ಮನೋರಂಜನೆ

ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಚಂದನ್ ಆಚಾರ್

Pinterest LinkedIn Tumblr


ಮೊದಲೇ ತಿಳಿಸಿದಂತೆ ಈ ವಾರ ಬಿಗ್ ಬಾಸ್ ಮನೆಯಲ್ಲಿ ಡಬಲ್ ಎಲಿಮಿನೇಶನ್ ಆಗಿದೆ. ಶನಿವಾರ ಕಿಶನ್ ಮನೆಯಿಂದ ಹೊರಬಿದ್ದರೆ ಭಾನುವಾರ ಚಂದನ್ ಆಚಾರ್ ಹೊರಗೆ ಬಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ತಾನಾಯಿತು, ತನ್ನ ಕಥೆ ಆಯಿತು ಎಂಬಂತಿದ್ದರು ಚಂದನ್ ಆಚಾರ್.

ಮನೆಯಿಂದ ಹೊರಬರುವಾಗ ಪ್ರಿಯಾಂಕಾ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಅಷ್ಟೇ ಅಲ್ಲ ಮನೆಯಿಂದ ಹೊರಬರುವಾಗ ನೀವು ನೀವಾಗಿರಿ ಅದೇ ನಿಮ್ಮನ್ನು ಗೆಲ್ಲಿಸೋದು ಎಂದು ಉಳಿದ ಸ್ಪರ್ಧಿಗಳಿಗೆ ಹೇಳಿ ಬಂದರು. ನನಗಂತೂ ಚಂದನ್ ಮಗು ತರಹ ಕಾಣುತ್ತಿದ್ದ ಎಂದು ವಾಸುಕಿ ವೈಭವ್ ಮನೆ ಮಂದಿ ಜೊತೆಗೆ ಹೇಳಿಕೊಂಡರು.

ಒಟ್ಟು 98 ದಿನಗಳ ಬಳಿಕ ಹೊರಬಂದಿದ್ದಾರೆ ಚಂದನ್. ಇನ್ನೆರಡು ದಿನ ಇದ್ದಿದ್ದರೆ ಸೆಂಚುರಿ ಆಗುತ್ತಿತ್ತು. 14 ವಾರ ಒಂಟಿಯಾಗಿ ಆಡೋದು ಖಂಡಿತ ಸುಲಭ ಅಲ್ಲ. ಚಂದನ್ ಆಚಾರ್ ತರಹ ಈ ಸೀಸನ್‌ನಲ್ಲಿ ಇನ್ನೊಬ್ಬರು ಇರಲಿಲ್ಲ ಎಂದರು ಸುದೀಪ್. ಸೋತಿದ್ದು ಹೌದು, ಆದರೆ ಸತ್ತಿಲ್ಲ ಸಾರ್ ಎಂದಿದ್ದಾರೆ ಬಿಗ್ ಬಾಸ್ ಮನೆಯಿಂದ ಹೊರಬಂದ ಚಂದನ್.

ಚಿಕ್ಕಂದಿನಿಂದಲೂ ನನಗೆ ಕ್ರೀಡೆ ಬಗ್ಗೆ ಆಸಕ್ತಿ ಕಡಿಮೆ, ಗೇಮ್ ಪ್ಲಾನಿಂಗ್ ಚಾಕಚಕ್ಯತೆಯಲ್ಲಿ ನಾನು ವಿಫಲನಾದೆ ಅನ್ನಿಸುತ್ತದೆ. ಬಿಗ್ ಬಾಸ್ ಮನೆಯಲ್ಲಿ ಹೆಂಗೆ ಬದುಕಿದೆವು ಎಂಬುದು ಅಷ್ಟೇ ಪ್ರಮಾಣದಲ್ಲಿ ಹೊರಗಿನ ಜಗತ್ತಿನಲ್ಲಿ ಬದುಕಿದರೆ ನಾವೇ ರಾಜರು. ನನ್ನ ಅನುಭವಕ್ಕೆ ಬಂದಿದ್ದು ಇದು ಎಂದರು.

ನಾವು ನಾವಾಗಿರಲು ಬಿಗ್ ಬಾಸ್ ಮನೆ ಅನುವು ಮಾಡಿಕೊಟ್ಟಿದೆ. ಅಹಂಕಾರ ಮುರಿದಿದೆ, ಕೊಬ್ಬನ್ನು ಕರಗಿಸಿದೆ. ಯಾರು ಮೂರು ಹೊತ್ತು ಊಟ ಕೊಡ್ತಾರೆ, ಆದರೆ ಬಿಗ್ ಬಾಸ್ ಮನೆ ಕೊಟ್ಟಿದೆ. ನಾನು ಇರೋದೆ ಹೀಗೆ, ಪ್ರೀತಿಯಂತೂ ಎಲ್ಲರ ಮೇಲೆ ಇತ್ತು. ಅದನ್ನು ಯಾರಿಗೆಲ್ಲ ತಲುಪಿಸಬೇಕೋ ತಲುಪಿಸಿದ್ದೇನೆ ಎಂದರು. ಕುರಿ ಪ್ರತಾಪ್ ಅವರಿಗೆ ಆರವಮಂ ಹೇಳಿಕೊಟ್ಟು ಸಾಧನೆ ಬಿಗ್ ಬಾಸ್ ಮನೆಯಲ್ಲಿ ಚಂದನ್ ಆಚಾರ್‌ಗೆ ಸಲ್ಲುತ್ತದೆ.

Comments are closed.