ಕರ್ನಾಟಕ

ಗುಲ್ಬರ್ಗ ವಿವಿ ಪ್ರೊಫೆಸರ್‌ಗೆ ಮತ್ತೊಬ್ಬ ಪ್ರೊಫೆಸರ್ ನಿಂದ ಕಪಾಳಮೋಕ್ಷ

Pinterest LinkedIn Tumblr


ಕಲಬುರಗಿ: ತಮ್ಮದೇ ಸಹೋದ್ಯೋಗಿಗೆ ಹಿರಿಯ ಪ್ರಾಧ್ಯಾಪಕರೊಬ್ಬರು ಕಪಾಳಮೋಕ್ಷ ಮಾಡಿದ ಘಟನೆ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ನಡೆದಿದ್ದು, ಈ ಘಟನೆ ಈಗ ಠಾಣೆಯ ಮೆಟ್ಟಿಲೇರಿದೆ.

ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಜಿ.ಎಂ.ವಿದ್ಯಾಸಾಗರ ಹಲ್ಲೆಗೆ ಒಳಗಾದವರು. ತಮ್ಮ ಮೇಲೆ ಹಲ್ಲೆ ನಡೆಸಿದ ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಎಸ್‌.ಪಿ.ಮೇಲಕೇರಿ ಮತ್ತು ಹಲ್ಲೆ ನಡೆಸಲು ಕುಮ್ಮಕ್ಕು ನೀಡಿದ್ದಾರೆ ಎನ್ನಲಾಗುತ್ತಿರುವ ಸಸ್ಯಶಾಸ್ತ್ರ ವಿಭಾಗದ ಪ್ರೊ. ಪ್ರತಿಮಾ ಮಠ ವಿರುದ್ಧ ಠಾಣೆಗೆ ವಿದ್ಯಾಸಾಗರ ದೂರು ನೀಡಿದ್ದಾರೆ.

ಘಟನೆ ವಿವರ
ಎಂ.ಫಿಲ್‌ ಪೂರೈಸಿರುವ ಪ್ರೊ. ಮೇಲಕೇರಿ ಅಣ್ಣನ ಮಗ ಶಿವಕುಮಾರ್‌ ಗುಲ್ಬರ್ಗ ವಿವಿಯಲ್ಲಿಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ, ಶಿವಕುಮಾರ್‌ ಬೇರೆ ಎಲ್ಲಿಯೂ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿಲ್ಲ ಎಂದು ಮುಚ್ಚಳಿಕೆ ಪತ್ರ ಬರೆದುಕೊಡುವಂತೆ ಡಾ.ವಿದ್ಯಾಸಾಗರ ಸೂಚಿಸಿದ್ದರು. ಇದರಿಂದ ಅಸಮಾಧಾನಗೊಂಡ ಪ್ರೊ.ಮೇಲಕೇರಿ ಆ.18ರಂದು ಬೆಳಗ್ಗೆ 11.50ರ ಸುಮಾರಿನಲ್ಲಿ ಪ್ರೊ.ಪ್ರತಿಮಾ ಮಠ ಅವರೊಂದಿಗೆ ತಮ್ಮ ಚೇಂಬರ್‌ಗೆ ನುಗ್ಗಿ ನಿಂದಿಸಿದ್ದಲ್ಲದೆ, ತಮ್ಮ ಮೇಲೆ ಹಲ್ಲೆನಡೆಸಿದ್ದಾರೆ ಎಂದು ಪ್ರೊ.ವಿದ್ಯಾಸಾಗರ ದೂರಿನಲ್ಲಿ ವಿವರಿಸಿದ್ದಾರೆ.

ಈ ಮಧ್ಯೆ, ಪ್ರೊ. ಮೇಲಕೇರಿ ಕಪಾಳಮೋಕ್ಷ ಮಾಡಿದ ದೃಶ್ಯಾವಳಿ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೀಗಾಗಿ, ವಿಡಿಯೋ ತುಣುಕಿನ ಆಧಾರದ ಮೇಲೆ ಪ್ರೊ. ಮೇಲಕೇರಿ ಅವರನ್ನು ಪ್ರಕರಣದಲ್ಲಿಆರೋಪಿ ನಂ.1 ಎಂದು ಪರಿಗಣಿಸಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ.

ಸೆಕ್ಷ ನ್‌ 341 (ಸರಕಾರಿ ಕೆಲಸಕ್ಕೆ ಅಡ್ಡಿ), 323 (ಉದ್ದೇಶಪೂರ್ವಕ ಹಲ್ಲೆ), 355 (ಹಲ್ಲೆ), 353 (ಕರ್ತವ್ಯ ನಿರ್ವಹಣೆಗೆ ಅಡ್ಡಿ), 504 (ಘನತೆಗೆ ಧಕ್ಕೆ ತರುವುದು), 506 (ಧಮಕಿ ಹಾಕಿ ಭಯ ಹುಟ್ಟಿಸುವುದು), 448 (ಅತಿಕ್ರಮ ಪ್ರವೇಶ) ಹಾಗೂ 114 (ಚಿತಾವಣೆ ನಡೆಸಿದ ವ್ಯಕ್ತಿಯ ಉಪಸ್ಥಿತಿ) ಅಡಿಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಘಟನೆ ಮಾಹಿತಿ ಲಭಿಸುತ್ತಿದ್ದಂತೆಯೇ ಪ್ರಕರಣ ಠಾಣೆಯ ಮೆಟ್ಟಿಲು ಏರದಂತೆ ಕಾಂಪ್ರೊಮೈಸ್‌ ಮಾಡಿಸಲು ನಡೆಸಿದ ಯತ್ನ ಫಲ ನೀಡಿಲ್ಲ. ಕೊನೆಗೆ, ಒಬ್ಬ ಹಿರಿಯ ಸಿಂಡಿಕೇಟ್‌ ಸದಸ್ಯರ ನೇತೃತ್ವದಲ್ಲಿ ಆಂತರಿಕ ವಿಚಾರಣಾ ಸಮಿತಿ ರಚಿಸಲಾಗಿದೆ. ಸಮಿತಿಯ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿವಿ ಉಪಕುಲಪತಿ ಪ್ರೊ. ಚಂದ್ರಕಾಂತ ಯಾತನೂರ ಹೇಳಿದ್ದಾರೆ.

Comments are closed.