ಕರಾವಳಿ

ಕಲುಷಿತ ನೀರಿನಿಂದ ಕೋಟೇಶ್ವರ ಪುಷ್ಕರಣಿ ಬಳಿಯ ಮನೆಗಳ ಬಾವಿ ನೀರು ಕೂಡ ಮಲೀನ; ಸೂಕ್ತ ಕ್ರಮಕ್ಕೆ ಆಗ್ರಹ

Pinterest LinkedIn Tumblr

ಕುಂದಾಪುರ: ಕಲುಷಿತ ನೀರು ಸೇರಿ ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಕೋಟಿತೀರ್ಥ ಪುಷ್ಕರಣಿಯ ಮೀನುಗಳು ಸಾಯುತ್ತಿರುವ ಘಟನೆ ನಡೆದ ಬೆನ್ನಲ್ಲೇ ಕೋಟಿತೀರ್ಥ ಸಮೀಪದ ಹಲವಾರು ಮನೆಗಳ ಕುಡಿಯುವ ನೀರಿನ ಬಾವಿ ನೀರು ಕೂಡ ಮಲೀನಗೊಂಡ ಬಗ್ಗೆ ವರದಿಯಾಗಿದೆ.

ಕಳೆದ ಕೆಲ ದಿನಗಳ ಹಿಂದಿನಿಂದ ಪುಷ್ಕರಣಿಯಲ್ಲಿ‌ ಮೀನುಗಳು ಸಾಯುತ್ತಿರುವುದು ಮಾತ್ರವಲ್ಲದೆ ನೀರು ಕೂಡ ದಪ್ಪ, ರಾಡಿಯಾಗಿ ಪದರದಂತೆ ಗೋಚರಿಸುತ್ತಿತ್ತು. ಸ್ಥಳೀಯರ ಮನವಿಯಂತೆ ಗ್ರಾ.ಪಂ ಸಂಬಂದಪಟ್ಟವರು ಭೇಟಿ ನೀಡಿದ್ದು ಬಳಿಕ ತಾ.ಪಂ, ಗ್ರಾ.ಪಂ ನಿಯೋಗ ಹಾಗೂ ಆರೋಗ್ಯ ಇಲಾಖೆ, ದೇವಸ್ಥಾನ ವ್ಯವಸ್ಥಾಪನ ಸಮಿತಿ ಕೂಡ ನೀರನ್ನು ಪರಿಶೀಲನೆಗಾಗಿ ಪ್ರಯೋಗಾಲಯಕ್ಕೆ ಕಳಿಸಿದ್ದರು. ಅಲ್ಲದೆ ಸಮೀಪದ ರೈಸ್ ಮಿಲ್ ಒಂದರ ನೀರು ಕೆರೆ ನೀರಿಗೆ ಹರಿದು ಈ ಸಮಸ್ಯೆಯಾಗುತ್ತಿದೆ ಎಂಬ ದೂರಿನ ಹಿನ್ನೆಲೆ ಅದರ ಮುಖ್ಯಸ್ಥರನ್ನು ಕರೆದು ಕ್ರಮಕೈಗೊಳ್ಳುವಂತೆ ತಿಳಿಸಲಾಗಿತ್ತು. ಈ ಬೆನ್ನಲ್ಲೆ ಕಳೆದೆರಡು ದಿನದಿಂದ ಈ ಪರಿಸರದ ಹತ್ತಾರು ಮನೆಗಳ ಬಾವಿ ನೀರು ಕಪ್ಪು ಬಣ್ಣಕ್ಕೆ ತಿರುಗಿದ್ದು ಎಣ್ಣೆ ಜಿಡ್ಡಿನಂತೆ ನೀರಿನ ಮೇಲ್ಪದರದಲ್ಲಿ ಕಂಡುಬರುತ್ತಿದೆ. ಚರಂಡಿ ಜೊತೆಗೆ ವಸತಿ ಪ್ರದೇಶದ ಕೃಷಿ ಭೂಮಿಯಲ್ಲಿ ಕಲುಷಿತ ನೀರು ನಿಂತಿದ್ದರಿಂದ ಬಾವಿ ನೀರು ಕೆಟ್ಟಿದ್ದು ಅನಾರೋಗ್ಯ ಭೀತಿ ಉಂಟಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದು ಶೀಘ್ರ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಯೋಗಾಲಯಕ್ಕೆ ನೀರಿನ ಸ್ಯಾಂಪಲ್..!
ಕಲುಷಿತ ನೀರು ಸೇರಿ‌ ಪುಷ್ಕರಣಿಯಲ್ಲಿ ಮೀನುಗಳು ಸಾಯುತ್ತಿರುವುದು ಮತ್ತು ನೀರು ಹಾಳಾಗಿರುವ ಬಗ್ಗೆ ದೂರು ಬಂದ ಬಳಿಕ ಗ್ರಾ.ಪಂ ಕ್ರಮವಹಿಸಿದ್ದು ರೈಸ್ ಮಿಲ್ ಹೊರಬಿಡುವ ನೀರಿನಿಂದ ಈ‌ ಸಮಸ್ಯೆಯಾಗುತ್ತಿದೆಯೆಂಬ ಆರೋಪವಿದ್ದ ಹಿನ್ನೆಲೆ ಮಿಲ್ ಸಂಬಂದಪಟ್ಟವರನನ್ನು ಕರೆಸಿ ಮಾತನಾಡಿದಾಗ ಅವರು ಆರೋಪ ತಳ್ಳಿಹಾಕಿದ್ದರು. ಸಮಸ್ಯೆ ಮೂಲ ಹುಡುಕುವ ಸಲುವಾಗಿ ಈಗಾಗಾಲೇ ಗ್ರಾ.ಪಂ, ದೇವಸ್ಥಾನ, ಆರೋಗ್ಯ ಇಲಾಖೆ ಸಹಿತ ಪ್ರತ್ಯೇಕವಾಗಿ ನೀರಿನ ಮಾದರಿಯನ್ನು ಸಂಗ್ರಹಿಸಿ‌ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು ಇದರ ವರದಿ ಈ ವಾರದಲ್ಲಿ ಕೈಸೇರಲಿದ್ದು ಈ ಪರಿಸರದಲ್ಲಿ ನೀರು ಮಲೀನಗೊಳ್ಳಲು ನಿಖರ ಕಾರಣ ಏನು ಎಂಬುದು ತಿಳಿದುಬರಲಿದೆ.

ಕಲುಷಿತ ನೀರು ಬಿಡುವ ಕಾರಣದಿಂದ ಮಾಲಿನ್ಯದಿಂದಾಗಿ ದೇವಸ್ಥಾನದ ಪರಿಸರ ಹಾಗೂ ವಸತಿ ಪ್ರದೇಶದಲ್ಲಿ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಗ್ರಾ.ಪಂ ಗೆ ಮನವಿ ನೀಡಿದ್ದು ಸ್ಥಳ ಪರಿಶೀಲನೆ‌‌ ನಡೆಸಿದ್ದರು. ಇದೀಗಾ ಮನೆಗಳ ಬಾವಿ ನೀರು ಸಂಪೂರ್ಣ ಹಾಳಾಗಿದೆ. ಕುಡಿಯಲು ಹಾಗೂ ಇತರ ಬಳಕೆಗೂ ಅಸಾಧ್ಯವಾಗಿದೆ. ಸಂಬಂದಪಟ್ಟ ಇಲಾಖೆ ಹಾಗೂ ಗ್ರಾ.ಪಂ ಈ ಬಗ್ಗೆ ಕ್ರಮವಹಿಸಿ ಶಾಶ್ವತ ಪರಿಹಾರ ಮಾಡಬೇಕು.
ಡಾ. ಕೆ. ಸೋಮಶೇಖರ್ ಉಡುಪ (ಸ್ಥಳೀಯರು)

ಕಳೆದ ಮೂರು ವರ್ಷಗಳಿಂದ ಈ ಸಮಸ್ಯೆ ಅನುಭವಿಸುತ್ತಲೇ ಬಂದಿದ್ದು ಮನೆಯಲ್ಲಿ ಮಕ್ಕಳು ಇರುವ ಕಾರಣ ಆತಂಕವಾಗುತ್ತದೆ. ಹಲವು ಬಾರಿ ಮನವಿ ನೀಡಿಯಾಗಿದೆ. ಈ ಮೊದಲು ಮಿಲ್ಲಿನವರು ಅವರದ್ದೇ ಗದ್ದೆಗೆ ನೀರು ಬಿಡುತ್ತಿದ್ದಾಗ ಬಾವಿ ನೀರು ಹಾಳಾಗುತ್ತಿತ್ತು. ಈ ಬಗ್ಗೆ ಧ್ವನಿಯೆತ್ತಿದಾಗ ತಾತ್ಕಾಲಿಕವಾಗಿ ಸಮಸ್ಯೆ ಪರಿಹಾರವಾಗಿತ್ತು. ಆದರೆ ಕಳೆದೆರಡು ದಿನಗಳಿಂದ ಮತ್ತೆ ವಸತಿ‌ ಪ್ರದೇಶದ ಭೂಮಿಯಲ್ಲಿ ಕಲುಷಿತ ನೀರು ನಿಂತ ಕಾರಣದಿಂದಾಗಿ ಬಾವಿ ನೀರು ಮಲೀನವಾಗಿ ನೀರು ಕುಡಿಯಲು ಅಸಾಧ್ಯವಾಗಿದೆ. ಜನವಸತಿ ಪರಿಸರದಲ್ಲಿ ಈ ರೀತಿಯಾಗುತ್ತಿದ್ದು ತುರ್ತಾಗಿ ಈ ಬಗ್ಗೆ ಗಮನಹರಿಸಿ ಸಮಸ್ಯೆ ಪರಿಹರಿಸದಿದ್ದಲ್ಲಿ ಪ್ರತಿಭಟನೆ ಹಾದಿ ನಿಶ್ಚಿತ.
– ಕೆ. ರಘುರಾಮ ಉಡುಪ (ಸ್ಥಳೀಯ ನಿವಾಸಿ)

 

 

Comments are closed.