ಕುಂದಾಪುರ: ನ.10ರ ರಾತ್ರಿ ನಿಗೂಢವಾಗಿ ಮೃತಪಟ್ಟ ಮದೂರು ಗ್ರಾಮದ ಮದ್ರಾಣಿಯ ಸುನೀತಾ ಸಾವಿನ ಪ್ರಕರಣದ ಶಂಕಿತ ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೇರೂರು ಗ್ರಾಮದ ಆಲಗದ್ದೆಕೇರಿಯಲ್ಲಿ ಶುಕ್ರವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ನಡೆದಿದೆ.
ಯುವತಿ ಅಸಹಜ ಸಾವು ಪ್ರಕರಣದಲ್ಲಿ ಶಂಕಿತ ಆರೋಪಿಯಾಗಿರುವ ಹೇರೂರು ಗ್ರಾಮದ ಆಲಗದ್ದೆಕೇರಿ ಸಿದ್ದನಮನೆ ನಿವಾಸಿ ವಾಸು ನಾಯ್ಕ (26) ನೇಣಿಗೆ ಶರಣಾದಾತ.
ಘಟನೆಯ ವಿವರ: ಮುದೂರು ಗ್ರಾಮದ ಮದ್ರಾಣಿಯ ರಘು ಪೂಜಾರಿ ಅವರ ಪುತ್ರಿ ಸುನೀತಾ ನ.10ರಂದು ನಿಗೂಢವಾಗಿ ಸಾವಿಗೀಡಾಗದ್ದರು. ಸುನೀತಾ ಮತಪಟ್ಟ ರಾತ್ರಿಯೇ ಆಕೆಯ ಮೊಬೈಲ್ ಹತ್ತಿರದಲ್ಲಿರುವ ವಾಸು ನಾಯ್ಕ ಸಂಬಂಧಿಕರ ಮನೆಯಲ್ಲಿ ಸಿಕ್ಕಿತ್ತು. ಸುನೀತಾ ಸಾವಿನ ಪ್ರಕರಣ ತನಿಖೆ ನಡೆಸುತ್ತಿರುವ ಪೊಲೀಸರು ವಾಸುನನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿ ಕಳುಹಿಸಿಕೊಟ್ಟಿದ್ದರು. ಶುಕ್ರವಾರ ಬೆಳಗ್ಗೆ ಮತ್ತೆ ಆತನಿಗೆ ಕರೆ ಮಾಡಿದ ಪೋಲೀಸರು ಮಧ್ಯಾಹ್ನ ಠಾಣೆಗೆ ಬರುವಂತೆ ಹೇಳಿದ್ದರು ಎನ್ನಲಾಗಿದೆ. ಮಧ್ಯಾಹ್ನ ವಿಚಾರಣೆಗಾಗಿ ಠಾಣೆಗೆ ಹೋಗಬೇಕಾಗಿರುವುದರಿಂದ ಹೆದರಿ ಸುಮಾರು 11 ಗಂಟೆ ಸುಮಾರಿಗೆ ಮಲಗಿದ್ದಲ್ಲಿಂದ ಎದ್ದು ಹೋಗಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈತ ಕೆಲವು ವರ್ಷದ ಹಿಂದೆ ಹೈದರಾಬಾದಿನಲ್ಲಿ ಹೋಟೇಲ್ನಲ್ಲಿ ಕೆಲಸ ಮಾಡುತ್ತಿದ್ದಾಗ, ಹೈದರಾಬಾದ್ ಮೂಲದ ವಿವಾಹಿತ ಮಹಿಳೆಯನ್ನು ಮದುವೆಯಾಗಿದ್ದ ಊರಿಗೆ ಬಂದು ತಾಯಿಯೊಡನೆ ಇದ್ದನೆನ್ನಲಾಗಿದ್ದ. ಹೈದರಬಾದ್ ಮೂಲದ ಈತನ ಪತ್ನಿ ಒಡೆರಡು ವರ್ಷ ಈತನೊಂದಿಗೆ ಸಂಸಾರ ನಡೆಸಿ ಬಳಿಕ ಹೈದಾರಬಾದಿಗೆ ಹೋದವಳು ವಾಪಾಸಾಗಿಲ್ಲ. ಇದರ ನಂತರ ವಾಸು ತನ್ನ ಅಕ್ಕನ ಮನೆಯಲ್ಲಿಯೇ ವಾಸವಾಗಿ ಅಲ್ಲಿಯೇ ಕೂಲಿ ಕೆಲಸ ಮಾಡುತ್ತಿದ್ದ.
ಮೊನ್ನೆ ನಡೆದಿದ್ದ ಪ್ರತಿಭಟನೆ: ಯುವತಿಯ ಅನುಮಾನಾಸ್ಪದ ಸಾವಿನ ತನಿಖೆ ಚುರುಕುಗೊಳ್ಳಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳ ನೇತ್ರತ್ವದಲ್ಲಿ ಸಾರ್ವಜನಿಕರು ಕೊಲ್ಲೂರು ಠಾಣೆ ಎದುರು ಪ್ರತಿಭಟನೆಯನ್ನು ಮಾಡಿದ್ದರು. ಮೂರು ದಿನಗಳೊಳಗಾಗಿ ಆರೋಪಿಯನ್ನು ಬಂಧಿಸಬೇಕು ಎಂದು ಈ ಸಂದರ್ಭ ಆಗ್ರಹಿಸಲಾಗಿತ್ತು.