ಕರ್ನಾಟಕ

ಮಂಗಳಸೂತ್ರ ಜೊತೆ ಹೋದರೆ ಇಂಟರ್​ವ್ಯೂ ಮಾಡಲ್ಲ ಎಂದವನ ಕೈಗೆ ಸರ ಕೊಟ್ಟು ಹೋದ ಗೃಹಿಣಿ: ಮುಂದೆ ನಡೆದಿದ್ದೇ ಬೇರೆ!

Pinterest LinkedIn Tumblr


ಬೆಂಗಳೂರು: ಕೆಲಸಕ್ಕಾಗಿ ಹುಡುಕುತ್ತ, ಕಂಡಕಂಡಲ್ಲಿ ಕೆಲಸವಿದೆಯಾ ಎಂದು ವಿಚಾರಿಸುವ ಹೆಣ್ಣುಮಕ್ಕಳು ತುಸು ಎಚ್ಚರಿಕೆಯಿಂದ ಇರುವುದು ಒಳಿತು. ಯಾಕೆಂದರೆ ಕೆಲಸ ಕೊಡಿಸುವ ನೆಪದಲ್ಲಿ ದರೋಡೆ ಮಾಡುವ ಗ್ಯಾಂಗ್​ವೊಂದು ಬೆಂಗಳೂರಿನಲ್ಲಿ ಸಕ್ರಿಯವಾಗಿದೆ.

ಬೊಮ್ಮನಹಳ್ಳಿಯಲ್ಲಿ ಒಂದಿಷ್ಟು ಜನ ವಂಚಕರ ಗುಂಪೊಂದು ಇದನ್ನೇ ಫುಲ್​ಟೈಮ್​ ಕೆಲಸವನ್ನಾಗಿಸಿಕೊಂಡಿದೆ. ಯಾವುದಾದರೂ ಹೆಣ್ಣುಮಕ್ಕಳು, ಗೃಹಿಣಿಯರು ಕೆಲಸಕ್ಕಾಗಿ ಅಲೆಯುತ್ತಿದ್ದಾರೆ ಎಂಬುದು ಗೊತ್ತಾದರೆ ಸಾಕು. ಅವರ ಹಿಂದೆ ಬೀಳುತ್ತಾರೆ. ಡಿ ಮಾರ್ಟ್​ನಲ್ಲಿ ಕೆಲಸ ಕೊಡಿಸುತ್ತೇವೆ ಎಂದು ಹೇಳಿ ನಂಬಿಸಿ ಅವರ ಬಳಿಯಿರುವ ಹಣ, ಒಡವೆ ದೋಚುತ್ತಾರೆ.

ಸದ್ಯ ಗೃಹಿಣಿಯೊಬ್ಬರಿಗೆ ಈ ಅನುಭವ ಆಗಿದೆ. ಲಕ್ಷ್ಮೀ ಎಂಬುವರು ಕೆಲಸ ಹುಡುಕುತ್ತಿದ್ದರು. ಅದನ್ನು ತಿಳಿದುಕೊಂಡ ಓರ್ವ ವಂಚಕ ಅವರ ಬಳಿ ಬಂದು ಡಿ ಮಾರ್ಟ್​ನಲ್ಲಿ ಕೆಲಸ ಕೊಡಿಸುತ್ತೇನೆ ಎಂದಿದ್ದಾನೆ. ಹಾಗೇ ಆಟೋದಲ್ಲಿಯೇ ಇಂಟರ್​ವ್ಯೂಗೆ ಕರೆದುಕೊಂಡು ಹೋಗಿದ್ದಾನೆ. ಮಹಿಳೆ ಸಂದರ್ಶನಕ್ಕೆ ಒಳಗೆ ಹೋಗುವ ವೇಳೆ, ಮಾಂಗಲ್ಯ ಸರ ಕೊಟ್ಟು ಹೋಗಿ. ಅದನ್ನು ಹಾಕಿಕೊಂಡು ಹೋದರೆ ಮ್ಯಾನೇಜರ್​ ಕೆಲಸ ಕೊಡಿಸುವುದಿಲ್ಲ ಎಂದು ನಂಬಿಸಿದ್ದಾನೆ. ಒಳ್ಳೆಯವನಂತೆ ಸೋಗು ಹಾಕಿಕೊಂಡಿದ್ದ ಅವನ ಮಾತನ್ನು ನಂಬಿದ ಗೃಹಿಣಿ 25 ಗ್ರಾಂ. ಚಿನ್ನದ ಸರ ಬಿಚ್ಚಿ ಅವನ ಬಳಿ ಕೊಟ್ಟು ಒಳಗೆ ಹೋಗಿದ್ದಾರೆ. ಆದರೆ ಇಂಟರ್​ವ್ಯೂ ಮುಗಿಸಿ ಹೊರಬರುವಷ್ಟರಲ್ಲಿ ಆ ಆಟೋಚಾಲಕ ಅಲ್ಲಿರಲಿಲ್ಲ. ತಾಳಿ ಸಮೇತ ಪರಾರಿಯಾಗಿದ್ದ.

ಘಟನೆಯಿಂದ ನೊಂದಿರುವ ಮಹಿಳೆ ಬೊಮ್ಮನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ಕೂಡ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನಲಾಗಿದೆ. ಇಂಥದ್ದೇ ಪ್ರಕರಣ ಈಗಾಗಲೇ ಎರಡು ಬಾರಿ ನಡೆದಿದ್ದರೂ ಖಾಕಿ ಪಡೆ ಎಚ್ಚೆತ್ತುಕೊಂಡಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.

Comments are closed.