ಮೈಸೂರು: ಉತ್ತರಾಖಂಡದ ಕೇದಾರನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಅನಾವರಣಗೊಳಿಸಿದ ಆದಿಗುರು ಶಂಕರಾಚಾರ್ಯ ಅವರ ಸುಂದರ ಪುತ್ಥಳಿಯನ್ನು ಕೆತ್ತಿದ್ದು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಎನ್ನುವುದು ರಾಜ್ಯಕ್ಕೆ ಹೆಮ್ಮೆಯ ವಿಚಾರವಾಗಿದೆ.

ಪ್ರಧಾನಿ ಕಾರ್ಯಾಲಯದಿಂದ ದೇಶದೆಲ್ಲೆಡೆ ಶಿಲ್ಪಿಗಾಗಿ ಹುಡುಕಾಡಿ, ಕೊನೆಗೆ ಮೈಸೂರಿನ ಕಲಾವಿದನಿಂದ ಈ ಪುತ್ಥಳಿಯನ್ನು ಕೆತ್ತಿಸಿದೆ.
2013ರಲ್ಲಿ ಉತ್ತರಾಖಂಡದಲ್ಲಿ ಭಾರಿ ಪ್ರವಾಹ ಉಂಟಾಗಿ ಕೇದಾರನಾಥದಲ್ಲಿರುವ ಆದಿ ಶಂಕರಾಚಾರ್ಯರ ಸಮಾಧಿ ಕೊಚ್ಚಿಹೋಗಿತ್ತು. ನಂತರ ಅದರ ಮರುನಿರ್ಮಾಣದ ಭಾಗವಾಗಿ ಕೇಂದ್ರ ಹಾಗೂ ಉತ್ತರಾಖಂಡ ಸರ್ಕಾರಗಳು ಜಂಟಿಯಾಗಿ ಕೇದಾರೇಶ್ವರ ದೇವಾಲಯದ ಹಿಂಭಾಗದಲ್ಲಿ ಶಂಕರಾಚಾರ್ಯರ ಸಮಾಧಿ ಸ್ಥಳದಲ್ಲಿ ಪುತ್ಥಳಿ ಸ್ಥಾಪಿಸಿವೆ.
ಶಂಕರಾಚಾರ್ಯರ ಪುತ್ಥಳಿ 12 ಅಡಿ ಎತ್ತರವಿದ್ದು, ಕುಳಿತ ಭಂಗಿಯಲ್ಲಿದೆ. 28 ಟನ್ ತೂಕದ ಪುತ್ಥಳಿ ಕೆತ್ತಲು ಹೆಗ್ಗಡದೇವನಕೋಟೆಯಿಂದ ತರಲಾದ 120 ಟನ್ನ ಕೃಷ್ಣಶಿಲೆ ಬಳಸಲಾಗಿದೆ.
ಮೈಸೂರಿನ ಯೋಗಿರಾಜ್ ಶಿಲ್ಪಿ ಅವರ ಕುಟುಂಬ ಐದು ತಲೆಮಾರಿನಿಂದ ಕಲ್ಲಿನ ಕೆತ್ತನೆಯಲ್ಲಿ ನೈಪುಣ್ಯ ಪಡೆದಿದೆ. ಯೋಗಿರಾಜ್ ಅವರು ತಮ್ಮ ಪುತ್ರ ಅರುಣ್ ಜೊತೆ ಸೇರಿ ಶಂಕರರ ಪುತ್ಥಳಿ ಕೆತ್ತಿದ್ದಾರೆ.
ಸ್ವತಃ ಪ್ರಧಾನಿ ಸಚಿವಾಲಯದ ಅಧಿಕಾರಿಗಳೇ ದೇಶಾದ್ಯಂತ ಹುಡುಕಾಡಿ ಯೋಗಿರಾಜ್ ಅವರನ್ನು ಈ ಪುತ್ಥಳಿ ಕೆತ್ತಲು ಅಂತಿಮವಾಗಿ ಆಯ್ಕೆ ಮಾಡಿಕೊಂಡಿದ್ದರು. 2020ರ ಸೆಪ್ಟೆಂಬರ್ನಲ್ಲಿ ಕೆತ್ತನೆ ಆರಂಭಿಸಿದ ಅವರು ಇತ್ತೀಚೆಗೆ ಪೂರ್ಣಗೊಳಿಸಿದ್ದರು.
ಐದನೇ ತಲೆಮಾರಿನ ಶಿಲ್ಪಿಯಾಗಿರುವ ಅರುಣ್ ಯೋಗಿರಾಜ್ (37) ಎಂಬಿಎ ಪದವೀಧರರಾಗಿದ್ದು, ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, 2008 ರಲ್ಲಿ ಕೆಲಸ ತೊರೆದಿದ್ದು. ಅವರ ಕುಟುಂಬವು ಮೈಸೂರು ರಾಜರ ಕುಟುಂಬಕ್ಕಾಗಿ ಅನೇಕ ಪ್ರತಿಮೆಗಳನ್ನು ಮಾಡಿಕೊಟ್ಟಿದೆ.
ಪುತ್ಥಳಿ ಕೆತ್ತನೆಗೆ ನನಗೆ 3 ಮಾದರಿಯ ಛಾಯಾಚಿತ್ರವನ್ನು ನೀಡಲಾಗಿದ್ದು ಆದರೆ ನನ್ನ ಸ್ವಂತ ಮಾದರಿಯನ್ನು ಪುತ್ಥಳಿಯನ್ನು ಕೆತ್ತನೆ ಮಾಡಿದ್ದೇನೆ, 2-ಅಡಿ ಮೂಲ ಮಾದರಿಯನ್ನು ಪ್ರಧಾನಿ ಮೋದಿಗೆ ಕಳುಹಿಸಲಾಗಿತ್ತು. ಬಳಿಕ ನಾನು ಮಾಡಿದ್ದ ಪುತ್ಥಳಿಯ ಮಾದರಿಯನ್ನು ಆಯ್ಕೆ ಮಾಡಲಾಗಿತ್ತು ಎಂದು ಅರುಣ್ ಯೋಗಿ ರಾಜ್ ಅವರು ಹೇಳಿದ್ದಾರೆ.
ಯೋಗಿರಾಜ್ ಅವರು ಮಾಡಿರುವ ಪುತ್ಥಳಿಯಲ್ಲಿ ಶಂಕರಾಚಾರ್ಯ ಅವರು ಶ್ರೀಚಕ್ರದ ಮೇಲೆ ಕುಳಿತಿರುವ ಭಂಗಿಯಲ್ಲಿದೆ. ಪುತ್ಥಳಿ ಕೆತ್ತನೆ ಕಾರ್ಯ 2020ರ ಆಗಸ್ಟ್ ತಿಂಗಳಿನಲ್ಲಿ ಆರಂಭವಾಗಿತ್ತು. ಕೆಲ ದಿನಗಳ ಹಿಂದಷ್ಟೇ ಈ ಕಾರ್ಯ ಪೂರ್ಣಗೊಂಡಿತ್ತು.
ಪುತ್ಥಳಿ ಕೆತ್ತನೆಗೆ ಹೆಚ್.ಡಿ.ಕೋಟೆಯ ಕೃಷ್ಣ ಶಿಲೆಯನ್ನು ಬಳಸಿಕೊಳ್ಳಲಾಗಿದ್ದು, ಈ ಶಿಲೆಯು ಮಳೆ, ಗಾಳಿ, ಬೆಂಕಿ. ತಾಪಗಳನ್ನು ತಡೆಯುವಂತಹ ಸಾಮರ್ಥ್ಯವನ್ನು ಹೊಂದಿದೆ. ಪುತ್ಥಳಿ ಕೆತ್ತನೆ ವೇಳೆ ಒಂದು ದಿನ ಕೂಡ ವಿರಾಮವನ್ನು ಪಡೆದುಕೊಂಡಿರಲಿಲ್ಲ. 360 ಡಿಗ್ರಿ ಆಯಾಮದಲ್ಲೂ ವೀಕ್ಷಣೆ ಮಾಡುವಂತಹ ರೀತಿಯಲ್ಲು ಪುತ್ಥಳಿ ನಿರ್ಮಾಣ ಮಾಡುವಂತೆ ತಿಳಿಸಲಾಗಿತ್ತು. ಶಂಕರಾಚಾರ್ಯರು ಸನ್ಯಾಸಿಯಾಗಿದ್ದು. ತಲೆಯಲ್ಲಿ ಕೂದಲಿಲ್ಲ. ಕಾವಿ ಧರಿಸುತ್ತಾರೆ. ಅವರ ಮುಖವನ್ನು ದೈವಿಕವಾಗಿ ಕಾಣುವಂತೆ ಮಾಡಬೇಕಾಗಿತ್ತು. ಹೀಗಾಗಿ ಅದರ ಮೇಲೆ ಹೆಚ್ಚಿನ ಗಮನಹರಿಸಬೇಕಿದ್ದರಿಂದ ಜೊತೆಯಲ್ಲಿದ್ದ ಎಲ್ಲಾ ಸಹಾಯಕರನ್ನು ಕೆಲ ದಿನಗಳ ಕಾಲ ದೂರ ಕಳುಹಿಸಿದ್ದೆ ಎನ್ನುತಾರೆ.
ದುರಾದೃಷ್ಟಕರ ವಿಚಾರವೆಂದರೆ ಯೋಗಿರಾಜ್ ಅವರು ಪುತ್ಥಳಿ ನಿರ್ಮಾಣ ಮಾಡುತ್ತಿದ್ದ ಸಂದರ್ಭದಲ್ಲಿಯೇ ಎರಡು ವಾರಗಳ ಹಿಂದಷ್ಟೇ ಅವರ ತಂದೆ ನಿಧನ ಹೊಂದಿದ್ದರು. ತಮ್ಮ ತಂದೆಯ ನೆನಪುಗಳನ್ನು ಸ್ಮರಿಸಿದ ಯೋಗಿರಾಜ್ ಅವರು, ಬಂಡೆ ಕೂಡ ಮಣ್ಣಿನಂತೆ ನಮ್ಮ ಮಾತನ್ನು ಕೇಳಬೇಕು. ಆಗ ಮಾತ್ರ ನೀನು ಪರಿಪೂರ್ಣವಾದ ಪ್ರತಿಮೆ ನಿರ್ಮಾಣ ಮಾಡಲು ಸಾಧ್ಯ ಎಂದು ನನ್ನ ತಂದೆ ಹೇಳುತ್ತಿದ್ದರು ಎಂದು ಹೇಳಿದ್ದಾರೆ.
ತಾನು ಕೆತ್ತಿದ್ದ ಪ್ರತಿಮೆ ಅನಾವರಣಗೊಳ್ಳುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂಬುದು ಪ್ರತೀಯೊಬ್ಬ ಶಿಲ್ಪಿಯ ಕನಸಾಗಿರುತ್ತದೆ. ಆದರೆ ತಂದೆಯ ಸಾವು ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಯೋಗಿರಾಜ್ ಅವರಿಗೆ ಸಾಧ್ಯವಾಗಿಲ್ಲ.
Comments are closed.