ಶಿವಮೊಗ್ಗ: ಇಲ್ಲಿನ ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮನವಿ ಮಾಡಿದರು.

ಹತ್ಯೆಗೀಡಾಗಿರುವ ಹರ್ಷನ ಮನೆಗೆ ಶನಿವಾರ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಹಿಂದೂ ಸಮಾಜದ ಪರ ಕೆಲಸ ಮಾಡಿ ಹಿಂದು ಯುವಕರಿಗೆ ಪ್ರೇರಣಯಾಗಿದ್ದ ಹರ್ಷ ಇಂದು ನಮ್ಮೊಂದಿಗಿಲ್ಲ. ಆತನ ಸಾವು ಕೇವಲ ಅವರ ಮನೆಯವರಿಗೆ ಮಾತ್ರವಲ್ಲ, ಇಡೀ ದೇಶಕ್ಕೆ ದುಖಃವನ್ನುಂಟು ಮಾಡಿದೆ ಎಂದರು.
ಘಟನೆ ನಡೆದ ದಿನದಂದೆ ಈ ಪ್ರಕರಣವನ್ನು ಎನ್ಐಎ ತನಿಖೆಗೆ ಕೊಡಬೇಕು ಎಂದು ಸರ್ಕಾರವನ್ನು ಆಗ್ರಹ ಮಾಡಿದ್ದೆ. ರಾಷ್ಟ್ರೀಯ ತನಿಖಾ ದಳದಿಂದಲೇ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದೆ. ಏಕೆಂದರೆ ಇದು ಕೇವಲ ಹರ್ಷನ ಕೊಲೆಗೆ ಈ ಪ್ರಕರಣ ಸೀಮಿತವಾಗಿಲ್ಲ. ಇದರ ಹಿಂದೆ ಅಂತಾರಾಷ್ಟ್ರೀಯ ಮಟ್ಟದ ಪಿತೂರಿ ಇದೆ. ಇದರ ಹಿಂದೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಹಿತ ಬಹಳ ದೊಡ್ಡ ಸಂಘಟನೆಗಳ ಕೈವಾಡವಿದೆ. ಈ ಕಾರಣಕ್ಕಾಗಿ ಪ್ರಕರಣವನ್ನು ಎನ್ಐಎ ತನಿಖೆ ವಹಿಸಬೇಕು ಎಂದು ಆಗ್ರಹ ಮಾಡಿದ್ದೇನೆ ಎಂದರು.
ಈಗಾಗಲೇ ಯುಎನ್ಎಫ್ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಬೇಕೆಂದು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಕ್ಕೆ ಹೇಳಿದೆ. ಕೇಸು ದಾಖಲಾದ ತಕ್ಷಣ ಕೇಂದ್ರ ಸರ್ಕಾರ ಸದರಿ ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸುತ್ತದೆ. ಈಗಾಗಲೇ ಪ್ರಕ್ರಿಯೆ ನಡೆಯುತ್ತಿದೆ. ರಾಜ್ಯ ಸರ್ಕಾರ ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸುತ್ತದೆ. ಸೂಕ್ತ ತನಿಖೆಯಾಗುತ್ತದೆ ಎಂಬ ವಿಶ್ವಾಸ ತಮಗಿದೆ ಎಂದರು.
ಹಿಂದೆ ಕರ್ನಾಟಕ ರಾಜ್ಯದಲ್ಲಿ ಹಲವಾರು ಹಿಂದೂ ಸಂಘಟನೆ ಕಾರ್ಯಕರ್ತರ ಹತ್ಯೆಯಾಗಿದೆ. ಮಂಗಳೂರಿನ ದೀಪಕ್ ರಾವ್, ಮೈಸೂರಿನ ರಾಜು, ಬೆಂಗಳೂರಿನ ರುದ್ರೇಶ್ ತನಕ ನಾವು 22-23 ಜನ ಹಿಂದೂ ಯುವಕರನ್ನು ಕಳೆದುಕೊಂಡಿದ್ದೇವೆ. ರುದ್ರೇಶ್ ಸಂಘದ ಗಣವೇಶ ಧರಿಸಿ ಮನೆಕಡೆಗೆ ಹೊರಟ ಸಂದರ್ಭದಲ್ಲಿ ಅವರನ್ನು ಕೂಡ ಇದೇ ರೀತಿ ಹತ್ಯೆ ಮಾಡಲಾಗಿತ್ತು. ತನಿಖೆ ಮಾಡಿದ ಸಂದರ್ಭದಲ್ಲಿ ಪಿಎಫ್ಐ ಸಂಘಟನೆ ಪ್ರಕರಣದ ಹಿಂದಿದೆ ಎಂಬ ಸಂಗತಿ ಈಗಾಗಲೇ ವರದಿಯಾಗಿದೆ. ಆರೋಪಿಗಳು ಜೈಲಿನಲ್ಲಿದ್ದಾರೆ ಎಂದರು.
ಈ ಪ್ರಕರಣದ ಹಿಂದೆ ಕೂಡ ಯಾವ ಸಂಘಟನೆ ಇದೆ? ಇವರಿಗೆ ಯಾವ ದೇಶದಿಂದ, ಯಾವ ಸಂಘಟನೆಯಿಂದ ಹಣಕಾಸಿನ ನೆರವು ಸಿಗುತ್ತಿದೆ? ಈ ಎಲ್ಲಾ ವಿಚಾರ ಕುರಿತು ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿ ಶೋಭಾ ಕರಂದ್ಲಾಜೆ, ಎನ್ಐಎ ತನಿಖೆ ಮಾಡುವ ನಿಟ್ಟಿನಲ್ಲಿ ಮುನ್ನುಡಿ ಇಟ್ಟಿದೆ. ರಾಜ್ಯ ಸರ್ಕಾರದಿಂದ ಶಿಫಾರಸ್ಸು ಆದ ತಕ್ಷಣ ಎನ್ಐಎ ಇಂದ ತನಿಖೆ ಆಗುತ್ತದೆ. ಜತೆಗೆ ಇದರ ಹಿಂದಿರುವ ಷಡ್ಯಂತ್ರ ಕೂಡ ಬೆಳಕಿಗೆ ಬರುತ್ತದೆ ಎಂದರು.
ಪ್ರಕಣರದ ಹಿಂದೆ ಒಬ್ಬಿಬ್ಬರಲ್ಲ ಹಲವಾರು ಜನರಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೊಲೆ ಮಾಡಿ ಅದರ ಭಯಾನಕ ದೃಶ್ಯ ವಿಡಿಯೋ ಮಾಡುವುದನ್ನು ತಾಲಿಬಾನ್ ಆಡಳಿತದಲ್ಲಿ ಆಫ್ಘಾನಿಸ್ತಾನದಲ್ಲಿ ನೋಡಿದ್ದೆವು. ಅತ್ಯಂತ ಕ್ರೂರವಾಗಿ, ಕೆಟ್ಟದ್ದಾಗಿ ನಡೆದುಕೊಳ್ಳುವವರನ್ನು ಸಿರಿಯಾದಿಂದ, ತಾಲಿಬಾನ್ನಿಂದ ತರಬೇತು ಪಡೆದು ಬಂದವರಿಂದ ಮಾತ್ರ ಸಾಧ್ಯ. ಇದು ಕೇವಲ ಈ ಮನೆಯ, ಶಿವಮೊಗ್ಗದ ಸಮಸ್ಯೆ ಅಲ್ಲ. ಸಮಸ್ಯೆ ಹಿಂದೂ ಸಮಾಜದ, ದೇಶದ ಸಮಸ್ಯೆಯಾಗಿದೆ. ಖಂಡಿತವಾಗಿ ಇದಕ್ಕೆ ಅಂತ್ಯ ಹಾಡುವುದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡುತ್ತದೆ. ಇಂತಹ ಪ್ರಕರಣ ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
Comments are closed.