ಕರ್ನಾಟಕ

ಪತ್ನಿಯ ಅಪರಾಧ ಕೃತ್ಯ ಪೊಲೀಸರಿಗೆ ಬಿಚ್ಚಿಡ್ತಿದ್ದ ‘ಗಂಡ’..!: ಸುಪಾರಿ ಕೊಟ್ಟು ಸಿಕ್ಕಿಕೊಂಡಳು

Pinterest LinkedIn Tumblr


ಬೆಂಗಳೂರು: ತನ್ನ ಅಪರಾಧ ಕೃತ್ಯಗಳ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಅನ್ನೋ ಕಾರಣಕ್ಕೆ ತನ್ನ ಮಾಜಿ ಪತಿಯ ಕೊಲೆಗೆ ಯತ್ನಿಸಿದ್ದ ಮಹಿಳೆ ಸೇರಿ ನಾಲ್ವರನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಡೆಂಕಣಕೋಟೆಯ ಮಂಜುಳಾ ಅಲಿಯಾಸ್‌ ಕಳ್ಳಿ ಮಂಜಿ (44), ಈಕೆಯ ಪ್ರಿಯಕರ ಮೈಸೂರಿನ ಚಲುವರಾಯಿ ಅಲಿಯಾಸ್‌ ಚಲುವ (45) ಮತ್ತು ಆನೇಕಲ್‌ನ ಗಣೇಶ್‌ ಅಲಿಯಾಸ್‌ ಗಣಿ (25), ಕೆ. ಮಂಜುನಾಥ (27) ಬಂಧಿತರು.

ಖತರ್ನಾಕ್ ಕಿಲಾಡಿ ಹೆಂಡ್ತಿ..!

ಬಂಧಿತ ಮಂಜುಳಾ ಮತ್ತು ಶಂಕರ್‌, 10 ವರ್ಷಗಳ ಹಿಂದೆ ವಿವಾಹವಾಗಿದ್ದರು. ವಂಚನೆ, ಕಳ್ಳತನ ಸೇರಿದಂತೆ ಇನ್ನಿತರ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದ ಕಾರಣ, ಪತ್ನಿಯಿಂದ ದೂರವಾಗಿದ್ದ ಶಂಕರ್‌, 2ನೇ ಮದುವೆ ಆಗಿ ಪ್ರತ್ಯೇಕವಾಗಿ ಜೀವನ ಸಾಗಿಸುತ್ತಿದ್ದ. ಮಂಜುಳಾ ಕೂಡ ಚಲುವರಾಯಿ ಎಂಬಾತನ ಜತೆಗೆ ಸ್ನೇಹ ಬೆಳೆಸಿ ಅಪರಾಧ ಕೃತ್ಯ ನಡೆಸುತ್ತಿದ್ದಳು. ತನ್ನ ಸಹಚರರ ಜತೆ ಸೇರಿ ಅಮಾಯಕ ಮಹಿಳೆಯರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ದೋಚುತ್ತಿದ್ದಳು. ಒಂಟಿಯಾಗಿ ಓಡಾಡುವ ಅಮಾಯಕ ಮಹಿಳೆಯರ ಬಳಿಗೆ ಹೋಗಿ ‘ನನಗೆ ಹಣ ಸಿಕ್ಕಿದೆ. ಹಂಚಿಕೊಳ್ಳೋಣ’ ಎಂದು ನಿರ್ಜನ ಪ್ರದೇಶಕ್ಕೆ ಕರೆದೊಯ್ಯುತ್ತಿದ್ದ ಮಂಜುಳಾ, ಸಹಚರರನ್ನು ಕರೆಸಿಕೊಂಡು ಆಭರಣ ದೋಚುತ್ತಿದ್ದಳು. ಆಣೆ ಪ್ರಮಾಣ ಮಾಡುವ ನೆಪದಲ್ಲಿ ಮಹಿಳೆಯರ ಮೈಮೇಲಿದ್ದ ಚಿನ್ನಾಭರಣ ಬಿಚ್ಚಿಸಿ ಗಮನ ಬೇರೆಡೆ ಸೆಳೆದು ಆಭರಣದೊಂದಿಗೆ ಪರಾರಿಯಾಗುತ್ತಿದ್ದಳು. ಇದಕ್ಕೆ ಚಲುವ, ಗಣೇಶ್‌ ಮತ್ತು ಮಂಜುನಾಥ ಸಾಥ್‌ ನೀಡುತ್ತಿದ್ದರು.

ಹೆಂಡ್ತಿ ಕೃತ್ಯವನ್ನು ಪೊಲೀಸರಿಗೆ ತಲುಪಿಸುತ್ತಿದ್ದ ಗಂಡ..!

ತನ್ನ ಮಾಜಿ ಪತ್ನಿ ಮಂಜುಳಾ ನಡೆಸುತ್ತಿದ್ದ ಈ ರೀತಿಯ ಅಪರಾಧ ಚಟುವಟಿಕೆ ಬಗ್ಗೆ ಶಂಕರ್‌ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ. ಇದರಿಂದ ಕುಪಿತಗೊಂಡ ಮಂಜುಳಾ, ಪೊಲೀಸರಿಗೆ ಹಿಡಿದುಕೊಡುತ್ತಾನೆ ಎಂಬ ಕೋಪಕ್ಕೆ ಶಂಕರ್‌ ಕೊಲೆಗೆ ಸುಪಾರಿ ನೀಡಿದ್ದಳು. ಗಣೇಶ್‌ ಮತ್ತು ಮಂಜ ಎಂಬುವರಿಗೆ 1 ಲಕ್ಷ ರೂ.ಗೆ ಸುಪಾರಿ ಕೊಟ್ಟಿದ್ದಳು.

ಗಂಡನ ಕೊಲೆಗೆ ಹೆಂಡ್ತಿ ಸುಪಾರಿ..!

ನವೆಂಬರ್ 25ರ ಬೆಳಗ್ಗೆ 5.30ರಲ್ಲಿ ಬೈಕ್‌ನಲ್ಲಿ ಕೋಳಿ ಫಾರಂ ಕೆಲಸಕ್ಕೆ ಹೋಗುತ್ತಿದ್ದ ಶಂಕರ್‌ ಮೇಲೆ, ಮಾರುತಿ ಬಡಾವಣೆ ಪಿಳ್ಳಗಾನಹಳ್ಳಿ ಗೇಟ್‌ ಬಳಿ ದುಷ್ಕರ್ಮಿಗಳು ದಾಳಿ ನಡೆಸಿದ್ದರು. ಬೈಕ್‌ಗೆ ಕಾರಿನಿಂದ ಗುದ್ದಿಸಿ ಶಂಕರ್‌ ಕೆಳಗೆ ಬೀಳುವಂತೆ ಮಾಡಿದರು. ಬಳಿಕ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು. ಗಾಯಾಳು ಶಂಕರ್‌ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದ ಶಂಕರ್‌, ಇದೀಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಪೊಲೀಸರ ಕಣ್ಣು ಕೆಂಪಾಗಿಸಿತು ಮಾಹಿತಿದಾರನ ಮೇಲಿನ ದಾಳಿ..!

ಈ ಕುರಿತು ಶಂಕರ್‌ ಎರಡನೇ ಪತ್ನಿ, ಕೋಣನಕುಂಟೆ ಠಾಣೆಗೆ ದೂರು ನೀಡಿದ್ದರು. ಮಂಜುಳಾ ಮತ್ತು ಸಹಚರರ ವಿರುದ್ಧ ಆರೋಪ ಮಾಡಿದ್ದರು. ದಕ್ಷಿಣ ವಿಭಾಗ ಡಿಸಿಪಿ ರೋಹಿಣಿ ಕಟೋಚ್‌, ಮಾಹಿತಿದಾರನ ಕೊಲೆಗೆ ಯತ್ನಿಸಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದರು. ವಿಶೇಷ ತಂಡ ರಚಿಸಿ ಆರೋಪಿಗಳ ಬಂಧನಕ್ಕೆ ಸೂಚಿಸಿದ್ದರು. ಮಂಜುಳಾ ಮತ್ತು ಚಲುವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಉಳಿದ ಆರೋಪಿಗಳ ಸುಳಿವು ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.