
ಹೊಸದಿಲ್ಲಿ: ಐಎನ್ಎಕ್ಸ್ ಮೀಡಿಯಾ ಅಕ್ರಮ ಹಣಕಾಸು ವರ್ಗಾವಣೆ ಹಗರಣದಲ್ಲಿ ಸದ್ಯ ಸಿಬಿಐನಿಂದ ಬಂಧಿತರಾಗಿ ಜೈಲು ಪಾಲಾಗಿರುವ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಇಂದಿನ ದಿನವನ್ನು ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಅವರು ಸಲ್ಲಿಸಿರುವ ಜಾಮೀನು ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಲಿರುವ ಹಿನ್ನೆಲೆಯಲ್ಲಿ ಜಾಮೀನು ಸಿಗಲಿದೆ ಎಂಬುದಾಗಿ ಅವರು ಅಂದುಕೊಂಡಿದ್ದಾರೆ.
ಸದ್ಯ ಚಿದಂಬರಂ ಅವರು ಜಾರಿ ನಿರ್ದೇಶನಾಲಯದ ವಶದಲ್ಲಿದ್ದು ತನಿಖೆ ಭಾಗವಾಗಿ ವಿಚಾರಣೆ ಎದುರಿಸುತ್ತಿದ್ದಾರೆ.
ಸೆಪ್ಟೆಂಬರ್ 30ರಂದು ದಿಲ್ಲಿ ಹೈಕೋರ್ಟ್ ಚಿದಂಬರಂ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ತನಿಖೆ ತುಂಬಾ ಮುಂದೆ ಸಾಗಿದ್ದು, ಈ ಸಂದರ್ಭದಲ್ಲಿ ಸಾಕ್ಷಿಗಳ ಮೇಲೆ ಆರೋಪಿ ಚಿದಂಬರಂ ಅವರು ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತ್ತು. ಇದನ್ನು ಪ್ರಶ್ನಿಸಿ ಚಿದಂಬರಂ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
‘ಐಎನ್ಎಕ್ಸ್ ಮೀಡಿಯಾಗೆ ವಿದೇಶಿ ದೇಣಿಗೆ ಪಡೆಯಲು ಅನುಮತಿ ನೀಡಲೆಂದು ಯುಪಿಎ ಆಡಳಿತ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದ ಚಿದಂಬರಂ ಅವರು ತಮ್ಮ ಪ್ರಭಾವ ಬಳಸಿದ್ದರು. ಇದಕ್ಕೆ ಪ್ರತಿಯಾಗಿ ಅವರು ಐಎನ್ಎಕ್ಸ್ ಮೀಡಿಯಾ ಕಂಪನಿಯಿಂದ ತಮ್ಮ ಪುತ್ರ ಕಾರ್ತಿಗೆ ಸಹಾಯ ಮಾಡಲು ಆಗ್ರಹಿಸಿದ್ದರು. ಜತೆಗೆ ಕಿಕ್ಬ್ಯಾಕ್ ಕೂಡ ಪಡೆದಿದ್ದರು,’ ಎಂಬ ಆರೋಪ ಆಧರಿಸಿ 2017ರ ಮೇ 15ರಂದು ಚಿದಂಬರಂ ಅವರ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿತ್ತು.
Comments are closed.