
ವಡೋದರ; ಮದುವೆಯ ದಿನದಂದು ತನ್ನ ಮುಟ್ಟಿನ ದಿನವನ್ನು ಗುಟ್ಟಾಗಿಟ್ಟ ಕಾರಣಕ್ಕೆ ಗುಜರಾತ್ನ ವಡೋದರಾ ಜಿಲ್ಲೆಯ ಪತಿಯೊಬ್ಬ ಹೆಂಡತಿಯಿಂದ ವಿಚ್ಚೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾನೆ.
ಮದುವೆಯ ದಿನದಂದು ಮಹಿಳೆಯ ಮುಟ್ಟಿನ ಬಗ್ಗೆ ತಿಳಿದಾಗ ತಾನು ಮತ್ತು ತನ್ನ ತಾಯಿ ಆಘಾತಕ್ಕೊಳಗಾಗಿದ್ದೇವೆ ಮದುವೆಯಾಗಿ ವಿಚ್ಛೇದನ ಕೇಳಿದ ಗಂಡು ಹೇಳಿದ್ದಾನೆ. ಅಲ್ಲದೇ ಈ ವಿಷಯದ ಬಗ್ಗೆ ನಮ್ಮ ನಂಬಿಕೆ ಉಲ್ಲಂಘಿಸಲಾಗಿದೆ ಎಂದು ಆತ ಹೇಳಿದ್ದಾನೆ.
ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ವ್ಯಕ್ತಿ, ಮದುವೆ ಸಮಾರಂಭ ಪೂರ್ಣಗೊಂಡ ನಂತರ ಪ್ರಾರ್ಥನೆಗಾಗಿ ದೇವಸ್ಥಾನಕ್ಕೆ ಭೇಟಿ ನೀಡುವ ಕೆಲವೇ ಕ್ಷಣಗಳ ಮೊದಲು ತನ್ನ ಹೆಂಡತಿ ಋತುಸ್ರಾವವಾಗಿರುವುದಾಗಿ ಹೇಳಿದ್ದಾಗಿ ಹೇಳಿಕೊಂಡಿದ್ದಾನೆ. ಈ ವರ್ಷದ ಜನವರಿಯಲ್ಲಿ ಈ ಜೋಡಿ ಸಪ್ತಪದಿ ತುಳಿದಿತ್ತು. ವಧು ಶಿಕ್ಷಕಿಯಾಗಿದ್ದರೆ, ವರ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾನೆ.
ತನ್ನ ಅರ್ಜಿಯಲ್ಲಿ ಪತಿರಾಯ, ತನ್ನ ಹಿರಿಯ ಸಹೋದರನು ಈಗಾಗಲೇ ಮನೆಯ ಆರೈಕೆ ಮಾಡುತ್ತಿರುವುದರಿಂದ ಕುಟುಂಬ ವೆಚ್ಚಗಳಿಗೆ ಪ್ರತಿ ತಿಂಗಳು 5,000 ರೂಗಳನ್ನು ನೀಡುವಂತೆ ಅವಳು ಕೇಳಿಕೊಂಡಿದ್ದಳು ಮತ್ತು ಮನೆಯಲ್ಲಿ ಹವಾನಿಯಂತ್ರಣವನ್ನು ಅಳವಡಿಸಬೇಕೆಂದು ಒತ್ತಾಯಿಸಿದಳು ಎಂದು ಆರೋಪಿಸಿದ್ದಾನೆ. ಎಸಿ ಖರೀದಿಸಲು ಸಾಧ್ಯವಿಲ್ಲ ಎಂದು ತನ್ನ ಹೆಂಡತಿಗೆ ಹೇಳಿದಾಗ, ಅವಳು ಜಗಳವಾಡಿ ತನ್ನ ಹೆತ್ತವರೊಂದಿಗೆ ವಾಸಿಸಲು ಮನೆಯಿಂದ ಹೊರಟುಹೋದಳು ಎಂದು ಅರ್ಜಿದಾರರು ಹೇಳಿದ್ದಾರೆ.
Comments are closed.