ಕುಂದಾಪುರ: ಕುಂದಾಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನಂಜಪ್ಪ ಎನ್. (59) ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ಮೂಲತಃ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರಾದ ನಂಜಪ್ಪ ಅವರು ಕಳೆದ ಅಗಸ್ಟ್ ತಿಂಗಳಿನಿಂದ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ನಿರೀಕ್ಷಕಾರಾಗಿ ಸೇವೆ ಸಲ್ಲಿಸುತ್ತಿದ್ದರು. ಸೋಮವಾರದಂದು ಕರ್ತವ್ಯದಲ್ಲಿರುವಾಗಲೇ ರಕ್ತದೊತ್ತಡದಿಂದ ಬಳಲುತ್ತಿದ್ದ ನಂಜಪ್ಪ ಅವರು ಚಿಕಿತ್ಸೆಗಾಗಿ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನಗಳ ಕಾಲ ಚಿಕಿತ್ಸೆಪಡೆದರೂಅವರ ಆರೋಗ್ಯದಲ್ಲಿ ಯಾವುದೇ ಗಣನೀಯ ಚೇತರಿಕೆ ಕಂಡುಬಂದಿರಲಿಲ್ಲ. ಬುಧವಾರ ರಾತ್ರಿ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
2003ರಲ್ಲಿ ಉಪನಿರೀಕ್ಷಕರಾಗಿ ಸೇವೆಗೆ ನಿಯುಕ್ತಿಯಾಗಿದ್ದ ನಂಜಪ್ಪ, ಶಿವಮೊಗ್ಗ, ದಾವಣಗೆರೆ, ಹಾವೇರಿ ಮೊದಲಾದೆಡೆ ಕರ್ತವ್ಯ ನಿರ್ವಹಿಸಿದ್ದು ಬಳಿಕ ಪೊಲೀಸ್ ನಿರೀಕ್ಷಕರಾಗಿ ಆಗಿ ಬಡ್ತಿ ಹೊಂದಿ, ಕಡೂರು, ಭದ್ರಾವತಿಯಲ್ಲಿ ನಾಲ್ಕು ವರ್ಷಗಳ ಕಾಲ ಗಂಗೊಳ್ಳಿ ಕರಾವಳಿ ಕಾವಲು ಪಡೆಯಲ್ಲಿ ಕರ್ತವ್ಯ ನಿರ್ವಹಿಸಿ 2024 ಆಗಸ್ಟ್ನಲ್ಲಿ ಕುಂದಾಪುರ ಠಾಣೆ ಪೊಲೀಸ್ ನಿರೀಕ್ಷಕರಾಗಿ ನಿಯುಕ್ತಿಗೊಂಡಿದ್ದರು.
ಇನ್ಸ್ಪೆಕ್ಟರ್ ನಿಧನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಂತಾಪ ಸೂಚಿಸಿದ್ದಾರೆ.
ಅಂತಿಮ ದರ್ಶನ: ಕುಂದಾಪುರ ಠಾಣೆಯ ಇನ್ಸಪೆಕ್ಟರ್ ನಂಜಪ್ಪ ಅವರ ಅಂತಿಮದರ್ಶನ ಪಡೆಯಲು ಮೇ.22 ಗುರುವಾರ ಬೆಳಿಗ್ಗೆ 10.15 ಕ್ಕೆ ಕುಂದಾಪುರ ಠಾಣೆಯ ಎದುರು ಅವಕಾಶ ಕಲ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Comments are closed.