ಕರಾವಳಿ

ಮುಂದೊಂದು ದಿನ ಕೇಸರಿ ಧ್ವಜ ರಾಷ್ಟ್ರಧ್ವಜವಾಗುತ್ತೆ: ಕಲ್ಲಡ್ಕ ಪ್ರಭಾಕರ್ ಭಟ್

Pinterest LinkedIn Tumblr

ಮಂಗಳೂರು: ಕಾಂಗ್ರೆಸ್ ಪಕ್ಷದ ತುಷ್ಟೀಕರಣ ನೀತಿಯಿಂದಾಗಿ ದೇಶದ ರಾಷ್ಟ್ರಧ್ವಜ ತುಂಡಾಯಿತು. ಆದರೆ ಮುಂದೊಂದು ದಿನ ನಮ್ಮ ಕೇಸರಿ ಧ್ವಜವೇ ಭಾರತದ ರಾಷ್ಟ್ರಧ್ವಜ ಆಗಲೇಬೇಕು ಎಂದು ಆರ್.ಎಸ್​​.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್​ ಭಟ್ ಹೇಳಿಕೆ ನೀಡಿದ್ದಾರೆ.

ಕುತ್ತಾರುವಿನಲ್ಲಿರುವ ಕೊರಗಜ್ಜನ ಆದಿ ಸ್ಥಳದಲ್ಲಿ ನಡೆದ ‘ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ’ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಮೂರು ಬಣ್ಣಗಳ ದೇಶದ ರಾಷ್ಟ್ರಧ್ವಜವನ್ನು ನಿರ್ಮಾಣ ಮಾಡಿದವರು ಯಾರು. ಅದಕ್ಕಿಂತಲೂ ಮೊದಲು ನಮ್ಮಲ್ಲಿ ಯಾವ ಧ್ವಜವಿತ್ತು. ಮುಂದೊಂದು ದಿನ ರಾಜ್ಯಸಭೆ, ಪಾರ್ಲಿಮೆಂಟ್ ನಲ್ಲಿ ಮೂರನೆಯವರು ಬಹುಮತ ಪಡೆದರೆ ಧ್ವಜ ಬದಲು ಮಾಡಬಹುದು. ರಾಷ್ಟ್ರಧ್ವಜ ಬದಲು ಮಾಡಬಾರದಂತೇನು ಇಲ್ಲ. ಇದೇ ರೀತಿ ಮುಂದುವರಿದಲ್ಲಿ ಹಿಂದೂ ಸಮಾಜ ಒಟ್ಟಾಗುತ್ತದೆ ಎಂದು ಹೇಳಿದರು.

‘ಕಾಶ್ಮೀರ್​ ಫೈಲ್ಸ್’ ಸಿನಿಮಾದಲ್ಲಿ ನೀವು ನೋಡೋದು ಒಂದು ಸಣ್ಣ ಭಾಗವಷ್ಟೇ‌. ನಮ್ಮ ದೇಶದಲ್ಲಿ ಧರ್ಮವು ಹತ್ಯೆಯಾದ ಸಂದರ್ಭ ಕಾಂಗ್ರೆಸ್ ಪಕ್ಷ ಅದನ್ನು ಒಪ್ಪಿಕೊಂಡಿತ್ತು.‌‌ ಇಂದು ಕಿತಾಬ್ ಬದಲಿಗೆ ಹಿಜಾಬ್ ಬಂದಿದೆ. ಅವರಿಗೆ ಎಲ್ಲಾ ವ್ಯವಸ್ಥೆಗಳನ್ನು ನೀಡಿದರೂ ಪ್ರತ್ಯೇಕತಾವಾದಿ ಮನೋಭಾವವನ್ನು ಇನ್ನೂ ಹೊಂದಿದ್ದಾರೆ‌. ಇದು ದೇಶವನ್ನು ತುಂಡು ಮಾಡುವ ಪ್ರಯತ್ನ ಎಂದು ವಾಗ್ದಾಳಿ ನಡೆಸಿದರು.

ದನ-ದೇವರುಗಳನ್ನು ಪೂಜಿಸುವ ಪತ್ನಿ ಹಾಗೂ ತಾಯಿಯನ್ನು ಸಿದ್ದರಾಮಯ್ಯ ಮನೆಯಿಂದ ಹೊರ ಹಾಕುತ್ತಾರೆಯೇ ಎಂದು ಪ್ರಶ್ನಿಸಿದ ಭಟ್​, ಗುಜರಾತ್ ಹತ್ಯಾಕಾಂಡ ಮಾಡಿದರೆ ಸಿದ್ದರಾಮಯ್ಯ ಓಡಬೇಕು. ಸಾಧ್ಯವಾದರೆ ಸಿದ್ದರಾಮಯ್ಯ ಗುಜರಾತ್ ಗೆ ಹೋಗಿ ಸತ್ಯ ಏನೆಂದು ತಿಳಿಯಲಿ ಎಂದು ಹೇಳಿದರು.ರೈಲಿಗೆ ಬೆಂಕಿ ಹಾಕಿ ಕೊಂದರಲ್ಲ, ಅವರ ಮನೆಗೆ ಹೋಗಿ ಕೇಳಲಿ. ಹಿಜಾಬ್ ವಿಷಯದಲ್ಲಿ ‌ಸಿದ್ದರಾಮಯ್ಯ ಮಾತನಾಡೋಲ್ಲ, ಯಾಕೆಂದರೆ ವೋಟ್ ಹೋಗುತ್ತದೆ.‌ ಸಿದ್ದರಾಮಯ್ಯ ಒಳ್ಳೆಯ ಸಿಎಂ ಆಗಿದ್ದರು. ಆದರೆ ಅವರು ಹುಚ್ಚು ಮಾತನಾಡೋದನ್ನು ಬಿಡಬೇಕು ಎಂದರು.

10 ವರ್ಷಗಳ ಹಿಂದೆ ಸ್ವರ್ಣವಲ್ಲಿ‌‌ ಶ್ರೀಗಳು ಶಾಲೆಗಳಲ್ಲಿ ಭಗವದ್ಗೀತೆ ಕಲಿಸುತ್ತೇನೆ ಎಂದು ಹೇಳಿದಾಗ ಬುದ್ಧಿಜೀವಿಗಳು ಕುರಾನ್, ಬೈಬಲ್ ಕೂಡ ಕಲಿಸಲಿ ಎಂದು ಗಲಾಟೆ ಮಾಡಿದ್ದರು. ಬೈಬಲ್, ಕುರಾನ್ ನಿಮ್ಮ ಮನೆಯಲ್ಲಿರಲಿ. ಆದರೆ ಭಗವದ್ಗೀತೆ ಎಲ್ಲಾ ಶಾಲೆಗಳು, ಮನೆಮನೆಗಳಲ್ಲೂ ಕಲಿಯಬೇಕು. ಭಗವದ್ಗೀತೆ ಈ ದೇಶದ ಅಂತಃಸತ್ವ ಎಂದು ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

Comments are closed.