
ಬೆಂಗಳೂರು: ಪ್ರತಿ ಜಿಲ್ಲೆಯಲ್ಲಿ ಕೋವಿಡ್ 19 ಆಸ್ಪತ್ರೆ ಪ್ರಾರಂಭಿಸಲು ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ವಿಕಾಸಸೌಧದಲ್ಲಿ ಡಿಸಿಎಂ ಅಶ್ವತ್ಥ ನಾರಾಯಣ ಜತೆ ಜಂಟಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ದುಬಾೖಯಿಂದ ಬಂದಿದ್ದ ಮೈಸೂರು ಮೂಲದ 46 ವರ್ಷದ ವ್ಯಕ್ತಿಯಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡಿದೆ. ಆ ಮೂಲಕ ರಾಜ್ಯದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದರು.
ವೇಗವಾಗಿ ಹರಡುತ್ತಿರುವ ಕೋವಿಡ್ 19 ನಿಯಂತ್ರಣಕ್ಕೆ ಸ್ಕ್ಯಾನರ್ ಕಂಪೆನಿ ಜತೆ ವೆಂಟಿಲೇಟರ್ ಪೂರೈಕೆ ಬಗ್ಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಮಾಡಿದ್ದೇವೆ. ಖಾಸಗಿ ಆಸ್ಪತ್ರೆಯಲ್ಲಿ 30% ವೆಂಟಿಲೇಟರ್ ಇಡಬೇಕು ಎಂದು ಸೂಚನೆ ನೀಡಿದ್ದೇವೆ ಎಂದು ಹೇಳಿದರು.
ಆದ್ಯತೆ ಮೇರೆಗೆ ಒಂದು ಸಾವಿರ ವೆಂಟಿಲೇಟರ್ ಪೂರೈಸುವಂತೆ ಸೂಚನೆ ನೀಡಲಾಗಿದೆ. 10 ಲಕ್ಷ N 95 ಮಾಸ್ಕ್, 5 ಪಿಪಿಇ ಕಿಟ್, 15 ಲಕ್ಷ ತ್ರಿ ಲೇಯರ್ ಮಾಸ್ಕ್ ಖರೀದಿಗೆ ನಿರ್ಧರಿಸಲಾಗಿದೆ. ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ಯಾನರ್ಗಳ ಖರೀದಿಗೂ ನಿರ್ಧಾರ ಮಾಡಾಗಿದೆ ಎಂದು ವಿವರಿಸಿದರು.
ಸಚಿವರ ಪ್ರವಾಸ
ಕೋವಿಡ್ 19 ಜಾಗೃತಿ ಮೂಡಿಸಲು ಮಂಗಳವಾರದಿಂದ ಸಚಿವರು ಜಿಲ್ಲಾ ಪ್ರವಾಸ ಮಾಡುತ್ತೇವೆ. ಇನ್ನು ಲ್ಯಾಬ್ ಟೆಸ್ಟ್ ವಸ್ತುಗಳ ಖರೀದಿಗೂ ನಿರ್ಧಾರ ಆಗಿದೆ ಎಂದು ತಿಳಿಸಿದರು.
ಜನಸೇರದಂತೆ ಕ್ರಮ: ಅಶ್ವತ್ಥನಾರಾಯಣ
ಸಾರ್ವಜನಿಕ ಸ್ಥಳಗಳಲ್ಲಿ ಜನ ಸೇರದೇ ಇರಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಡಿಸಿಎಂ ಅಶ್ವತ್ಥನಾರಾಯಣ ತಿಳಿಸಿದರು. ಕೋವಿಡ್ 19 ವೈರಸ್ ನಿಯಂತ್ರಣಕ್ಕೆ ಸರಕಾರ ಅಗತ್ಯ ಕ್ರಮ ತೆಗೆದುಕೊಂಡಿದೆ. 84% ಐಟಿ ಕಂಪೆನಿಗಳ ಉದ್ಯೋಗಿಗಳು ಮನೆಯಿಂದ ಕೆಲಸ ಮಾಡುತ್ತಿದ್ದಾರೆ. ಉಳಿದ ಸೇವೆಗಳನ್ನು ಆವಶ್ಯಕತೆ ಮೇಲೆ ತೆರೆಯಲಾಗಿದೆ ಎಂದು ಸ್ಪಷ್ಟಪಡಿಸಿದರು.
Comments are closed.