ಕುಂದಾಪುರ: ವರ್ಷಗಳ ಅಂತರದಲ್ಲಿ ನಾಲ್ಕು ಚಿರತೆಗಳು ಬೋನಿಗೆ ಬಿದ್ದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮಪಂಚಾಯತ್ ವ್ಯಾಪ್ತಿಯ ಮಾಲಾಡಿ ಎಂಬಲ್ಲಿನ ಶ್ರೀ ನಂದಿಕೇಶ್ವರ ದೇವಸ್ಥಾನ ಹಾಗೂ ಅಂಗನವಾಡಿ, ಶಾಲೆ ಇರುವ ಪರಿಸರದ ಪಕ್ಕದ ತೋಪಿನ ಸಮೀಪದಲ್ಲಿ ಕಳೆದ ಒಂದೂವರೆ ವರ್ಷದ ಬಳಿಕ ಮತ್ತೆ ಚಿರತೆ ಕಾಟ ಹೆಚ್ಚಿದೆ. ಮನೆ ವಠಾರಕ್ಕೆ ಸೋಮವಾರ ಹಾಡುಹಗಲೇ ನುಗ್ಗಿದ ಚಿರತೆ ಸಾಕು ನಾಯಿಗೆ ದಾಳಿ ಮಾಡಿದ್ದು ಈ ಭಾಗದ ಜನರಲ್ಲಿ ಆತಂಕ ಮೂಡಿದೆ.

(ಚಿರತೆ ಹೆಜ್ಜೆ, ಗಾಯಗೊಂಡ ನಾಯಿ)
ತೆಕ್ಕಟ್ಟೆ ಸಮೀಪದ ಮಾಲಾಡಿಯ ತೋಪಿನಿಂದ ಮುಂದೆ ಸಾಗಿದಾಗ ಸಿಗುವ ಮನೆಯಾದ ತೆಕ್ಕಟ್ಟೆ ಗ್ರಾ.ಪಂ ಅಧ್ಯಕ್ಷೆ ಮಮತಾ ದೇವಾಡಿಗರ ಪತಿ ಸುರೇಶ್ ದೇವಾಡಿಗರ ನಿವಾಸದ ಎದುರು ಪ್ರತ್ಯಕ್ಷವಾದ ಚಿರತೆ ಅವರ ಮನೆ ಸಾಕು ನಾಯಿ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ.
ಘಟನೆ ವಿವರ: ಇಲ್ಲಿನ ನಿವಾಸಿ ಸುರೇಶ್ ದೇವಾಡಿಗ ಹಾಗೂ ಪತ್ನಿ , ಸುರೇಶ್ ಸಹೋದರ ಸತೀಶ್ ದೇವಾಡಿಗ ಮನೆಯಲ್ಲಿದ್ದು ಇದೇ ವೇಳೆ ಐದಾರು ಮಕ್ಕಳು ಕೂಡ ಮನೆ ಹೊರಗಡೆ ಆನ್ಲೈನ್ ಕ್ಲಾಸ್, ಓದುವಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಸೋಮವಾರ ಸಂಜೆ 4.45 ಸುಮಾರಿಗೆ ಮನೆ ನಾಯಿ ಏಕಾಏಕಿ ಬೊಗಳಿದಾಗ ಮನೆಮಂದಿ ನೋಡಿದ್ದು ಚಿರತೆ ನಾಯಿಮೇಲೆ ದಾಳಿ ನಡೆಸುತ್ತಿದ್ದು ಅವರು ಕೂಗಿಕೊಂಡಾಗ ಚಿರತೆ ನಾಯಿ ಬಿಟ್ಟು ಸಮೀಪದ ಹಾಡಿ ಪ್ರದೇಶಕ್ಕೆ ಪಲಾಯನಗೈದಿದೆ. ನಾಯಿ ಸೊಂಟದ ಭಾಗಕ್ಕೆ ಗಾಯಗಳಾಗಿದೆ.

(File Photo K.World)
ಬೋನು ಇಡಲಿದ್ದೇವೆ: ಅರಣ್ಯಾಧಿಕಾರಿ
ಇನ್ನೂ ಕೂಡ ಚಿರತೆ ಇರುವ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದು ಇಲಾಖೆ ತಕ್ಷಣ ಬೋನ್ ಇಟ್ಟು ಚಿರತೆ ಹಿಡಿಯುವ ಕಾರ್ಯಾಚರಣೆ ನಡೆಸಲು ಸ್ಥಳೀಯರು ಆಗ್ರಹಿಸಿದ್ದಾರೆ. ಚಿರತೆ ಓಡಾಟದ ಬಗ್ಗೆ ಮಾಹಿತಿ ಬಂದಿದ್ದು ಶೀಘ್ರ ಅಲ್ಲಿ ಬೋನು ಇಡುತ್ತೇವೆ ಎಂದು ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ‘ಕನ್ನಡಿಗವರ್ಲ್ಡ್’ಗೆ ಮಾಹಿತಿ ನೀಡಿದ್ದಾರೆ.
ಒಂದೂವರೆ ವರ್ಷದ ಹಿಂದೆ ಇಲ್ಲೆ 4 ಚಿರತೆ ಸೆರೆ…
ನಾಯಿ, ಜಾನುವಾರು ಸೇರಿದಂತೆ ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸುವುದು ಮಾತ್ರವಲ್ಲದೇ ಹಾಡುಹಗಲೇ ಪ್ರತಕ್ಷವಾಗಿ ಚಿರತೆ ನಿರಂತರವಾಗಿ ಉಪಟಳ ನೀಡುತ್ತಿದ್ದು ಮಾಲಾಡಿಯ ಎಕ್ರೆಗಟ್ಟಲೆ ಇರುವ ಈ ತೋಟದಲ್ಲಿ 2018 ಆಗಸ್ಟ್ ತಿಂಗಳಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿತ್ತು. ಬಳಿಕ ಚಿರತೆ ಆಗ್ಗಾಗೆ ಕಾಣಿಸಿಕೊಳ್ಳುತ್ತಿದ್ದು ಅ.6, 2019, ಡಿ.12, 2019, ಡಿ.24 ,2019 ರಲ್ಲಿ ‘ಆಪರೇಶನ್ ಚೀತಾ’ ಕಾರ್ಯಾಚರಣೆ ನಡೆಸಿದ ಇಲಾಖೆ ಚಿರತೆಯನ್ನು ಬೋನಿಗೆ ಬೀಳಿಸಿತ್ತು. ಈ ಕಾರ್ಯಾಚರಣೆಗೆ ಇಂದು ದಾಳಿಗೊಳಗಾದ ನಾಯಿ ಮಾಲಿಕರಾದ ಹಾಗೂ ಸ್ಥಳೀಯ ನಿವಾಸಿಗಳಾದ ಸತೀಶ್ ದೇವಾಡಿಗ ಮತ್ತು ಸುರೇಶ್ ಅವರು ನಿತ್ಯ ಇಲಾಖೆ ಇಟ್ಟ ಬೋನಿಗೆ ನಾಯಿ ಕಟ್ಟಿ ಚಿರತೆ ಸೆರೆಗೆ ಸಹಕಾರ ನೀಡುತ್ತಿದ್ದರು.
ಈ ಹಿಂದೆ ನಾಲ್ಕು ಚಿರತೆ ಸೆರೆಯಾದ ಮಾಲಾಡಿ ತೋಟದ ಬಳಿಯೇ ಸರಕಾರಿ ಶಾಲೆ, ಅಂಗನವಾಡಿ ಹಾಗೂ ದೇವಸ್ಥಾನ ಸೇರಿದಂತೆ ವಸತಿ ಪ್ರದೇಶವಿದೆ. ಆಸುಪಾಸಿನಲ್ಲಿ 50ಕ್ಕೂ ಅಧಿಕ ಮನೆಗಳಿದೆ. ನಿರಂತರವಾಗಿ ಚಿರತೆ ಕಾಟದಿಂದ ಇಲ್ಲಿನ ಜನರು ಅಕ್ಷರಶಃ ಭಯಭೀತರಾಗಿದ್ದಾರೆ. ತಕ್ಷಣ ಇಲಾಖಾಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕಿದೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.