
ಲಂಡನ್: ಈಗಾಗಲೇ ಕೊರೊನಾ ವೈರಸ್ ದಾಳಿಗೆ ಇಡೀ ವಿಶ್ವವೇ ತತ್ತರಿಸಿದೆ. ಮಾರಣಾಂತಿಕ ವೈರಸ್ ಅನ್ನು ನಿಯಂತ್ರಿಸಲು ಎಲ್ಲಾ ರಾಷ್ಟ್ರಗಳು ಲಾಕ್ಡೌನ್ ವಿಧಿಸಿ ಸೂಕ್ತ ವೈದ್ಯಕೀಯ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಇದರ ನಡುವೆ ದಿ ಇಂಟರ್ನ್ಯಾಷನಲ್ ರೆಸ್ಕ್ಯೂ ಕಮಿಟಿ(ಐಆರ್ಸಿ) ನೀಡುರುವ ವರದಿ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ.
ಮುಂದಿನ ವಾರಗಳಲ್ಲಿ ಕೋವಿಡ್-19 ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸ್ವಲ್ಪ ಮೈಮರೆತರೂ ವಿಶ್ವದ 100 ಕೋಟಿ ಜನರಿಗೆ ಮಾರಣಾಂತಿಕ ವೈರಸ್ ತಗುಲಲಿದ್ದು, 3.2 ದಶಲಕ್ಷ ಮಂದಿಗೆ ಕೋವಿಡ್-19 ಸೋಂಕಿಗೆ ಬಲಿಯಾಗಲಿದ್ದಾರೆ ಎಂದು ಅಂತಾರಾಷ್ಟ್ರೀಯ ನೆರವು ಸಂಸ್ಥೆ(ಐಆರ್ಸಿ) ಬಿಡುಗಡೆ ಮಾಡರುವ ವರದಿಯಲ್ಲಿ ಇಡೀ ಪ್ರಪಂಚಕ್ಕೆ ಎಚ್ಚರ ನೀಡಿದೆ.
ಐಆರ್ಸಿ ಹೇಳುವುದೇನೆಂದರೆ, ಬಡ ಹಾಗೂ ಇತರ ದೇಶಗಳನ್ನು ಅವಲಂಭಿಸಿರುವ ದೇಶಗಳಿಗೆ ಸೂಕ್ತ ಸಹಾಯ ಮಾಡದಿದ್ದರೆ, ಅಂತಹ ರಾಷ್ಟ್ರಗಳ ಮೇಲೆ ಕೊರೊನಾ ವೈರಸ್ ತೀವ್ರ ಪ್ರಭಾವ ಉಂಟುಮಾಡಲಿದೆ ಎಂದು ವರದಿಯಲ್ಲಿ ತಿಳಿಸಿದೆ. ಇಲ್ಲಿ ಬಡ ದೇಶಗಳೆಂದರೆ.. ಆಫ್ರಿಕಾ ಖಂಡದಲ್ಲಿರುವ ದೇಶಗಳ ಜತೆಗೆ ಅಘ್ಘಾನಿಸ್ತಾನ, ಸಿರಿಯಾ ಮತ್ತಿತರ ದೇಶಗಳೆಂದು ಪರಿಗಣಿಸಿದೆ.
ಮತ್ತೊಂದು ಕಡೆ ಈ ದೇಶಗಳಲ್ಲಿ ಜನಸಂಖ್ಯೆ ಅತಿಹೆಚ್ಚು , ಬಡವರ ಸಂಖ್ಯೆ ಇನ್ನೂ ಹೆಚ್ಚು, ಶ್ರೀಮಂತ ದೇಶಗಳಿಗೆ ಹೋಲಿಸಿದರೆ ಸ್ವಚ್ಛತೆ ಅತ್ಯಂತ ಕಡಿಮೆ. ಇನ್ನೂ ಮಾಲಿನ್ಯ, ಹಸಿವಿನ ಬಾಧೆ, ಕ್ಷಾಮದಂತಹ ಸಮಸ್ಯೆಗಳು ಸದಾ ಇರುವಂತಹವೇ. ಹಾಗಾಗಿ, ಈ ದೇಶಗಳನ್ನು ಕೊರೊನಾ ವೈರಸ್ ತ್ವರಿತವಾಗಿ ಬಿಟ್ಟು ಹೋಗುವುದಿಲ್ಲ. ಈ ದೇಶಗಳಿಗೆ ಆರ್ಥಿಕವಾಗಿ ಸಹಾಯಮಾಡದಿದ್ದರೆ ೧೦೦ ಕೋಟಿಗೂ ಹೆಚ್ಚು ಮಂದಿಗೆ ಕೊರೊನಾ ವೈರಸ್ ತಗುಲುವ ಅಪಾಯವಿದೆ ಎಂದು ಐಆರ್ಸಿ ವರದಿ ಹೇಳಿದೆ ಎಂದು ಬಿಬಿಸಿ ತಿಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆ( ಡಬ್ಲ್ಯೂ ಎಚ್ ಓ) ಲಂಡನ್ನಲ್ಲಿರುವ ಇಂಪಿರಿಯಲ್ ಕಾಲೇಜಿನ ದತ್ತಾಂಶ ಕ್ರೋಡೀಕರಿಸಿ ಐಆರ್ಸಿ ತನ್ನ ವರದಿ ಸಿದ್ಧಪಡಿಸಿದೆ. ಆದರೆ, ಪ್ರಸ್ತುತ ದಿನವೂ 60 ರಿಂದ 70 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗುತ್ತಿರುವುದನ್ನು ಲಘುವಾಗಿ ಪರಿಗಣಿಸಬಾರದು ಎಂದು ಎಚ್ಚರಿಕೆ ನೀಡಿದೆ.
ಕೊರೊನಾ ವೈರಸ್ ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಪರೀಕ್ಷೆಗಳ ಸಂಖ್ಯೆ ಕಡಿಮೆ ಇರುವ ಕಾರಣ ನೈಜ ಅಂಕಿ ಅಂಶಗಳು ಬಯಲುಗೊಳ್ಳುತ್ತಿಲ್ಲ ಎನ್ನುತ್ತಿದೆ. ಬಹಳಷ್ಟು ಶ್ರೀಮಂತ ದೇಶಗಳಲ್ಲಿ ಟೆಸ್ಟ್ ಗಳು ಹೆಚ್ಚುತ್ತಿರುವಂತೆ ಕೊರೊನಾ ಸೋಂಕು ಪ್ರಕರಣಗಳು ಕೂಡಾ ಹೆಚ್ಚುತ್ತಿವೆ ಎಂಬ ಉದಾಹರಣೆಯನ್ನು ವರದಿ ನೀಡಿದೆ.
Comments are closed.