗೇರಿಯ ಎಸ್.ಎಸ್.ಬಾರ್ ಆಂಡ್ ರೆಸ್ಟೋರೆಂಟ್ನಲ್ಲಿ ನಡೆದಿದೆ. ಬಾರ್ ಮಾಲೀಕ ಓಡಿ ತಪ್ಪಿಸಿಕೊಂಡಿದ್ದಾರೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಶಿರ್ವ ಎಸ್ಐ ಅಶೋಕ್ ಪಿ. ಮತ್ತು ಸಿಬಂದಿ ಗುರುವಾರ ಆರೋಪಿಗಳನ್ನು ಮೂಡುಬೆಳ್ಳೆ ಬಳಿ ಬಂಧಿಸಿದ್ದಾರೆ. ಆರೋಪಿಗಳು ಕರತ್ಯಕ್ಕೆ ಉಪಯೋಗಿಸಿದ ಮೂರು ಮೊಬೈಲ್, ತಲವಾರ್ – 1, ಸ್ಟೀಲ್ ರಾಡ್ – 2 , ಚವರ್ಲೆಟ್ ಕಾರು – 1 ನ್ನು ವಶಪಡಿಸಿಕೊಳ್ಳಲಾಗಿದೆ.
ಆಪಾದಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು 15 ದಿನಗಳ ನ್ಯಾಯಾಂಗ ಬಂದನ ವಿದಿಸಲಾಗಿದೆ.
ಕಟ್ಟಿಂಗೇರಿಯ ಎಸ್.ಎಸ್.ಬಾರ್ ಆಂಡ್ ರೆಸ್ಟೋರೆಂಟ್ ನಡೆಸುತ್ತಿರುವ ಕಟ್ಟಿಂಗೇರಿ ಎಡ್ಮೇರು ನಿವಾಸಿ ಕೆ ಶಿವರಾಮ ಸಾಲ್ಯಾನ್ ಅವರ ಬಾರಿಗೆ ಆಗಾಗ ಬರುತ್ತಿದ್ದ ಪ್ರವೀಣ್ ಕುಲಾಲ್ ಉಚಿತ ಮದ್ಯ ಮತ್ತಿತರ ಬೇಡಿಕೆಗಳಿಂದ ಮಾಲಕನನ್ನು ಪೀಡಿಸುತ್ತಿದ್ದ. ಕೆಲವು ತಿಂಗಳಿಂದ ಬಾರಿಗೆ ಬೇಟಿ ನೀಡುವುದನ್ನು ನಿಲ್ಲಿಸಿದ್ದ ಈತ ಆಗಾಗ ಹಫ್ತಾ ನೀಡುವಂತೆ ಕರೆಮಾಡಿ ಬೆದರಿಕೆ ಒಡ್ಡುತ್ತಿದ್ದ. ಬುಧವಾರ ಸಂಜೆ ತನ್ನ ಸಂಗಡಿಗರಾದ ಹರೀಶ್ ರೆಡ್ಡಿ ಮತ್ತು ಸಂತೋಷ ಎಂಬವರೊಂದಿಗೆ ಕಾರಿನಲ್ಲಿ ಬಂದು ಏಕಾಏಕಿ ಬಾರಿಗೆ ನುಗ್ಗಿ ಮಾಲೀಕನತ್ತ ತಲವಾರು ಬೀಸಿದರು. ಮಾಲೀಕ ಹೊರಗೋಡಿ ತಪ್ಪಿಸಿಕೊಂಡಿದ್ದು ಬಚಾವಾಗಿದ್ದಾರೆ. ಆರೋಪಿಗಳು ಕಟ್ಟಿಂಗೇರಿಯ ಎಸ್.ಎಸ್.ಬಾರ್ನ ಮಾಲೀಕರಿಗೆ ಆಗಾಗ ಕರೆಮಾಡಿ 5 ಲಕ್ಷ ರೂ. ನೀಡುವಂತೆ ಪೀಡಿಸುತ್ತಿದ್ದ ಎನ್ನಲಾಗುತ್ತಿದೆ.
ಈ ಬಗ್ಗೆ ಉಡುಪಿ ಪೊಲೀಸ್ ಅಢೀಕ್ಷಕ ಪಿ ರಾಜೇಂದ್ರ ಪ್ರಸಾದ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಂತೋಷ್ ಕುಮಾರ್, ಸಹಾಯಕ ಪೊಲೀಸ್ ಅಧೀಕ್ಷಕ ಅಣ್ಣ ಮಲೈ ಇವರ ಮಾರ್ಗದರ್ಶನದಲ್ಲಿ ಕಾಪು ಪೊಲೀಸ್ ವೃತ್ತ ನಿರೀಕ್ಷಕ ಸುನೀಲ್ ವೈ ನಾಯಕ್ ಇವರ ನೇತೃತ್ವದಲ್ಲಿ ಶಿರ್ವ ಠಾಣಾ ಪಿಎಸ್ಐ ಅಶೋಕ್ ಪಿ ಮತ್ತು ಠಾಣಾ ಸಿಬ್ಬಂದಿಯವರಾದ ಶೈಲೇಶ್ , ಅಣ್ಣಪ್ಪ , ಸಂತೋಷ್, ಕಿಶೋರ್, ರಮೇಶ, ಪ್ರಕಾಶ್ ರವರು ಸೇರಿ ಸೂಕ್ತ ರೀತಿಯ ಕಾರ್ಯಚರಣೆ ನಡೆಸಿ ಕಟ್ಟಿಂಗೇರಿ ರಸ್ತೆ ಎಂಬಲ್ಲಿ ಆರೋಪಿತರನ್ನು ವಶಕ್ಕೆ ಪಡೆದಿದ್ದಾರೆ.
ಇದರ ಬಗ್ಗೆಎಲ್ಲಾ ಆಯಾಮಗಳಲ್ಲಿ ಶಿರ್ವ ಠಾಣೆಯಲ್ಲಿ ತನಿಖೆ ಮುಂದುವರಿಯುತ್ತಿದೆ.