
ಮಂಗಳೂರು : ರಾಜ್ಯ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿಗಳಾದ ರಾಮನಾಥ ಕೋವಿಂದ ಅವರು ಶೃಂಗೇರಿಯ ಶ್ರೀ ಶಾರದಾ ದೇವಸ್ಥಾನಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಇಂದು ಅ.7ರಂದು ಸಂಜೆ ಮಂಗಳೂರಿಗೆ ಆಗಮಿಸಿ ವಾಸ್ತವ್ಯ ಮಾಡಿ, ಆ.8ರ ಸಂಜೆ ಮಂಗಳೂರಿನಿಂದ ನವದೆಹಲಿಗೆ ತೆರಳಲಿರುವ ಹಿನ್ನಲೆಯಲ್ಲಿ ವಸತಿ, ಊಟೋಪಚಾರ ಹಾಗೂ ಬಂದೋಬಸ್ತ್ಗೆ ಸಂಬಂಧಿಸಿದ ಅಂತಿಮ ಹಂತದ ಸಿದ್ದತೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ.ಕೆ.ವಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಗುರುವಾರ ಸಂಜೆ ಮಂಗಳೂರಿಗೆ ಆಗಮಿಸಿದ್ದಾರೆ. ನಗರದ ಸರ್ಕೀಟ್ ಹೌಸ್ ನಲ್ಲಿ ವಾಸ್ತವ್ಯ ಹೂಡಲಿರುವ ಅವರು ಶುಕ್ರವಾರ ಬೆಳಗ್ಗೆ ಶ್ರೀ ಕ್ಷೇತ್ರ ಶೃಂಗೇರಿಗೆ ತೆರಳಲಿದ್ದಾರೆ.
ರಾಷ್ಟ್ರಪತಿಗಳ ಮಂಗಳೂರು ಭೇಟಿ ಹಿನ್ನೆಲೆಯಲ್ಲಿ ನಗರ ದಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು ಸರ್ಕೀಟ್ ಹೌಸ್ ಅನ್ನು ಸರ್ವ ರೀತಿಯಲ್ಲಿ ಸಜ್ಜುಗೊಳಿಸಲಾಗಿದೆ. ದೇಶದ ಪ್ರಥಮ ಪ್ರಜೆ ಮಂಗಳೂರಿನಲ್ಲಿ ವಾಸ್ತವ್ಯ ಮಾಡುತ್ತಿರುವುದು ಇದೇ ಮೊದಲು.
ವಿಶೇಷ ವಿಮಾನದ ಮೂಲಕ ಗುರುವಾರ ಸಂಜೆ 6.15ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ರಾಷ್ಟ್ರಪತಿಯವರನ್ನು ರಾಜ್ಯಪಾಲ ತಾವರ್ಚಂದ್ ಗೆಹ್ಲೋಟ್ ಅವರು ಬರಮಾಡಿಕೊಳ್ಳಲಿದ್ದಾರೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ|ರಾಜೇಂದ್ರ ಕೆ.ವಿ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮುಂತಾದವರು ಉಪಸ್ಥಿತರಿರಲಿದ್ದಾರೆ. ಆ ಬಳಿಕ ಅವರು ರಾಜ್ಯಪಾಲರ ಜತೆ ಕದ್ರಿ ಸರ್ಕೀಟ್ ಹೌಸ್ ಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ.
ಅ. 8ರ ಶುಕ್ರವಾರ ಬೆಳಗ್ಗೆ ಸರ್ಕೀಟ್ ಹೌಸ್ ನಿಂದ ಹೊರಡಲಿರುವ ರಾಷ್ಟ್ರಪತಿ ಹಾಗೂ ರಾಜ್ಯಪಾಲರು 10.55ಕ್ಕೆ ಹೆಲಿಕಾಪ್ಟರ್ ಮೂಲಕ ಶೃಂಗೇರಿಗೆ ತೆರಳಲಿದ್ದಾರೆ. ಇದಕ್ಕಾಗಿ ಮೂರು ಹೆಲಿಕಾಪ್ಟರ್ಗಳನ್ನು ಸಿದ್ಧಪಡಿಸಲಾಗಿದೆ. ಶೃಂಗೇರಿಯಿಂದ ಸಂಜೆ 4.55ಕ್ಕೆ ಮಂಗಳೂರಿಗೆ ವಾಪಸಾಗುವ ರಾಷ್ಟ್ರಪತಿಗಳು 5.10ಕ್ಕೆ ಹೊಸದಿಲ್ಲಿಗೆ ತೆರಳಲಿದ್ದಾರೆ. ರಾಜ್ಯಪಾಲರು ರಾತ್ರಿ ಬೆಂಗಳೂರಿಗೆ ತೆರಳಲಿದ್ದಾರೆ.
ರಾಷ್ಟ್ರಪತಿಗಳು ಮಂಗಳೂರಿನಲ್ಲಿ ವಾಸ್ತವ್ಯ ಮಾಡಲಿರುವ ಹಿನ್ನಲೆಯಲ್ಲಿ ಅಂತಿಮ ಹಂತದಲ್ಲಿ ಕೈಗೊಳ್ಳಬೇಕಾದ ಸಿದ್ದತೆಗಳು ಹಾಗೂ ಎಚ್ಚರಿಕಾ ಕ್ರಮಗಳ ಕುರಿತು ನಗರದ ಜಿಲ್ಲಾಧಿಕಾರಿಯವರ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಉನ್ನತ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅ.7 ರಂದು ಮಂಗಳೂರು ನಗರದಲ್ಲಿ ವಾಸ್ತವ್ಯ ಹಾಗೂ 8ರ ಸಂಜೆ ಏರ್ಪೋರ್ಟ್ನಿಂದ ನವದೆಹಲಿಗೆ ತೆರಳಲಿರುವ ರಾಷ್ಟ್ರಪತಿಗಳು, ಅವರೊಂದಿಗೆ ಆಗಮಿಸಲಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಉತ್ತಮ ವಾಸ್ತವ್ಯ, ಊಟೋಪಚಾರವನ್ನು ಒದಗಿಸುವ ಜವಬ್ದಾರಿ ಜಿಲ್ಲಾಡಳಿತಕ್ಕೆ ಒದಗಿಬಂದಿದೆ, ರಾಷ್ಟ್ರದ ಪ್ರಥಮ ಪ್ರಜೆಯ ವಾಸ್ತವ್ಯಕ್ಕೆ ಯಾವುದೊಂದು ಸಣ್ಣಪುಟ್ಟ ಲೋಪವಾಗದಂತೆಯೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಅತ್ಯುತ್ತಮವಾದ ರೀತಿಯಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಿಕೊಡಬೇಕು ಎಂದರು.
ಅದಕ್ಕಾಗಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುವ ಅತಿಥಿ ಗೃಹ ಸಂಪೂರ್ಣ ಸಿಂಗಾರಗೊಳ್ಳಬೇಕು, ಅಂತಿಮ ಹಂತದ ಸಿದ್ದತೆಗಳು ಪರಿಪೂರ್ಣವಾಗಿರಬೇಕು, ಅಗತ್ಯ ಮೂಲಭೂತ ಸೌಕರ್ಯಗಳಲ್ಲಿ ಯಾವುದೇ ಕೊರತೆ ಎದುರಾಗಬಾರದು, ಸ್ಪಚ್ಛತೆಗೆ ಹೆಚ್ಚಿನ ಮಹತ್ವ ನೀಡಬೇಕು, ಮಹಾನಗರ ಪಾಲಿಕೆ ವತಿಯಿಂದ ಅತಿಥಿ ಗೃಹದ ಆಸುಪಾಸಿನಲ್ಲಿಯೂ ಕೂಡ ಉತ್ತಮ ಸ್ಪಚ್ಚತೆ ಕಾಪಾಡಿಕೊಳ್ಳಬೇಕು, ಅದರಂತೆ ಏರ್ಪೋರ್ಟ್ನಿಂದ ಅತಿಥಿ ಗೃಹಕ್ಕೆ ಆಗಮಿಸುವ ರಸ್ತೆಗಳಲ್ಲಿ ಏನಾದರೂ ನ್ಯೂನ್ಯತೆಗಳಿದ್ದಲ್ಲೀ ಕೂಡಲೇ ದುರಸ್ತಿ ಪಡಿಸಿಕೊಳ್ಳಬೇಕು, ಅಂತಿಮ ಹಂತದ ಸಿದ್ದತೆಗಳು ಸಮಪರ್ಕವಾಗಿರಬೇಕು ಎಂದವರು ಹೇಳಿದರು.
ರಾಷ್ಟ್ರಪತಿಗಳ ವಾಸ್ತವ್ಯದ ವೇಳೆ ನಿಯೋಜಿಸಲಾಗಿರುವ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಆರ್ಟಿಪಿಸಿಆರ್ ತಪಾಸಣೆ ಆಗಬೇಕು ಹಾಗೂ ಆದ್ಯತೆ ಮೇರೆಗೆ ಅವರ ವರದಿಗಳನ್ನು ನೀಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸೂಚಿಸಿದ ಜಿಲ್ಲಾಧಿಕಾರಿಯವರು, ಮೆಸ್ಕಾಂ ನಿಂದ ವಿದ್ಯುತ್ ಕಡಿತವಾಗಬಾರದು, ಬಿಎಸ್ಎನ್ಎಲ್ನಿಂದ ಹಾಟ್ಲೈನ್ ಎಳೆಯುವುದುನ್ನು ಕೂಡಲೇ ಪೂರ್ಣಗೊಳಿಸಬೇಕು ಹಾಗೂ ರಾಷ್ಟ್ರಪತಿಗಳ ಕರ್ತವ್ಯಕ್ಕೆ ನಿಯೋಜಿಸಲಾದ ಲೈಸನಿಂಗ್ ಅಧಿಕಾರಿಗಳು ಶಿಷ್ಟಾಚಾರದಂತೆಯೇ ವರ್ತಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆಯನ್ನು ಅವರು ನೀಡಿದರು.
ರಾಷ್ಟ್ರಪತಿಗಳ ಪ್ರವಾಸದಲ್ಲಿ ರಾಜ್ಯಪಾಲರು ಕೂಡ ಭಾಗವಹಿಸುತ್ತಿದ್ದಾರೆ, ಈ ದಿಸೆಯಲ್ಲಿ ಅವರ ವಾಸ್ತವ್ಯಕ್ಕೂ ಕಾಳಜಿ ನೀಡಬೇಕಿದೆ, ಸಂಬಂಧಿಸಿದ ಅಧಿಕಾರಿಗಳು ಜಾಗೃತರಾಗಿರಬೇಕು ಎಂದರು.
ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಮಾತನಾಡಿ, ರಾಷ್ಟ್ರಪತಿಗಳ ಪ್ರವಾಸ ಕಾರ್ಯಕ್ರಮದಲ್ಲಿ ಬಿಗಿ ಭದ್ರತೆಯನ್ನು ಒದಗಿಸಲಾಗುತ್ತಿದೆ, ಈ ವೇಳೆ ಅಧಿಕಾರಿಗಳು ಸೇರಿದಂತೆ ಎಲ್ಲರನ್ನು ತಪಾಸಣೆಗೆ ಒಳಪಡಿಸಲಾಗುವುದು, ಆ ಸಮಯದಲ್ಲಿ ರಾಷ್ಟ್ರಪತಿಗಳ ಕರ್ತವ್ಯಕ್ಕೆ ನಿಯೋಜಿಸಿದ ಅಧಿಕಾರಿಗಳು ಪೊಲೀಸರೊಂದಿಗೆ ಸಹಕರಿಸುವಂತೆ ತಿಳಿಸಿದರು.
ಸಿಂಗಾರಗೊಂಡ ಸರ್ಕೀಟ್ ಹೌಸ್ :
ರಾಷ್ಟ್ರಪತಿ ವಾಸ್ತವ್ಯದ ಹಿನ್ನೆಲೆಯಲ್ಲಿ ಸರ್ಕೀಟ್ ಹೌಸ್ ಸಿಂಗಾರಗೊಳಿಸಲಾಗಿದೆ. ಜತೆಗೆ ವಿಮಾನ ನಿಲ್ದಾಣದಿಂದ ಸರ್ಕಿಟ್ಹೌಸ್ಗೆ ತೆರಳುವ ರಸ್ತೆಯನ್ನು ದುರಸ್ತಿಗೊಳಿಸಲಾಗಿದೆ.
ಸರ್ಕೀಟ್ ಹೌಸ್ ನಲ್ಲಿ ನಡೆಸಿರುವ ಸಿದ್ಧತೆಗಳ ಬಗ್ಗೆ ಹಾಗೂ ಎಚ್ಚರಿಕಾ ಕ್ರಮಗಳ ಕುರಿತು ಬುಧವಾರ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ., ಸಿಇಒ ಡಾ| ಕುಮಾರ್, ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ಸೇರಿದಂತೆ ಉನ್ನತ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದ್ದಾರೆ.
ಸಿದ್ದಗೊಳ್ಳಲಿದೆ ಬಗೆ ಬಗೆಯ ಖಾದ್ಯಗಳು!
ರಾಷ್ಟ್ರಪತಿಯವರ ಊಟೋಪಚಾರದ ಹಿನ್ನೆಲೆಯಲ್ಲಿ ಮುಖ್ಯ ಬಾಣಸಿಗ ದಿಲ್ಲಿಯಿಂದ ಮಂಗಳೂರಿಗೆ ಆಗಮಿಸಿದ್ದಾರೆ. ಅವರ ಜತೆ ನಗರದ ಖಾಸಗಿ ಹೊಟೇಲ್ನ 15 ಮಂದಿ ಅಡುಗೆ ಸಿಬಂದಿ ಸಹಕರಿಸಲಿದ್ದಾರೆ.
ರಾಷ್ಟ್ರಪತಿಯವರಿಗೆ ಗುರುವಾರ ರಾತ್ರಿ ಗ್ರೀನ್ ಸಲಡ್, ಪರ್ವಾಲ್ ಸಬ್ಜಿ, ಹಾಗಲಕಾಯಿ ಪಲ್ಯ, ಬೇಳೆ ಸಾರು, ಮೊಸರು ದಾಲ್, ರೋಟಿ, ಚಪಾತಿ, ಅನ್ನ ಮೆನು ಸಿದ್ಧಗೊಂಡಿದೆ. ಮರುದಿನ ಬೆಳಗ್ಗಿನ ಉಪಹಾರವಾಗಿ ಇಡ್ಲಿ, ಉತ್ತಪ್ಪಮ್, ಚಟ್ನಿ, ಸಾಂಬಾರ್, ಚಾ/ಕಾಫಿ ಇರಲಿದೆ. ಹಾಲು, ಹಣ್ಣು-ಹಂಪಲು ಸೇರಿದಂತೆ ಇತರ ಕೆಲವು ತಿಂಡಿ-ತಿನಿಸು ಇರಲಿದೆ. ರಾಷ್ಟ್ರಪತಿಯವರ ಪತ್ನಿ ಅವರಿಗೆ ಸಂಜೀರ, ಮದ್ದೂರು ವಡ, ಬಾಳೆಹಣ್ಣು ಪೋಡಿ, ನೀರುದೋಸೆ ಸೇರಿದಂತೆ ಹಲವು ಖಾದ್ಯಗಳನ್ನು ಸಿದ್ಧಪಡಿಸಲಾಗುತ್ತದೆ.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಮಾಣಿಕ್ಯ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಯಶವಂತ್, ಸಹಾಯಕ ಕಮಾಂಡರ್ ಸಾಮ್ರಾಟ್, ಮಂಗಳೂರು ಏರ್ಪೋರ್ಟ್ ಅಧಿಕಾರಿ ಶ್ರೀಕಾಂತ್ ಟಾಟಾ, ಸಹಾಯಕ ಆಯುಕ್ತ ಮದನ್ ಮೋಹನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರಿದ್ದರು.
Comments are closed.