ಕುಂದಾಪುರ : ಕಳೆದ ಶುಕ್ರವಾರ ರಾತ್ರಿ ಗಂಗೊಳ್ಳಿಯ ಜಾಮೀಯಾ ಕಾಂಪ್ಲೆಕ್ಸ್ ಎನ್ನುವ ಕಟ್ಟಡಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು 4-5 ದಿನ ಕಳೆದರೂ ಆರೋಪಿಗಳ ಬಂಧನವಾಗದ ಹಿನ್ನೆಲೆಯಲ್ಲಿ ಸ್ಥಳೀಯ ಜಮಾಯತ್ ಮುಸ್ಲಿಂಮಿನ್ ವಾಕ್ಪ್ ಹಾಗೂ ಇತರೇ ಮುಸ್ಲಿಂ ಸಂಘಟನೆ ಒಂದಾಗಿ ಬುಧವಾರ ಬೆಳಿಗ್ಗೆ ಗಂಗೊಳ್ಳಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಘಟನೆಯ ನಂತರ ಪೊಲೀಸ್ ಇಲಾಖೆಯಿಂದ ಯಾವುದೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿಲ್ಲ ಹಾಗೂ ನೈಜ ಆರೋಪಿಯನ್ನು ಈತನಕ ಬಂಧಿಸದ ಕಾರಣ ಮುಸ್ಲಿಂ ಸಮುದಾಯ ನ್ಯಾಯ ವಂಚಿತವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೈಜ ಆರೋಪಿ ಯಾರೆಂದು ತಿಳಿದಿದ್ದರೂ ಕೂಡ ಅವರನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಮೀನಾಮೇಷ ಎಣಿಸುತ್ತಿದೆ. ಇಂದು 24 ಗಂಟೆ ಒಳಗಾಗಿ ಪ್ರಕರಣದ ನೈಜ ಆರೋಪಿಯನ್ನು ಬಂಧಿಸಬೇಕು ಈ ಬಗ್ಗೆ ಜಮಾತ್ ನ ಮುಖಂಡರಿಗೆ ಲಿಖಿತ ಹೇಳಿಕೆ ನೀಡಬೇಕು ಇಲ್ಲವಾದಲ್ಲಿ ನಾಳೆ ಸಂಜೆ ಒಳಗಾಗಿ ಗಂಗೊಳ್ಳಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುವ ಮೂಲಕ ಬೃಹತ್ ಪ್ರತಿಭಟನೆ ಮಾಡುತ್ತೇವೆ. ಅಲ್ಲದೇ ಇಂತಹ ಘಟನೆ ಮರುಕಳಿಸದಂತೆ ಹಾಗೂ ಪ್ರಕರಣದಲ್ಲಿ ನಮಗೆ ಅನ್ಯಾಯವಾದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಈ ಸಂದರ್ಭ ಪ್ರತಿಭಟನಾಕಾರರು ಎಚ್ಚರಿಸಿದರು.
ಗಂಗೊಳ್ಳಿಯ ಜಾಮೀಯ ಕಾಂಪ್ಲೆಕ್ಸ್ ಎದುರಿನಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯಲ್ಲಿ ಮುಸ್ಲಿಂ ಮಹಿಳೆಯರು, ಯುವಕರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ನ್ಯಾಯ ಒದಗಿಸುವಂತೆ ಘೋಷಣೆ ಕೂಗಿದರು. ಪ್ರತಿಭಟನಾ ಮೆರವಣಿಗೆಯ ಬಳಿಕ ಗಂಗೊಳ್ಳಿಯ ಜಾಮೀಯ ಕಾಂಪ್ಲೆಕ್ಸ್ ಎದುರು ಜಮಾಯಿಸಿದ ಪ್ರತಿಭಟನಾಕಾರರೊಂದಿಗೆ ಕುಂದಾಪುರ ಉಪವಿಭಾಗಾಧಿಕಾರಿ ಚಾರುಲತಾ ಸೋಮಲ್, ಹಾಗೂ ಕುಂದಾಪುರ ತಹಶೀಲ್ದಾರ್ ಗಾಯತ್ರಿ ನಾಯಕ್, ಕುಂದಾಪುರ ವೃತ್ತ ನಿರೀಕ್ಷಕ ದಿವಾಕರ್ ಪಿ. ಎಮ್, ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ವೈಫಲ್ಯ ಕುರಿತು ಪ್ರತಿಭಟನಾಕಾರರು ಎಸಿ ಅವರ ಗಮನಕ್ಕೆ ತಂದರು. ಅಲ್ಲದೇ ಮುಂದಿನ 24 ಗಂಟೆ ಒಳಗಾಗಿ ಆರೋಪಿ ಬಂಧಿಸುವಂತೆ ಮನವಿ ನೀಡಿದರು. ಮನವಿ ಸ್ವೀಕರಿಸಿ ಮಾತನಾಡಿದ ಕುಂದಾಪುರ ಎಸಿ ಅವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ್, ಬ್ರಹ್ಮಾವರ ವೃತ್ತ ನಿರೀಕ್ಷಕ ಅರುಣ್ ನಾಯಕ್, ಡಿಸಿಐಬಿ ಇನ್ಪ್ ಕ್ಟರ್ ಜಯಶಂಕರ್ ಹಾಗೂ ವಿವಿಧ ಠಾಣೆಯ ಠಾಣಾಧಿಕಾರಿಗಳು ಸೇರಿದಂತೆ ನೂರಾರು ಪೊಲೀಸ್ ಸ್ಥಳದಲ್ಲಿ ಜಮಾಯಿಸಿದ್ದರು.