ಕರಾವಳಿ

ಶಾಲಾ ಕ್ರೀಡಾಕೂಟದಲ್ಲಿ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆಯನ್ನು ಪ್ರತ್ಯೇಕಿಸಲು ಎಸ್‌ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ ಆಗ್ರಹ

Pinterest LinkedIn Tumblr

ಕುಂದಾಪುರ: ಜಿಲ್ಲೆಯ ಎಲ್ಲಾ ವಲಯದ ಸರಕಾರಿ ಶಾಲೆಗಳಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಶಾಲಾ ಮಕ್ಕಳಿಗೆ ವಯೋಮಿತಿಯ ಮಾನದಂಡ ನೀಡಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಅವೈಜ್ಞಾನಿಕವಾಗಿ ಕ್ರೀಡಾಕೂಟ ನಡೆಸುತ್ತಿದ್ದು ಮಕ್ಕಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ‌ ಆಗ್ರಹಿಸಿ ಉಡುಪಿ ಜಿಲ್ಲಾ ಎಸ್‌ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯ ಉಡುಪಿ ಜಿಲ್ಲಾ ಘಟಕ ವತಿಯಿಂದ‌‌ ರಾಜ್ಯದ ಮುಖ್ಯಮಂತ್ರಿಗಳಿಗೆ ಕುಂದಾಪುರದ ತಹಶೀಲ್ದಾರ್ ಪ್ರದೀಪ್ ಕೆ. ಕುರುಡೇಕರ್ ಅವರ ಮೂಲಕ ಮನವಿ ಸಲ್ಲಿಸಲಾಗಿದೆ.

ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಸಮನ್ವಯ ವೇದಿಕೆ ಜಿಲ್ಲಾ ಅಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು, ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಎಸ್.ವಿ. ನಾಗರಾಜ್, ಕುಂದಾಪುರ ಪುರಸಭೆ ಘಟಕದ ಅಧ್ಯಕ್ಷ ಅಶ್ವತ್ ಕುಮಾರ್,ಕಾಪು ತಾಲೂಕು ಉಸ್ತುವಾರಿ ಅಷ್ಪಾಕ್ ಮೊದಲಾದವರು ಉಪಸ್ಥಿತರಿದ್ದರು.

ಮನವಿ ಏನು?:

ಶಾಲಾ ಕ್ರೀಡಾಕೂಟದಲ್ಲಿ ಹಿಂದಿನಂತೆಯೇ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆಯನ್ನು ಪ್ರತ್ಯೇಕ ವಿಭಾಗ ಮಾಡಿ ಕ್ರೀಡಾಕೂಟವನ್ನು ನಡೆಸಬೇಕು. ಕ್ರೀಡೆಯಲ್ಲಿ ಮಕ್ಕಳು ಸ್ಫೂರ್ತಿದಾಯಕವಾಗಿ ಭಾಗವಹಿಸಲು ಹಾಗೂ ಸಾಮರ್ಥ್ಯವಿರುವ ಕ್ರೀಡಾಪಟುಗಳನ್ನು ಎಳೆಯ ವಯಸ್ಸಿನಲ್ಲಿಯೇ ಗುರುತಿಸಿ ಪ್ರೋತ್ಸಾಹಿಸಲು ಪ್ರಾಥಮಿಕ ಶಾಲೆಯ ಕ್ರೀಡಾಕೂಟವನ್ನು ಪ್ರತ್ಯೇಗೊಳಿಸಬೇಕು. ಮತ್ತು ಪ್ರೌಢಶಾಲೆಯ ಮಕ್ಕಳು ಪ್ರಾಥಮಿಕ ಶಾಲಾ ಮಕ್ಕಳೊಂದಿಗೆ ಸ್ಪರ್ಧಿಸಿ ವಿಜಯಶಾಲಿಯಾಗುವುದನ್ನು ತಪ್ಪಿಸಬೇಕು. ಪ್ರಾಥಮಿಕ ಶಾಲೆಯ ಎಳೆಯ ವಿದ್ಯಾರ್ಥಿಗಳು ತನ್ನ ಕ್ರೀಡಾ ಸಾಧನೆಯಿಂದ ಸ್ಪೂರ್ತಿಗೊಂಡು ಮುಂದೆ ಹೆಚ್ಚಿನ ತರಬೇತಿಗೊಳಪಟ್ಟಾಗ, ಪ್ರೌಢ ಶಾಲೆಗೆ ಮಟ್ಟದಲ್ಲಿ ಕ್ರೀಯಾಶೀಲತೆಯಿಂದ ಮತ್ತು ತರಬೇತಿಯಿಂದ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಬೆಳೆಯುವ ಮೊಳಕೆಯನ್ನು ಚಿವುಟದೇ ಹಿಂದಿನತೆಯೇ ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿ ಪ್ರತ್ಯೇಕ ಕ್ರೀಡಾಕೂಟವನ್ನು ನಡೆಸಬೇಕೆಂದು ರಾಜ್ಯದ ಎಲ್ಲಾ ಸರಕಾರಿ ಶಾಲೆಗಳ ಎಸ್.ಡಿ.ಎಮ್.ಸಿ ಮತ್ತು ಪೋಷಕರ ಪರವಾಗಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

Comments are closed.