ಉಡುಪಿ: ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ಎ.30 ಭಾನುವಾರದಿಂದ ಅಷ್ಟಬಂಧ ಬ್ರಹ್ಮಕಲಶೋತ್ಸವವು ಪ್ರಾರಂಭವಾಗಿದ್ದು, ದಕ್ಷಿಣ ಭಾರತದಲ್ಲೇ ಪ್ರಸಿದ್ಧಿ ಪಡೆದಂತಹ ಶಕ್ತಿ ಪೀಠ ಇದಾಗಿದೆ.


ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂಜಾ ವಿಧಿ ವಿಧಾನಗಳು ಇಂದು ಬೆಳಗ್ಗೆ 9.30ರ ಸುಮಾರಿಗೆ ದೇವಸ್ಥಾನದ ಮುಂಭಾಗದಲ್ಲಿರುವ ಕಂಬದ ಗಣಪತಿಗೆ ಪ್ರಾರ್ಥನೆ ಮತ್ತು ಗಣ ಹೋಮವನ್ನ ನಡೆಸುವುದರ ಮೂಲಕ ಪೂಜಾ ಕೈಂಕರ್ಯಗಳನ್ನ ಪ್ರಾರಂಭಿಸಲಾಯ್ತು. ಬಿಳಿ ಹಾಗು ಗುಲಾಬಿ ಬಣ್ಣದ ಸೇವಂತಿಗೆ ಕಮಲ, ಅರಷಿನ ಬಣ್ಣದ ಚೆಂಡು ಹೂವಿನಿಂದ ಕಂಬದ ಗಣಪತಿಯನ್ನ ಅಲಂಕರಿಸಲಾಗಿತ್ತು. ಜೊತೆಗೆ ದಿನನಿತ್ಯ ನಡೆಸುವಂತಹ ಬಲಿ ಉತ್ಸವದ ದೃಶ್ಯಾವಳಿಗಳೂ ಕಂಡು ಬಂತು.
ಭಾನುವಾರ ಉಡುಪಿಯ ಶ್ರೀ ಮೂಕಾಂಬಿಕಾ ಭಜನಾ ಮಂದಿರ ಸಮಿತಿ ವತಿಯಿಂದ ಬಂದಂತಹ ಮೊದಲ ಹೊರಕಾಣಿಕೆಯನ್ನ ಸ್ವೀಕರಿಸಿಕೊಂಡ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯು ಹೊರೆಕಾಣಿಕೆ ಪೂಜೆಯನ್ನ ನೆರವೇರಿಸಿದರು. ಹೊರೆಕಾಣಿಕೆ ನೀಡಿದ ಭಕ್ತರನ್ನು ದೇವಸ್ಥಾನದ ವತಿಯಿಂದ ಗೌರವಿಸಲಾಯಿತು. ಜೊತೆಗೆ ಅವರಿಗೆ ಶಾಲು ಪ್ರಸಾದ ಹಾಗೂ ಮೂಕಾಂಬಿಕಾ ಅನುಗ್ರಹ ಪತ್ರ ನೀಡಿ ಗೌರವಿಸಲಾಯಿತು. ಹೊರ ಕಾಣಿಕೆ ಉಗ್ರಾಣದಲ್ಲಿ ಇಂದು ಬೆಳಗ್ಗೆ ಅರ್ಚಕರು ಪೂಜಾ ವಿಧಿ ವಿಧಾನವನ್ನ ನೆರವೇರಿಸಿ ಅಷ್ಟಬಂಧ ಹೊರೆ ಕಾಣಿಕೆ ಉಗ್ರಾಣದ ಉದ್ಘಾಟನೆಯನ್ನ ನೆರವೇರಿಸಿದರು. ಹೊರೆಕಾಣಿಕೆಯಲ್ಲಿ ಸ್ವೀಕರಿಸಿದಂತಹ ಸಾಮಾಗ್ರಿಗಳನ್ನು ಅಷ್ಟಬಂಧದ ಧಾರ್ಮಿಕ ಕಾರ್ಯಕ್ರಮಗಳು ಮತ್ತು ದೇವಸ್ಥಾನದ ಪ್ರಸಾದವನ್ನ ನೀಡೋದಕ್ಕಾಗಿ ಬಳಕೆ ಮಾಡಲಾಗುವುದು.
ದೇವಳದ ಕಾರ್ಯನಿರ್ವಹಣಾಧಿಕಾರಿ ರವಿ ಕೋಟಾರಗಸ್ತಿ, ಉಪ ಕಾರ್ಯನಿರ್ವಹಣಾಧಿಕಾರಿ ಗೋವಿಂದನಾಯ್ಕ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ, ಸದಸ್ಯರಾದ ಡಾ. ಅತುಲ್ ಕುಮಾರ್ ಶೆಟ್ಟಿ, ಜಯಾನಂದ ಹೋಬಳಿದಾರ್, ಗಣೇಶ ಕಿಣಿ ಬೆಳ್ವೆ, ಶೇಖರ ಪೂಜಾರಿ, ಗೋಪಾಲಕೃಷ್ಣ ನಾಡ, ಸಂಧ್ಯಾರಮೇಶ, ರತ್ನ ಆರ್.ಕುಂದರ್, ತಂತ್ರಿ ನಿತ್ಯಾನಂದ ಅಡಿಗ, ಅರ್ಚಕರಾದ ಕೆ.ಎನ್. ನರಸಿಂಹ ಅಡಿಗ, ಕೆ.ಎನ್. ಗೋವಿಂದ ಅಡಿಗ, ಡಾ.ರಾಮಚಂದ್ರ ಅಡಿಗ, ಶ್ರೀಧರ ಅಡಿಗ, ಪುರೋಹಿತರು, ದೇಗುಲದ ಸಿಬಂದಿ, ಭಕ್ತರು ಉಪಸ್ಥಿತರಿದ್ದರು.
ಜೊತೆಗೆ ರಾತ್ರಿ ವೇಳೆ ಯಾಗಶಾಲಾ ಪ್ರವೇಶ, ಮಂಟಪ ಸಂಸ್ಕಾರ, ವಾಸ್ತುಹೋಮ, ರಾಕ್ಷೋಘ್ನಹೋಮ, ಕಲಶಸ್ಥಾಪನೆ, ಅಸ್ತ್ರಯಾಗ, ಅಗ್ನಿಜನನ ಅಧಿವಾಸಹೋಮಗಳನ್ನ ನೆರವೇರಿಸಲಾಗುತ್ತದೆ.
ಒಟ್ಟಾರೆಯಾಗಿ ಅಷ್ಟಬಂಧ ಬ್ರಹ್ಮಕಲಶೋತ್ಸವದ ಮೊದಲ ದಿನದ ಪೂಜಾ ಕೈಂಕರ್ಯಗಳು ಇಂದಿನಿಂದ ಪ್ರಾರಂಭವಾಗಿದ್ದು, ಮೂಕಾಂಬಿಕೆಯ ಕೃಪೆಗೆ ಪಾತ್ರರಾಗಲು ಇದು ಭಕ್ತಾದಿಗಳ ಪಾಲಿಗೆ ಒದಗಿ ಬಂದಂತಹ ಸೌಭಾಗವೇ ಸರಿ. ಅಷ್ಟಬಂಧ ಬ್ರಹ್ಮಕಲಶೋತ್ಸವದ ಜೊತೆ ಜೊತೆಗೆ ದೇವಸ್ಥಾನದಲ್ಲಿ ಮೇ. 11 ನೇ ತಾರೀಕಿನವರೆಗೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳೂ ನಡೆಯಲಿವೆ.
ಪ್ರಮುಖವಾಗಿ ಮೇ. 4ನೇ ತಾರೀಕಿನಂದು ಸಹಸ್ರ ಕಲಶಸ್ಥಾಪನೆ. ಮೇ.5 ರಂದು ಸಹಸ್ರ ಕಲಶದೊಂದಿಗೆ ಬ್ರಹ್ಮ ಕಲಶಾಭಿಷೇಕ. ಮೇ. 6 ಮತ್ತು 7ರಂದು ಸಂಗೀತ ಸಂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು. ಹಾಗೂ ಮೇ 9 ನೇ ತಾರೀಕಿನಂದು ಮನ್ಮಹಾ ರಥೋತ್ಸವ ಜರುಗಲಿದೆ ಎಂದು ದೇವಸ್ಥಾನದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.