ಉಡುಪಿ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ವಿಷಯದಲ್ಲಿ ಮಸೀದಿ ನಿರ್ಮಿಸಲು ಭೂಮಿ ಹಂಚಿಕೆ ಮಾಡಿಕೊಟ್ಟ ಸರ್ವೋಚ್ಚ ನ್ಯಾಯಾಲಯದ ತೀರ್ಪು ಸ್ವೀಕರಿಸಲು ಅರ್ಹವಲ್ಲ ಎಂದು ಶ್ರೀಪುರಿ ಗೋವರ್ಧನ ಪೀಠದ ಶ್ರೀ ನಿಶ್ಚಲಾನಂದಸರಸ್ವತೀ ಸ್ವಾಮೀಜಿ ಹೇಳಿದರು.

ಪೇಜಾವರ ಮಠಕ್ಕೆ ಬುಧವಾರ ಭೇಟಿ ನೀಡಿದ ಸಂದರ್ಭ ಮಾತನಾಡಿದ ಅವರು, ಸರ್ವೋಚ್ಚ ನ್ಯಾಯಾಲಯಕ್ಕಿಂತ ಸಂಸತ್ ದೊಡ್ಡದಲ್ಲವೆ? ಧಾರ್ಮಿಕ ವಿಷಯದಲ್ಲಿ ಸಂತರ ನಿರ್ಧಾರವೇ ಅಂತಿಮ. ಕೋರ್ಟ್ ಇದರಲ್ಲಿ ಹಸ್ತಕ್ಷೇಪ ನಡೆಸುವುದು ತರವಲ್ಲ. ಬಾಬರ್ ಹೆಸರು ಭಾರತದಲ್ಲಿ ಇರಲೇಬಾರದು. ಒಂದು ಇಂಚು ಭೂಮಿಯೂ ಕೊಡಬಾರದು. ಭಾರತದಲ್ಲಿ ಬಾಬರ್ ಹೆಸರಿನಲ್ಲಿ ಯಾವುದೇ ಮಸೀದಿ ರಚನೆಯಾಗುವುದು ಬೇಡ. ನಮ್ಮ ಔದಾರ್ಯವನ್ನು ದೌರ್ಬಲ್ಯವಲ್ಲ. ಪಾಕಿಸ್ಥಾನ, ಬಾಂಗ್ಲಾದೇಶ ಕೊಟ್ಟ ಬಳಿಕ ಇನ್ನು ಮಸೀದಿಗಾಗಿ ಜಾಗವೇಕೆ? ಭಾರತದಲ್ಲಿ ಮೂರು ರಾಷ್ಟ್ರಪತಿಗಳು, ಒಬ್ಬರು ಗೃಹ ಸಚಿವರು, ಒಬ್ಬರು ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಾಧೀಶರನ್ನಾಗಿ ಮುಸ್ಲಿಮರನ್ನು ಮಾಡಲಾಗಿದೆ. ರಾಜಕಾರಣಿಗಳು ಯಾವತ್ತೂ ಅಧಿಕಾರಕ್ಕಾಗಿಯೇ ವ್ಯವಹರಿಸುತ್ತಾರೆ ಎಂದರು.
ಶ್ರೀಕೃಷ್ಣ ಮಠಕ್ಕೆ ಭೇಟಿ
ಶ್ರೀ ನಿಶ್ಚಲಾನಂದಸರಸ್ವತೀ ಸ್ವಾಮೀಜಿ ಯವರು ಪೇಜಾವರ ಮಠದಿಂದ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಪುರಿ ಸ್ವಾಮೀಜಿಯವರನ್ನು ಸ್ವಾಗತಿಸಿ, ಗೌರವಿಸಿದರು. ಪೇಜಾವರ ಮಠದಲ್ಲಿ ಶ್ರೀ ವಿಶ್ವೇಶತೀರ್ಥರು ಪುರಿ ಶ್ರೀಗಳನ್ನು ಗೌರವಿಸಿದರು. ಪುರಿ ಸ್ವಾಮೀಜಿಯವರ ಶಿಷ್ಯ ಶ್ರೀ ನಿರ್ವಿಕಲ್ಪಾನಂದಸರಸ್ವತೀ ಸ್ವಾಮೀಜಿ, ಆಪ್ತ ಕಾರ್ಯದರ್ಶಿ ಪ್ರೇಮಚಂದ್ರ ಝಾ, ಶಾಸಕ ಕೆ. ರಘುಪತಿ ಭಟ್ ಉಪಸ್ಥಿತರಿದ್ದರು.
Comments are closed.