ಮನೋರಂಜನೆ

ಕಾಯಿಲೆಯಿಂದ ಎರಡನೇ ಬಾರಿಗೆ ಬಾಡಿಗೆ ತಾಯ್ತನ ಆಯ್ಕೆ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ

Pinterest LinkedIn Tumblr


ಕರಾವಳಿ ಚೆಲುವೆ, ಬಾಲಿವುಡ್ ಸುಂದರಿ ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾ ತಮ್ಮ ಕುಟುಂಬಕ್ಕೆ ಕೆಲ ತಿಂಗಳುಗಳ ಹಿಂದೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದರು. ಅದು ಕೂಡ ಬಾಡಿಗೆ ತಾಯ್ತನದ ಮೂಲಕ ಎಂಬುದು ವಿಶೇಷ. ಹೆಣ್ಣು ಮಗು ಪಡೆದ ಬಗ್ಗೆ ಜೂನಿಯರ್ ಶಿಲ್ವಾ ಶೆಟ್ಟಿ ಕುಂದ್ರಾ ಆಗಮಿಸಿದ್ದಾರೆ ಎಂದು ನಟಿ ಸೋಷಿಯಲ್ ಮೀಡಿಯಾದಲ್ಲಿ ಖುಷಿ ಹಂಚಿಕೊಂಡಿದ್ದರು.

ಎರಡನೇ ಬಾರಿ ಅಮ್ಮನಾದ ಸಂಭ್ರಮದ ಸುದ್ದಿ ನೀಡಿದ್ದ ಶಿಲ್ಪಾ ಶೆಟ್ಟಿಗೆ ಸಾಮಾಜಿಕ ಜಾಲತಾಣದಲ್ಲಿ ಶಾಕ್ ಕಾದಿತ್ತು. ಏಕೆಂದರೆ ನಟಿಯು ಬಾಡಿಗೆ ತಾಯ್ತನದ ಮೂಲಕ ಮಗು ಪಡೆದಿದ್ದರಿಂದ ಅನೇಕರು ತರಾಟೆಗೆ ತೆಗೆದುಕೊಂಡಿದ್ದರು. ಇನ್ನು ಕೆಲವರು ಒಂದು ಮಗುವನ್ನು ಪಡೆದ ಬಳಿಕ ಬಾಡಿಗೆ ತಾಯ್ತನ ಯಾಕೆ ಬೇಕಿತ್ತು ಎಂದೆಲ್ಲಾ ಅಸಭ್ಯವಾಗಿ ಪ್ರತಿಕ್ರಿಯಿಸಿದ್ದರು. ಈ ಬಗ್ಗೆ ಇದೀಗ ಶಿಲ್ಪಾ ಶೆಟ್ಟಿ ಮನಬಿಚ್ಚಿ ಮಾತನಾಡಿದ್ದಾರೆ. ಬಾಡಿಗೆ ತಾಯ್ತನದ ಆಯ್ಕೆ ಏಕೆ ಎಂಬುದರ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಕರಾವಳಿ ಚೆಲುವೆ 2009 ರಲ್ಲಿ ಉದ್ಯಮಿ ರಾಜ್ ಕುಂದ್ರಾ ಅವರನ್ನು ವರಿಸಿದ್ದರು. ಮದುವೆಯಾಗಿ ಮೂರನೇ ವರ್ಷದಲ್ಲಿ ದಂಪತಿಯ ಪ್ರೀತಿಯ ಕಾಣಿಕೆಯಾಗಿ ವಿಹಾನ್ ಕುಂದ್ರಾ ಜನಿಸಿದ್ದರು. ಇದಾಗಿ ಎರಡನೇ ಮಗು ಪಡೆಯುವ ಇರಾದೆಯಲ್ಲಿದ್ದರು ಕುಂದ್ರಾ ದಂಪತಿ. ಆದರೆ ಅದು ಸಾಧ್ಯವಾಗಿರಲಿಲ್ಲ ಎಂದಿದ್ದಾರೆ ಶಿಲ್ಪಾ ಶೆಟ್ಟಿ.

ನಾವು ಎರಡನೇ ಮಗು ಪಡೆಯಲು 5 ವರ್ಷಗಳಿಂದ ಪಯತ್ನ ಪಟ್ಟಿದ್ದೆವು. ಆದರೆ ನನ್ನ ದೇಹವು ಗರ್ಭಧಾರಣೆಗೆ ಸ್ಪಂದಿಸುತ್ತಿರಲಿಲ್ಲ. ಇನ್ನೊಂದು ಮಗುವನ್ನು ಪಡೆಯಲು ಆಟೋ ಇಮ್ಯೂನೋ ಡಿಸೀಸ್ (APLC) ಎನ್ನವ ಕಾಯಿಲೆ ಅಡ್ಡಿಯಾಯಿತು. ಈ ಸಮಸ್ಯೆಯಿಂದ ಹಲವಾರು ಬಾರಿ ಗರ್ಭಪಾತವಾಗಿತ್ತು ಎಂದು ಶಿಲ್ಪಾ ಶೆಟ್ಟಿ ತಿಳಿಸಿದರು.

ಇದಾದ ಬಳಿಕ ನಾವು ದತ್ತು ಮಗು ಪಡೆಯುವ ಬಗ್ಗೆ ಯೋಚನೆ ಮಾಡಿದೆವು. ಆದರೆ ಸರಿ ಎನಿಸಲಿಲ್ಲ. ಹೀಗಾಗಿ ಮುಂದಿನ ಆಯ್ಕೆಯಾಗಿದ್ದ ಬಾಡಿಗೆ ತಾಯ್ತನದ ಬಗ್ಗೆ ಯೋಚಿಸಿದೆವು. ಏಕೆಂದರೆ ವಿಹಾನ್​ಗೆ ಒಡಹುಟ್ಟಿದವರು ಇರಬೇಕೆಂದು ನಾವು ಬಯಸಿದ್ದೆವು. ಅದು ಏಕೆ ಮುಖ್ಯ ಎನ್ನುವುದು ಕೂಡ ನಮಗೆ ಚೆನ್ನಾಗಿ ತಿಳಿದಿತ್ತು. ಆದರೆ ಅದು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಕೊನೆಗೆ ನಾವು ಬಾಡಿಗೆ ತಾಯ್ತನದ ಮೊರೆ ಹೋಗಲು ನಿರ್ಧರಿಸಿದೆವು ಎಂದು ಶಿಲ್ಪಾ ಶೆಟ್ಟಿ ಹೇಳಿದ್ದಾರೆ.

ಸದ್ಯ 2 ತಿಂಗಳು ಪ್ರಾಯದ ಸಮೀಶಾ ಶೆಟ್ಟಿ ಆರೋಗ್ಯವಾಗಿದ್ದಾರೆ. ಹಾಗೆಯೇ ವಿಹಾನ್​ ಕೂಡ ಪುಟ್ಟ ತಂಗಿ ಸಿಕ್ಕಿರುವ ಖುಷಿಯಲ್ಲಿದ್ದಾರೆ ಎಂದು ಕರಾವಳಿ ಚೆಲುವೆ ಶಿಲ್ಪಾ ಶೆಟ್ಟಿ ತಿಳಿಸಿದ್ದಾರೆ.

Comments are closed.