ಕರ್ನಾಟಕ

ಕಾಂಗ್ರೆಸ್ ಸರಕಾರ ಬಂದಾಗೆಲ್ಲ ಆತಂಕವಾದ ತಾಂಡವ – ತನಿಖೆಗಳ ದಾರಿ ತಪ್ಪಿಸುವ ಕಾಂಗ್ರೆಸ್ : ನಳಿನ್ ಕುಮಾರ್ ಕಟೀಲ್ ಆರೋಪ

Pinterest LinkedIn Tumblr

ಮಂಗಳೂರು: ರಾಜ್ಯದಲ್ಲಿ ಯಾವಾಗೆಲ್ಲ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಬರುತ್ತದೋ ಆಗೆಲ್ಲ ಈ ರಾಜ್ಯದಲ್ಲಿ ಆತಂಕವಾದ ತಾಂಡವವಾಡುತ್ತದೆ. ಕಾಂಗ್ರೆಸ್ ಗೆ ಬಹುಮತ ಬಂದು ಮೆರವಣಿಗೆ ಮಾಡುವಾಗ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಮೊಳಗುತ್ತದೆ. ರಸ್ತೆಯಲ್ಲಿ ಮೊಳಗಿದ ಆ ಘೋಷಣೆ, ವಿಧಾನ ಸೌಧದೊಳಗೂ ವ್ಯಾಪಿಸುತ್ತದೆ. ದೇಶವಿರೋಧಿ ಹೇಳಿಕೆ ಕೊಟ್ಟವರನ್ನು ಬಂಧಿಸಬೇಕು ಎಂದು ಬಿಜೆಪಿ ಆಗ್ರಹಿಸಿದರೂ ಅವರನ್ನು ಕಾಂಗ್ರೆಸ್ ಸರಕಾರ ಬಂಧಿಸಿಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಇಂದು ದ.ಕ.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಸರಕಾರದ ತುಷ್ಟೀಕರಣ ನೀತಿ, ಅಲ್ಪಸಂಖ್ಯಾತರ ಓಲೈಕೆಯ ಪರಿಣಾಮ ಇವತ್ತು ಹಿಂದೂಗಳ ಮೇಲೆ ಅತಿ ಹೆಚ್ಚು ಹಲ್ಲೆಗಳು ಮತ್ತು ಹತ್ಯೆಗಳು ಪ್ರಾರಂಭವಾಗಿವೆ. ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಪೊರೇಟರ್ ನಿರಂಜನ್ ಹಿರೇಮಠರ ಪುತ್ರಿ ನೇಹಾ ಹಿರೇಮಠ ಎಂಬ ವಿದ್ಯಾರ್ಥಿನಿಯ ಹತ್ಯೆ ನಡೆದಿದೆ. ಆ ಹತ್ಯೆಯ ಹಿನ್ನೆಲೆಯನ್ನು ತನಿಖೆ ಮಾಡುವುದಕ್ಕೆ ಮೊದಲೇ ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು ಹಗುರವಾದ ಹೇಳಿಕೆ ನೀಡಿದ್ದಾರೆ.

ಇದು ಸಿದ್ದರಾಮಯ್ಯನವರ ಕಾಯಂ ಚಾಳಿ. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟವಾದಾಗ ಡಿ.ಕೆ. ಶಿವಕುಮಾರ್ ಇದೇ ರೀತಿ ಹೇಳಿಕೆ ಕೊಟ್ಟಿದ್ದರು. ಆ ಬಳಿಕ ಆತನಿಗೆ ಉಗ್ರಗಾಮಿ ಸಂಘಟನೆ ಜತೆಗೆ ಲಿಂಕ್ ಇದೆ ಎಂಬುದು ತನಿಖೆಯಿಂದ ಸಾಬೀತಾದಾಗ ವಿಷಯಾಂತರ ಮಾಡುವ ಕೆಲಸ ಮಾಡಿದರು. ಅವತ್ತು ಡಿಜಿಪಿಯವರು ಕುಕ್ಕರ್ ಬಾಂಬ್ ಪ್ರಕರಣ ಭಯೋತ್ಪಾದನಾ ಕೃತ್ಯ ಎಂದು ಹೇಳಿದಾಗ ಡಿಕೆಶಿ ಅವರನ್ನೂ ತರಾಟೆಗೆ ತೆಗೆದುಕೊಂಡಿದ್ದರು. ಹೀಗೆ ನಿರಂತರವಾಗಿ ಈ ಕೃತ್ಯಗಳು ನಡೆಯುವಾಗ ತನಿಖೆಯನ್ನು ದಾರಿ ತಪ್ಪಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ನಳಿನ್ ನುಡಿದರು.

ತುಷ್ಟೀಕರಣದ ನೀತಿ:

ಡಿಜೆ ಹಳ್ಳಿ, ಕೆ.ಜಿ ಹಳ್ಳಿ ಪ್ರಕರಣ ನಡೆದಾಗ ಕಾಂಗ್ರೆಸ್ ತನಗೆ ಯಾವುದೇ ಸಂಬಂಧ ಇಲ್ಲ ಎಂದು ಹೇಳಿತು. ಮೊನ್ನೆ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಆದಾಗಲೂ ಅದನ್ನು ತಿರುಚುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡಿತು. ಉದಾಹರಣೆಗೆ ಅಖಂಡ ಶ್ರೀನಿವಾಸ ಮೂರ್ತಿ ಕಾಂಗ್ರೆಸ್‌ನ ಶಾಸಕರಾಗಿದ್ದರು. ಅವರ ಮನೆಗೆ ಬೆಂಕಿ ಹಚ್ಚುವ ಕೆಲಸ ನಡೆದಾಗಲೂ ಕಾಂಗ್ರೆಸ್‌ನ ಯಾವೊಬ್ಬ ನಾಯಕನೂ ಅವರ ಮನೆಗೆ ಹೋಗಲಿಲ್ಲ, ಸಾಂತ್ವನ ಹೇಳಲಿಲ್ಲ. ಆಗ ನಾನು ರಾಜ್ಯಾಧ್ಯಕ್ಷನಾಗಿದ್ದೆ. ಡಿಜೆ ಹಳ್ಳಿ ಕೆಜಿ ಹಳ್ಳಿಗೆ ಹೋಗಿದ್ದೆ. ಅಖಂಡ ಶ್ರೀನಿವಾಸ ಮೂರ್ತಿ ಮನೆಗೂ ಹೋಗಿದ್ದೆ. ಮೊನ್ನೆ ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಆದಾಗ ಕಾಂಗ್ರೆಸ್‌ನ ಯಾವ ನಾಯಕನೂ ತಮ್ಮದೇ ಕಾರ್ಪೊರೇಟರ್ ಮನೆಗೆ ಹೋಗಿ ಸಾಂತ್ವನ ಹೇಳಲಿಲ್ಲ. ಧೈರ್ಯ ತುಂಬುವ ಕೆಲಸ ಮಾಡಿಲ್ಲ ಎಂದು ನಳಿನ್ ವಿವರಿಸಿದರು.

ಈ ಘಟನೆಯನ್ನು ಸಿಬಿಐ ತನಿಖೆಗೆ ಕೊಡಬೇಕು ಎಂದು ಬಿಜೆಪಿ ಒತ್ತಾಯಿಸುತ್ತದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಈ ರೀತಿಯ ಘಟನೆಗಳು ಜಾಸ್ತಿಯಾಗುತ್ತವೆ. ಕಳೆದ 10 ತಿಂಗಳುಗಳಿಂದ ನಿರಂತರವಾಗಿ ರಾಜ್ಯದ ಹಲವೆಡೆ ಇಂತಹ ಘಟನೆಗಳು ನಡೆಯುತ್ತಲೇ ಬಂದಿವೆ. ಬೆಳಗಾವಿಯಲ್ಲಿ ಸ್ವಾಮೀಜಿಯ ಹತ್ಯೆ ಇರಬಹುದು, ಇದ್ಯಾವುದನ್ನೂ ಕಾಂಗ್ರೆಸ್ ಸರಕಾರ ಪೂರ್ಣ ತನಿಖೆ ನಡೆಸಿಲ್ಲ. ಹಿಂದೆ ನಮ್ಮ ಸರಕಾರ ಇದ್ದಾಗ ಶಿವಮೊಗ್ಗದಲ್ಲಿ ಹರ್ಷ ಹತ್ಯೆ, ಮಂಗಳೂರಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ಆಯಿತು. ತಕ್ಷಣ ನಮ್ಮ ಸರಕಾರದಿಂದ ಅವರ ಮನೆಗೆ ತೆರಳಿ ಸಾಂತ್ವನ ಹೇಳುವ, ಪರಿಹಾರ ನೀಡುವ ಕೆಲಸ ಮಾಡಲಾಯಿತು. ಇವತ್ತು ನೇಹಾ ಕುಟುಂಬಕ್ಕೂ ಸಾಂತ್ವನ ಪರಿಹಾರ ನೀಡಬೇಕು ಎಂದು ನಳಿನ್ ಒತ್ತಾಯಿಸಿದರು.

ಕಾಂಗ್ರೆಸ್ ಅಧಿಕಾರಕ್ಕೋಸ್ಕರ ಎಸ್‌ಡಿಪಿಐ ಜತೆ ಹೊಂದಾಣಿಕೆ ಮಾಡಿಕೊಂಡಿದೆ. ತೋರಿಕೆಗಾಗಿ ಎಸ್‌ಡಿಪಿಐಗೆ ಬೈಯ್ಯುತ್ತಿದ್ದ ಕಾಂಗ್ರೆಸ್ ಇಂದು ಬಹಿರಂಗವಾಗಿಯೇ ಆ ಪಕ್ಷದ ಜತೆ ಮೈತ್ರಿ ಮಾಡಿಕೊಂಡಿದೆ. ಚುನಾವಣೆಗೆ ಒಟ್ಟಾಗಿ ಹೋಗುತ್ತಿದೆ. ಪ್ರವೀಣ್ ನೆಟ್ಟಾರು ಹತ್ಯೆ ಆದ ಸಂದರ್ಭದಲ್ಲಿ ಎನ್‌ಐಎ ತನಿಖೆ ನಡೆಸಿದಾಗ ಆ ಕೃತ್ಯದಲ್ಲಿ ಪಿಎಫ್‌ಐ ಭಾಗಿಯಾಗಿರುವುದು ಸ್ಪಷ್ಟವಾಗಿ ಬೆಳಕಿಗೆ ಬಂತು. ಆ ಕೂಡಲೇ ಕೇಂದ್ರ ಸರಕಾರ ದೇಶದ್ರೋಹಿ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿತು. ಅದರ ರಾಜಕೀಯ ಮುಖವಾದ ಎಸ್‌ಡಿಪಿಐ ಜತೆಗೆ ಈಗ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿದೆ.

ನಳಿನ್ ಮಾತಿನ ಮುಖ್ಯಾಂಶಗಳು:

ಇಡೀ ದೇಶದಲ್ಲಿ ಆ ತನಿಖೆ ಆಧಾರದಲ್ಲಿ ಮೋದಿ ಸರಕಾರ ಪಿಎಫ್‌ಐ ನಿಷೇಧ ಮಾಡಿದೆ. ಅಂತಹ ದಿಟ್ಟವಾದ ತೀರ್ಮಾನ ತೆಗೆದುಕೊಂಡ ಕಾರಣ ಅನಂತರ ಅಂತಹ ಘಟನೆಗಳು ಕಡಿಮೆಯಾಗಿವೆ. ಆದರೆ ಇವತ್ತು ಸಿದ್ದರಾಮಯ್ಯ ಸರಕಾರದ ತುಷ್ಟೀಕರಣ ನೀತಿಯಿಂದಾಗಿ ಇಂತಹ ಘಟನೆಗಳು ಹೆಚ್ಚು ಹೆಚ್ಚಾಗಿ ನಡೆಯುತ್ತಿವೆ. ಕಾರಣ, ತಾವು ಏನೇ ಮಾಡಿದರೂ ತಪ್ಪಿಸಿಕೊಳ್ಳಬಹುದು ಎಂಬ ಧೈರ್ಯವನ್ನು ಸಮಾಜ ಘಾತುಕ ಶಕ್ತಿಗಳಲ್ಲಿ ಸಿದ್ದರಾಮಯ್ಯ ಸರಕಾರ ತುಂಬಿದೆ.

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ – ಈ ದೇಶದ ಸಂಪತ್ತನ್ನು ಮುಸ್ಲಿಮರಿಗೆ ಹಂಚುತ್ತೇವೆ ಎಂದು ಹೇಳಿದ್ದಾರೆ. ಈ ದೇಶದಲ್ಲಿ ಮೊದಲ ಹಕ್ಕು ಮುಸ್ಲಿಮರಿಗೆ ಸೇರಿದ್ದು ಎಂದು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಹೇಳುತ್ತಾರೆ. ಇಲ್ಲಿರುವ ಸಂಪತ್ತಿನಲ್ಲಿ ಬಹುಪಾಲನ್ನು ಅವರಿಗೆ ಹಂಚಬೇಕು ಎನ್ನುತ್ತಾರೆ. ಮೊನ್ನೆ ರಾಹುಲ್ ಗಾಂಧಿ ಕೂಡ ಹೇಳಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ದೇಶದ ಸಂಪತ್ತಿನಲ್ಲಿ ಸಮಾನ ಹಂಚಿಕೆ ಮಾಡುತ್ತೇವೆ ಎನ್ನುತ್ತಾರೆ. ಅಂದರೆ ಇಲ್ಲಿರುವ ಜನರ ಒಡವೆಗಳನ್ನು ಆಸ್ತಿಯನ್ನು ವಶಪಡಿಸಿಕೊಂಡು ಮುಸ್ಲಿಮರಿಗೆ ಹಂಚುತ್ತೇವೆ ಎನ್ನುವ ದಾಷ್ರ್ಟ್ಯ ಪ್ರದರ್ಶಿಸುತ್ತಾರೆ. ನಮ್ಮ ತಾಯಂದಿರು, ನಮ್ಮ ಸೋದರಿಯರು ಸಂಗ್ರಹ ಮಾಡಿರುವ ಸಂಪತ್ತನ್ನು ವಶಪಡಿಸಿಕೊಂಡು ಅನ್ಯ ಕೋಮಿನವರಿಗೆ ಹಂಚುತ್ತೇವೆ ಎನ್ನುವ ಮಾತನಾಡುತ್ತಾರೆ ರಾಹುಲ್ ಗಾಂಧಿ. ಈಗಾಗಲೇ ಸಿದ್ದರಾಮಯ್ಯ ಈ ರಾಜ್ಯದಲ್ಲಿ ಇಂತಹ ಕಾರ್ಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಬಂದ ನಂತರ ಇಲ್ಲಿಯ ಬಹುಸಂಖ್ಯಾತ ಹಿಂದುಗಳಿಗೆ ಬದುಕು ಕಷ್ಟವಾಗಿದೆ.

ತನಿಖೆಗಳ ದಾರಿ ತಪ್ಪಿಸುತ್ತಿದೆ ಕಾಂಗ್ರೆಸ್:

ಹಲ್ಲೆಗಳ ಬಗ್ಗೆ ತನಿಖೆ ಮಾಡುತ್ತಿಲ್ಲ. ಬಾಂಬ್ ಸ್ಫೋಟದ ತನಿಖೆ ಮಾಡುತ್ತಿಲ್ಲ. ಇವತ್ತು ಎನ್‌ಐಎ ಸಕ್ರಿಯವಾಗಿ ಇರುವುದರಿಂದ ನಾವು ಬದುಕಿದ್ದೇವೆ. ಕಾಂಗ್ರೆಸ್ಸೇ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೆ, ಎನ್‌ಐಎ ಸಂಸ್ಥೆಯೇ ಇಲ್ಲದಿರುತ್ತಿದ್ದರೆ, ಏನಾಗುತ್ತಿತ್ತು ಯೋಚಿಸಿ. ವಯನಾಡಿನಲ್ಲಿ ಆನೆ ತುಳಿತಕ್ಕೆ ಒಳಗಾದವರಿಗೆ ಕರ್ನಾಟಕ ಸರಕಾರ 15 ಲಕ್ಷ ಪರಿಹಾರ ಕೊಡುತ್ತದೆ. ಆದರೆ ಹತ್ಯೆಗೊಳಗಾದ ಕನ್ನಡಿಗರ ಕುಟುಂಬಕ್ಕೇ ಈ ಸರಕಾರ ಪರಿಹಾರ ನೀಡುತ್ತಿಲ್ಲ. ಕೊಡಗಿನಲ್ಲಿ ಸಿದ್ದಾಪುರದಲ್ಲಿ ಮನೆ ಮನೆ ಸಂಪರ್ಕ ಮಾಡುವ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಕಾರು ಹರಿಸಿ ಹತ್ಯೆ ಮಾಡಲಾಯಿತು. ಆ ತನಿಖೆಯನ್ನೂ ಮಾಡಬೇಕು. ಅದರ ಹಿಂದೆ ಏನಿದೆ, ಅದು ಅಪಘಾತವೆ, ಅಪಘಾತ ಮಾಡಿ ಪಲಾಯನವೆ? ಎಂಬುದು ತನಿಖೆಯಾಗಬೇಕಿದೆ.

ರಾಜ್ಯದಲ್ಲಿ ಚುನಾವಣೆಯ ವಾತಾವರಣ ಬಿಜೆಪಿ ಪರವಾಗಿದೆ. ದೇಶದಲ್ಲಿ ಮತ್ತೊಮ್ಮೆ ಮೋದಿ ಅಲೆ ಇದೆ. ಕೇರಳದಲ್ಲಿ ಪ್ರವಾಸ ಮಾಡಿ ಬಂದಾಗ, ಅಲ್ಲಿನ ಜನತೆ ಕೂಡ ಮೋದಿಯವರ ಉತ್ತಮ ಆಡಳಿತ ಮೆಚ್ಚಿಕೊಂಡು ಬಿಜೆಪಿಯನ್ನು ಆಶೀರ್ವದಿಸಲು ಮುಂದಾಗಿದ್ದಾರೆ. ಮೋದಿ ಅವರು ಕೊಟ್ಟಿರುವ ಹತ್ತುವರ್ಷಗಳ ಅಭಿವೃದ್ಧಿಪರ ಆಡಳಿತ, ಜನ ಕಲ್ಯಾಣ ಯೋಜನೆಗಳು ಜನರ ಮನಸ್ಸಿಗೆ ಮುಟ್ಟಿವೆ. ವಿಶೇಷವಾಗಿ ಭ್ರಷ್ಟಾಚಾರ ರಹಿತ ಆಡಳಿತ, ಭಯೋತ್ಪಾದನೆ ಮುಕ್ತ ದೇಶವನ್ನು ನಿರ್ಮಾಣ ಮಾಡಿರುವುದು, ಮತ್ತು ಜಗತ್ತಿನಲ್ಲಿ ಭಾರತಕ್ಕೆ ಇಂದು ದೊರೆಯುವ ಗೌರವ- ಇವೆಲ್ಲ ದೇಶದ ಜನತೆಗೆ ಮನವರಿಕೆಯಾಗಿದೆ. ಬಿಜೆಪಿ ಪರ ವಾತಾವರಣ ನಿರ್ಮಾಣವಾಗಿದೆ.

ಚುನಾವಣೆ ಬಂದಾಗ ಕಾಂಗ್ರೆಸ್ ಬಿಜೆಪಿ ವಿರುದ್ಧ, ಪ್ರಧಾನಿ ಮೋದಿಯವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತದೆ. ಈಗಾಗಲೇ ಕೇಂದ್ರ ಸರಕಾರ www.shetapatra.in ಎಂಬ ವೆಬ್‌ ತಾಣದಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. ಕರ್ನಾಟಕ ರಾಜ್ಯಕ್ಕೆ ಕೊಟ್ಟಿರುವ ಎಲ್ಲ ಯೋಜನೆಗಳು ಸ್ಕೀಮ್‌ಗಳ ವಿವರವನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಮನಮೋಹನ್ ಸಿಂಗರ ಹತ್ತು ವರ್ಷಗಳ ಆಡಳಿತದಲ್ಲಿ ಕರ್ನಾಟಕಕ್ಕೆ ಬಂದಿರುವುದು ಕೇವಲ 80 ಸಾವಿರ ಕೋಟಿ ರೂ ಅನುದಾನ. ಪ್ರಧಾನಿ ನರೇಂದ್ರ ಮೋದಿ ಅವರ ಹತ್ತು ವರ್ಷಗಳ ಅವಧಿಯಲ್ಲಿ 2.5 ಲಕ್ಷ ಕೋಟಿ ರೂ.ಗಳ ಅನುದಾನವನ್ನು ಕರ್ನಾಟಕಕ್ಕೆ ನೀಡಲಾಗಿದೆ. ಅಂದರೆ ಯುಪಿಎ ಅವಧಿಯ ಅನುದಾನಕ್ಕಿಂತ ಎರಡೂವರೆ ಪಟ್ಟಿಗಿಂತಲೂ ಹೆಚ್ಚು ಅನುದಾನ ಕರ್ನಾಟಕಕ್ಕೆ ಬಂದಿದೆ.

ಈ 75 ವರ್ಷಗಳಲ್ಲಿ ಮಾಡಿರುವ ಸಾಧನೆ- ಈ ದೇಶವನ್ನು ರಾಜ್ಯವನ್ನು ಲೂಟಿ ಮಾಡಿದ್ದು, ಕಾಂಗ್ರೆಸ್‌ನ ದಾಖಲೆ. ಹಿಂದೆ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ ಅವರು ಕೇಂದ್ರದ ರೈಲ್ವೆ ಸಚಿವರಾಗಿದ್ದಾಗ ಎಷ್ಟು ಅನುದಾನ ಬಂದಿದೆ, ಮೋದಿ ಸರಕಾರದಲ್ಲಿ ಎಷ್ಟು ಅನುದಾನ ಬಂದಿದೆ ಎಂಬುದನ್ನು ಒಮ್ಮೆ ತುಲನೆ ಮಾಡಿ ನೋಡಿ. ಆಸ್ಕರ್ ಫರ್ನಾಂಡಿಸ್ ಸಚಿವರಾಗಿದ್ದಾಗ ರಾಷ್ಟ್ರೀಯ ಹೆದ್ದಾರಿಗೆ ಎಷ್ಟು ಅನುದಾನ ಬಂದಿದೆ? ಇವತ್ತು ನಿತಿನ್ ಗಡ್ಕರಿ ಅವರ ಅವಧಿಯಲ್ಲಿ ಎಷ್ಟು ಹಣ ಬಂದಿದೆ ಒಮ್ಮೆ ದಯವಿಟ್ಟು ಹೋಲಿಸಿ ನೋಡಿ. ನಿಮ್ಮದೇ ಸರಕಾರ, ನಿಮ್ಮದೇ ಅಧಿಕಾರಿಗಳು ಇದ್ದಾರೆ. ದಾಖಲೆಗಳನ್ನು ತರಿಸಿ ನೋಡಿ ಎಂದು ನಳಿನ್ ಆಗ್ರಹಿಸಿದರು.

ಬಾಂಬ್ ಕೊಟ್ಟ ಕಾಂಗ್ರೆಸ್‌ಗೆ ಚೊಂಬು ಗ್ಯಾರಂಟಿ:

ಕರ್ನಾಟಕ ರಾಜ್ಯಕ್ಕೆ ನರೇಂದ್ರ ಮೋದಿಯವರು ಅಕ್ಷಯ ಪಾತ್ರೆಯನ್ನು ಕೊಟ್ಟಿದ್ದಾರೆ. ಆ ಕಾರಣಕ್ಕೆ ರಾಜ್ಯದ ಜನ ಕಾಂಗ್ರೆಸ್ ಕೈಗೆ ಚೊಂಬು ನೀಡುವುದು ಗ್ಯಾರಂಟಿ. ನೀವು ಈ ರಾಜ್ಯಕ್ಕೆ ಬಾಂಬ್ ಕೊಟ್ಟವರು. ಹಾಗಾಗಿ ಜನತೆ ನಿಮಗೆ ಚೊಂಬು ಕೊಡುವುದು ಗ್ಯಾರಂಟಿ. ಸಿದ್ದರಾಮಯ್ಯ ಸರಕಾರ ಬಂದು ಒಂದು ವರ್ಷವಾಯ್ತು. ಈ ಸರಕಾರ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಗೆ ಕೊಟ್ಟ ಅನುದಾನವೆಷ್ಟು ಬಹಿರಂಗಪಡಿಸಿ. ನಮ್ಮ ಶಾಸಕರಿಗಲ್ಲ, ಕಾಂಗ್ರೆಸ್ ಶಾಸಕರಿಗೆ ಕೊಟ್ಟ ಹಣವನ್ನಾದರೂ ಬಹಿರಂಗಪಡಿಸಿ ನೋಡೋಣ.. ನಮ್ಮ ಶಾಸಕರು ಇಲ್ಲಿದ್ದಾರೆ. ಅವರಲ್ಲಿ ಕೇಳಿದರೆ ಗೊತ್ತಾಗುತ್ತದೆ. ಶಾಸಕರ ನಿಧಿಗೆ ಹಣ ಬಂದಿಲ್ಲ. ತಲಾ 2 ಕೋಟಿ ರೂ ನೀಡಬೇಕಿತ್ತು. ಅದು ಬಂದಿಲ್ಲ. ಸುಳ್ಳು ಗ್ಯಾರಂಟಿ ಘೋಷಣೆಗಳ ನೆಪದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಈ ಸರಕಾರದಲ್ಲಿ ಹಣವಿಲ್ಲ. ಕಾಂಗ್ರೆಸ್ ಸರಕಾರ ದಿವಾಳಿಯಾಗಿದೆ. ಗ್ಯಾರಂಟಿಯನ್ನೂ ಸಮರ್ಪಕವಾಗಿ ಕೊಡುತ್ತಿಲ್ಲ. ನೀವೇ ಘೋಷಣೆ ಮಾಡಿದ ಗ್ಯಾರಂಟಿಯನ್ನಾದರೂ ಸಮರ್ಪಕವಾಗಿ ಕೊಡಿ ಎಂದು ನಾವು ಒತ್ತಾಯ ಮಾಡುತ್ತೇವೆ.

ಕೇರಳ ಸರಕಾರವಂತೂ ದಿವಾಳಿಯಾಗಿದೆ. ಈಗ ಕರ್ನಾಟಕದ ಕಾಂಗ್ರೆಸ್ ಸರಕಾರವೂ ರಾಜ್ಯವನ್ನು ದಿವಾಳಿಯ ಅಂಚಿಗೆ ಕೊಂಡೊಯ್ಯುತ್ತಿದೆ. ಹೀಗೆಯೇ ಮುಂದುವರಿದರೆ ಮುಂದಿನ 3 ವರ್ಷದಲ್ಲಿ ದಿವಾಳಿ ಗ್ಯಾರಂಟಿ. ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಇವರಲ್ಲಿ ಹಣವಿಲ್ಲ. ಕುಡಿಯುವ ನೀರಿನ ಪೂರೈಕೆಗೆ ಹಣವಿಲ್ಲ. ಮಠ ಮಂದಿರಗಳಿಗೆ, ಶಾಲೆಗಳ ಅಭಿವೃದ್ಧಿಗೆ ಅನದಾನವಿಲ್ಲ, ಆಸ್ಪತ್ರೆಗಳ ಮೇಲ್ದರ್ಜೆಎಗೇರಿಸಲು ಅನುದಾನವಿಲ್ಲ. ಕಾಂಗ್ರೆಸ್‌ನ ಮಂತ್ರಿಗಳ ಮನೆ ಬಾಗಿಲಿಗೆ ಮಾತ್ರ ಅನುದಾನ ಹೋಗುತ್ತಿದೆ. ಕಾಂಗ್ರೆಸ್ಸಿನ ಶಾಸಕರೇ ಈ ಮಾತು ಹೇಳುತ್ತಿದ್ದಾರೆ.

ಈ ಜಿಲ್ಲೆಯ ಅಭಿವೃದ್ಧಿಗೆ ಕಳೆದ 33 ವರ್ಷಗಳಲ್ಲಿ ಬಿಜೆಪಿಯ ಲೋಕಸಭಾ ಸದಸ್ಯರಿಗೆ ಆಶೀರ್ವಾದ ಮಾಡಿದ್ದಾರೆ.12 ವರ್ಷಗಳ ಕಾಲ ಧನಂಜಯ ಕುಮಾರ್, 5 ವರ್ಷಗಳ ಕಾಲ ಡಿ.ವಿ ಸದಾನಂದ ಗೌಡರು, 15 ವರ್ಷಗಳ ಕಾಲ ನನಗೆ ಆಶೀರ್ವಾದ ಮಾಡಿದ್ದಾರೆ. ಮಂಗಳೂರು ಬಂದರು, ವಿಮಾನ ನಿಲ್ದಾಣ ಶ್ರೀನಿವಾಸ ಮಲ್ಯರು ಮಾಡಿದ್ದು ಎಂಬುದನ್ನು ನಾವು ಒಪ್ಪತ್ತೇವೆ. ಅವರನ್ನು ಆರಾಧಿಸುತ್ತೇವೆ. ಆದರೆ ಅವರ ಕಾಲದಲ್ಲಿ ನಿರ್ಮಾಣಗೊಂಡ ಯೋಜನೆಗಳನ್ನು ಅನಂತರದ ಕಾಲದಲ್ಲಿ ಕಾಂಗ್ರೆಸ್‌ನವರು ಏನಾದರೂ ಅಭಿವೃದ್ಧಿ ಮಾಡಿದ್ದಾರೆಯೆ? ಅವುಗಳ ಅಭಿವೃದ್ಧಿಗೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಪ್ರಗತಿ ಹೊಂದಬೇಕಾದರೆ, ಹೊಸ ರನ್‌ವೇಗಳನ್ನು ಮಾಡಬೇಕಾದರೆ ಬಿಜೆಪಿ ಸರಕಾರವೇ ಬರಬೇಕಾಯಿತು. ಕಾಂಗ್ರೆಸ್‌ನವರು ಅದಕ್ಕೆಲ್ಲ ಅಡ್ಡಗಾಲು ಹಾಕಿದವರು. ಇವತ್ತಿಗೂ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಗಾಲು ಹಾಕುತ್ತಿರುವವವರು ಕಾಂಗ್ರೆಸ್ ಪಕ್ಷದವರು. ಇದನ್ನು ನೀವೇ ಪ್ರತ್ಯಕ್ಷವಾಗಿ ಕಾಣುತ್ತಿದ್ದೀರಿ ಎಂದು ನಳಿನ್ ವಿವರಿಸಿದರು.

ಮಂಗಳೂರು ಅಭಿವೃದ್ಧಿ ವಿಚಾರ:

ಹಿಂದೆ ಸುರತ್ಕಲ್‌ನಲ್ಲಿ ಕೆಆರ್‍‌ಇಸಿ ಇತ್ತು. ಅದನ್ನು ಎನ್‌ಐಟಿಕೆ ಮಾಡಿ ಅಭಿವೃದ್ಧಿಪಡಿಸಿದವರು ನಾವು. ಮಂಗಳೂರು ಬಂದರನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿದ್ದು ಬಿಜೆಪಿ ಕಾಲದಲ್ಲಿ. ಧನಂಜ ಕುಮಾರ್ ಕಾಲದಲ್ಲಿ ಆಯ್ತು ಬಳಿಕ ಈಗ ಮೋದಿ ಸರಕಾರ 4000 ಕೋಟಿ ರೂ ಅನುದಾನ ನೀಡಿ ಅಭಿವೃದ್ಧಿ ಮಾಡಿದೆ. ಅವರೇ ಶಿಲಾನ್ಯಾಸ ಮಾಡಿದ್ದರು. ಈಗ ಮಾದರಿಯಾದ ಪೋರ್ಟ್ ಆಗಿದೆ. ಇಮಾನ ನಿಲ್ದಾಣ ಈಗ 24 ಗಂಟೆ ಚಾಲನೆಯಲ್ಲಿದೆ. ನಾನು ಸಂಸದನಾದ ಆರಂಭದ ಹೊತ್ತಿಗೆ ಮಧ್ಯಾಹ್ನದ ವರೆಗೆ ಮಾತ್ರ ಕಾರ್ಯಾಚರಣೆ ಇತ್ತು. ಅಂತಾರಾಷ್ಟ್ರೀಯ ವಿಮಾನಗಳು ಹೋಗುತ್ತಿವೆ. ಮುಂದಕ್ಕೆ ಇನ್ನಷ್ಟು ರನ್ ವೇ ವಿಸ್ತರಣೆಗೆ ಅಡ್ಡಿ ಮಾಡಿದವರು ಇದೇ ಕಾಂಗ್ರೆಸ್. 84 ಎಕರೆ ಭೂಸ್ವಾಧೀನ ಬಾಕಿ ಇದೆ. ಅದು ಪೂರ್ಣಗೊಂಡರೆ ವಿಮಾನ ನಿಲ್ದಾಣದ ವಿಸ್ತರಣೆ ಇನ್ನಷ್ಟು ಸುಗಮವಾಗುತ್ತದೆ. ಅದನ್ನು ಆಗದಂತೆ ಈಗಲೂ ತಡೆಯುತ್ತಿರುವವರು ಕಾಂಗ್ರಸ್‌ನವರು ಎಂದು ಸಂಸದರು ಆರೋಪಿಸಿದರು.

ವಿಮಾನ ನಿಲ್ದಾಣ, ಬಂದರು, ರೈಲ್ವೇ ಅಭಿವೃದ್ಧಿ ಕಾರ್ಯಗಳು ಮೋದಿ ಸರಕಾರದಲ್ಲಿ ಆಗಿದೆ. ಮಂಗಳೂರು ಸೆಂಟ್ರಲ್ ನಿಲ್ದಾಣ ವಿಶ್ವದರ್ಜೆಯ ನಿಲ್ದಾಣವಾಗಿ ಅಭಿವೃದ್ಧಿಯಾಗುತ್ತಿದೆ. ಎರಡು ಹೊಸ ಪ್ಲಾಟ್‌ಫಾರ್ಮ್‌ಗಳನ್ನು ನಾವು ನಿರ್ಮಿಸಿದ್ದೇವೆ. ಯಾಕೆ ಕಾಂಗ್ರೆಸ್ ಇದ್ದಾಗ ಆಗಲಿಲ್ಲ? ಎಂದ ನಳಿನ್ ಪ್ರಶ್ನಿಸಿದರು. ಸುಬ್ರಹ್ಮಣ್ಯ ರೈಲ್ವೆ ನಿಲ್ದಾಣ 24 ಕೋಟಿ, ಬಂಟ್ವಾಳದ ರೈಲು ನಿಲ್ದಾಣ 25 ಕೋಟಿ ರೂ.ಗಳಲ್ಲಿ ಅಭಿವೃದ್ಧಿ ಆಗುತ್ತಿದೆ. ಮಂಗಳೂರು ಜಂಕ್ಷನ್ 350 ಕೋಟಿ ವೆಚ್ಚದಲ್ಲಿ ವಿಶ್ವದರ್ಜೆ ಕಾಮಗಾರಿ ಆರಂಭವಾಗಿದೆ ಎಂದರು.

ಹೇಗಿತ್ತು ಮಂಗಳೂರು... ಮನಪಾ ಬಹಳ ವರ್ಷಗಳ ಕಾಳ ಆಡಳಿತ ನಿಷ್ಕ್ರಿಯವಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರವಷ್ಟೇ ನಗರದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ದೊರೆಯಿತು. ಬಿಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ರಸ್ತೆಗಳ ಕಾಂಕ್ರಿಟೀಕರಣ ಆರಂಭವಾಯಿತು. ಕೃಷ್ಣ ಪಾಲೆಮಾರ್ ಸಚಿವರಾಗಿದ್ದಾಗ 100 ಕೋಟಿ ರೂ ಅನುದಾನ ಬಂತು. ಬಳಿಕ ಸ್ಮಾರ್ಟ್ ಸಿಟಿ, ಅಮೃತ್ ಯೋಜನೆಗಳ ಅಡಿಯಲ್ಲಿ ಮಂಗಳೂರು ನಗರಕ್ಕೆ ಸಾವಿರಾರು ಕೋಟಿ ರೂ.ಗಳ ಅನುದಾನ ಬಂದಿದೆ. ಸಿದ್ದರಾಮಯ್ಯನವರು ಒಮ್ಮೆ ಕಣ್ಣು ತೆರೆದು ನೋಡಲಿ.

ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಕಾಂಪ್ಲೆಕ್ಸ್, ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ, ಕ್ರೀಡಾಂಗಣ ನಿರ್ಮಾಣವಾಗಿದೆ. ಸರಕಾರಿ ವೆನ್ಲಾಕ್ ಆಸ್ಪತ್ರೆ ಮೊದಲು ಹೇಗಿತ್ತು? ಈಗ ಹೇಗಿದೆ, ಒಮ್ಮೆ ನೋಡಿ. ಗುಣಮಟ್ಟ ಹಾಗೂ ಸೌಲಭ್ಯಗಳಲ್ಲಿ ಯಾವುದೇ ಖಾಸಗಿ ಆಸ್ಪತ್ರೆಗೆ ಕಡಿಮೆ ಇಲ್ಲದಂತೆ ವೆನ್ಲಾಕ್ ಅಭಿವೃದ್ಧಿಯಾಗಿದೆ. ಕೋವಿಡ್ ಬಂದಾಗ ನನ್ನ ಸಂಸದ ನಿಧಿಯಿಂದ 2 ಕೋಟಿ ರೂ ಹಣ ನೀಡಿ, ಬೇರೆ ಬೇರೆ ಖಾಸಗಿ ಸಂಸ್ಥೆಗಳ ಸಿಎಸ್‌ಆರ್‍‌ ನಿಧಿಗಳನ್ನು ಪಡೆದುಕೊಂಡು 110 ವೆಂಟಿಲೇಟರ್‍‌ಗಳನ್ನು ತರಿಸಿದೆವು. ಮೊದಲು ಇದ್ದಿದ್ದು 16 ವೆಂಟಿಲೇಟರ್‍‌ಗಳು. ಅದರಲ್ಲಿ 12 ವೆಂಟಿಲೇಟರ್‍‌ಗಳು ಕೆಲಸ ಮಾಡುತ್ತಿರಲಿಲ್ಲ. ಆಕ್ಸಿಜನ್ ಘಟಕ ಇರಲಿಲ್ಲ. ಇವತ್ತು ಎಲ್ಲ ಆಸ್ಪತ್ರೆಗಳಿಗೆ ಆಕ್ಸಿಜನ್ ಘಟಕ ನೀಡಿದ್ದೇವೆ. ಮನೆಮನೆಗೆ ನೀರು ಪೂರೈಕೆ ಮಾಡಿದ್ದೇವ ಎಂದು ಸಾಧನೆಗಳ ಪಟ್ಟಿ ನೀಡಿದರು ನಳಿನ್.

ಹೆದ್ದಾರಿ ಅಭಿವೃದ್ಧಿ

2009ರಲ್ಲಿ ಮೊದಲ ಸಲ ಸಂಸದನಾಗಿ ಬಂದಾಗ ಇಲ್ಲಿ ಮೂಲ್ಕಿಯಿಂದ ಬಿ.ಸಿ ರೋಡ್ ತನಕ ಇರ್ಕಾನ್ ಕಂಪನಿಯ ಮೂಲಕ ಹೆದ್ದಾರಿ ಕಾಮಗಾರಿ ನಡೆಯುತ್ತಿತ್ತು. ಆದರೆ ಕಾಮಗಾರಿ ಆರಂಭಿಸಿ 11 ವರ್ಷವಾದರೂ ಪೂರ್ಣಗೊಳ್ಳದೆ ಅರ್ಧಕ್ಕೆ ಯೋಜನೆ ನಿಂತಾಗ ಎನ್‌ಎಂಪಿಟಿ ಮೂಲಕ ಕಾಮಗಾರಿ ನಡೆಸಿ ಆ ಭಾಗದ ಹೆದ್ದಾರಿ ಚತುಷ್ಪಥ ಪೂರ್ಣಗೊಳಿಸಿದ್ದು ಬಿಜೆಪಿ ಸರಕಾರ. ಆಗ ಅದು ಮಾತ್ರ ಚತುಷ್ಪಥ ರಸ್ತೆಯಾಗಿತ್ತು. ಈಗ ಮಂಗಳೂರಿನಿಂದ ಅಡ್ಡಹೊಳೆ, ಬಿಕರ್ನಕಟ್ಟೆಯಿಂದ ಸಾಣೂರು ವರೆಗಿನ ಕಾಮಗಾರಿ, ಬಿ.ಸಿ ರೋಡ್‌ನಿಂದ ಚಾರ್ಮಾಡಿ ವರೆಗಿನ ಹೆದ್ದಾರಿಯಲ್ಲಿ ಪುಂಜಾಲಕಟ್ಟೆ ವರೆಗೆ ಕಾಮಗಾರಿ ಮುಗಿದಿದೆ. ತಲಪಾಡಿಯಿಂದ ಹೆಜಮಾಡಿ ವರೆಗಿನ ಕಾಮಗಾರಿ ಪೂರ್ತಿಯಾಗಿದೆ. ಪೆರಿಯ ಶಾಂತಿಯಿಂದ ಶಿರಾಡಿ ವರೆಗೆ ಕಾಮಗಾರಿಗೆ ಟೆಂಡರ್ ಆಗಿದೆ.. ದಕದ ಮಾಣಿ-ಮೈಸೂರ ರಸ್ತೆಯಲ್ಲಿ ಅಂದು ಯಡಿಯೂರಪ್ಪ ಸರಕಾರ ಅಭಿವೃದ್ಧಿಪಡಿಸಿತ್ತು. ಈಗ ಅದು ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ನಳಿನ್ ವಿವರಿಸಿದರು.

ಪಾಸ್‌ಪೋರ್ಟ್ ಕಚೇರಿ ಮಂಗಳೂರಿಗೆ ಬಂದಿದ್ದು ಎಸ್‌.ಎಂ ಕೃಷ್ಣ ಅವರು ಬಿಜೆಪಿ ಸರಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದಾಗ. ಎಂಆರ್‍‌ಪಿಎಲ್ ಬಂದಿದ್ದು ಧನಂಜಯ ಕುಮಾರ್ ಕಾಲದಲ್ಲಿ, ಎಸ್‌ಇಝಡ್‌ ಅವರ ಕಾಲದಲ್ಲಿ, ನರೇಂದ್ರ ಮೋದಿ ಅವರ ಸರಕಾರದಲ್ಲಿ ಇವುಗಳ ಅಭಿವೃದ್ಧಿ ಆಯಿತು. ಎರಡನೇ ಹಂತದ ವಿಸ್ತರಣೆ ಆರಂಭವಾಯಿತು. ಇಂದಿರಾಗಾಂಧಿ ಶಿಲಾನ್ಯಾಸ ಮಾಡಿದಾಗ ಬಂದರಿನಲ್ಲಿ ಮೀನುಗಾರಿಕಾ ಜೆಟ್ಟಿಗೆ ಅವಕಾಶ ಇರಲಿಲ್ಲ. ಈಗ ಪ್ರಧಾನಿ ಮೋದಿ ಅವರು ಸಾಗರಮಾಲಾ ಯೋಜನೆಯಲ್ಲಿ ಅನುದಾನ ಕೊಟ್ಟಿದ್ದಾರೆ. ದೇಶದಲ್ಲಿ ಒಂದೇ ಒಂದು ಕೋಸ್ಟ್‌ಗಾರ್ಡ್ ತರಬೇತಿ ಕೇಂದ್ರ ಕೊಚ್ಚಿಯಲ್ಲಿ. ಇಂದು 1000 ಕೋಟಿ ವೆಚ್ಚ ಮಾಡಿ ಮಂಗಳೂರಿನಲ್ಲಿ ಕೋಸ್ಟ್‌ ಗಾರ್ಡ್ ತರಬೇತಿ ಕೇಂದ್ರ ಪ್ರಾರಂಭಿಸಲಾಗಿದೆ. ಅನಂತಕುಮಾರ್ ಅವರ ಸಚಿವರಾಗಿದ್ದಾಗ ಎರಡು ಪ್ಲಾಸ್ಟಿಕ್ ಪಾರ್ಕ್ ಗೆ ಅನುಮತಿ ಕೊಟ್ಟರು. ಒಂದು ಪಂಜಾಬ್‌ನಲ್ಲಿ ಒಂದು ಮಂಗಳೂರಿನಲ್ಲಿ. ಆ ಪ್ಲಾಸ್ಟಿಕ್ ಪಾರ್ಕ ಈಗ ನಿರ್ಮಾಣವಾಗುತ್ತಿದೆ ಎಂದು ನಳಿನ್ ಮಾಹಿತಿ ನೀಡಿದರು.

ಅಂಕಿ-ಅಂಶಗಳು:

1, 13,000 ಕೋಟಿ ರೂ.ಗಳನ್ನು ನರೇಂದ್ರ ಮೋದಿ ಸರಕಾರ ಈ ಜಿಲ್ಲೆಯ ಅಭಿವೃದ್ಧಿಗೆ ಕೊಟ್ಟಿದೆ. ವೇದವ್ಯಾಸ ಕಾಮತ್ ಮತ್ತು ಡಾ. ಭರತ್ ಶೆಟ್ಟಿಯವರು ಶಾಸಕರಾಗಿ ಆಯ್ಕೆಯಾದ ಬಳಿಕ ಮಂಗಳೂರು ನಗರದಲ್ಲಿ ವೇಗವಾಗಿ ಅಭಿವೃದ್ಧಿ ಕಾರ್ಯಗಳು ನಡೆದವು. ಗ್ರಾಮಸ್ವರಾಜ್ಯದ ಕಲ್ಪನೆ ಅಡಿಯಲ್ಲಿ ಸಂಸದರ ಆದರ್ಶ ಗ್ರಾಮದ ಯೋಜನೆ ರೂಪಿಸಲಾಗಿದೆ. ಬಳ್ಪ ಇಂದು 60 ಕೋಟಿ ರೂ ವೆಚ್ಚದಲ್ಲಿ ಆದರ್ಶ ಗ್ರಾಮವಾಗಿ ಅಭಿವೃದ್ಧಿಯಾಗಿದ್ದು ಬಿಜೆಪಿ ಕಾಲದಲ್ಲಿ. ಜಲಜೀವನ್ ಮಿಷನ್ ಅಡಿಯಲ್ಲಿ 1,78,000 ನಳ್ಳಿಗಳ ಜೋಡಣೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ 1,50,000 ರೈತರು ಫಲಾನುಭವಿಗಳಾಗಿದ್ದಾರೆ.

ಸ್ವಚ್ಛ ಭಾರತದ ಅಡಿಯಲ್ಲಿ 10 ಸಾವಿರ ಟಾಯ್ಲೆಟ್‌ಗಳನ್ನು ನಿರ್ಮಿಸಲಾಗಿದೆ. ಉಜ್ವಲಾ ಯೋಜನೆ ಅಡಿಯಲ್ಲಿ 80,000 ಗ್ಯಾಸ್ ಕನೆಕ್ಷನ್‌ಗಳನ್ನು ನೀಡಲಾಗಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿಯಲ್ಲಿ 10 ಸಾವಿರ ಕುಟುಂಬಗಳಿಗೆ ಅಕ್ಕಿ ನೀಡಲಾಗುತ್ತಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 17 ಲಕ್ಷ ಕುಟುಂಬಗಳಿಗೆ ಮನೆ ನೀಡಲಾಗಿದೆ.

ಗ್ರಾಮ ಸಡಕ್ ಯೋಜನೆಯಲ್ಲಿ 264 ಕಿ.ಮೀ ರಸ್ತೆ ನಿರ್ಮಾಣವಾಗಿದೆ. ಆಯುಷ್ಮಾನ್ ಯೋಜನೆ ಅಡಿಯಲ್ಲಿ 4.5 ಲಕ್ಷ ಜನ ನೋಂದಣಿಯಾಗಿದ್ದಾರೆ. ಮುದ್ರಾ ಸಾಲ ಸೌಲಭ್ಯ 3 ಲಕ್ಷ ಜರೊಗೆ 5 ಸಾವರ ಕೋಟಿ ಸಾಲ ವನ್ನು ಹಂಚಲಾಗಿದೆ. ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯಲ್ಲಿ 13,000 ಕುಟುಂಬಗಳಿಗೆ, ಸ್ವನಿಧಿ ಯೋಜನೆಯಲ್ಲಿ 29,000 ಕುಟುಂಬಗಳಿಗೆ, ಶ್ರಮ್ ಯೋಜನೆಯಲ್ಲಿ 2.5 ಲಕ್ಷ ಕುಟುಂಬಗಳು, ಉಜಾಲಾ ಯೋಜನೆಯಡಿ 20 ಲಕ್ಷ ಎಲ್‌ಇಡಿ ಬಲ್ಬ್‌ಗಳನ್ನು ನೀಡಲಾಗಿದೆ. ಸುಳ್ಯ, ಬೆಳ್ತಂಗಡಿ ಭಾಗಗಳಲ್ಲಿ ಮೊಬೈಲ್ ದೂರವಾಣಿ ನೆಟ್‌ವರ್ಕ್‌ ಸಮಸ್ತೆ ಬಗೆಹರಿಸಲು 60 ಹೊಸ ಟವರ್‍‌ಗಳನ್ನು ಹಾಕಲಾಗಿದೆ ಎಂದು ಸಂಸದರು ಲೆಕ್ಕ ನೀಡಿದರು.

ರಾಷ್ಟ್ರೀಯ ಹಿತದ ವಿಚಾರಗಳಲ್ಲಿ ದಕ್ಷಿಣ ಕನ್ನಡ ಜನತೆ ಯಾವತ್ತೂ ರಾಜಿ ಮಾಡಿಕೊಳ್ಳುವುದಿಲ್ಲ. ಯುವ ನಾಯಕ, ದೇಶವನ್ನು ಕಾಯುವ ಕಾಯಕ ಮಾಡಿ ಬಂದ ಮಾಜಿ ಸೈನಿಕ ಕ್ಯಾಪ್ಟನ್ ಬ್ರಿಜೇಶ್ ಚೌಟರನ್ನು ನಮ್ಮ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದೇವೆ. ಜಿಲ್ಲೆಯ ಜನತೆ ಅವರನ್ನು ದಾಖಲೆಯ ಅಂತರದ ಮತಗಳಿಂದ ಗೆಲ್ಲಿಸುವುದು ಖಚಿತ ಎಂದು ಭರವಸೆ ವ್ಯಕ್ತಪಡಿಸಿದರು ನಳಿನ್.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ. ವೈ ಭರತ್ ಶೆಟ್ಟಿ, ರಾಜೇಶ್ ನಾಯ್ಕ್ ಉಳಿಪಾಡಿ, ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಲೋಕಸಭಾ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ, ಚುನಾವಣಾ ಪ್ರಭಾರಿ ಕ್ಯಾ. ಗಣೇಶ್ ಕಾರ್ಣಿಕ್, ಚುನಾವಣಾ ಸಂಚಾಲಕ ನಿತಿನ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ ಮತ್ತು ಯತೀಶ್ ಅರ್ವಾರ ಉಪಸ್ಥಿತರಿದ್ದರು.

Comments are closed.