
ಹೊಸದಿಲ್ಲಿ: ಕಳೆದ ಜುಲೈನಲ್ಲಿ ಉತ್ತರ ದಿಲ್ಲಿಯ ಬುರಾರಿಯಲ್ಲಿ ಒಂದೇ ಕುಟುಂಬದ ಹನ್ನೊಂದು ಮಂದಿ ಮೃತಪಟ್ಟಿರುವುದು ಸಾಮೂಹಿಕ ಆತ್ಮಹತ್ಯೆಯಿಂದಲ್ಲ, ಬದಲಿಗೆ, ಧಾರ್ಮಿಕ ಆಚರಣೆ ವೇಳೆ ಘಟಿಸಿದ ಆಕಸ್ಮಿಕ ಸನ್ನಿವೇಶಕ್ಕೆ ಬಲಿಯಾಗಿದ್ದಾರೆ ಎನ್ನುವ ಸಂಗತಿ ಹೊರ ಬಿದ್ದಿದೆ.
ಸಾಯುವ ಸಂದರ್ಭ ಅವರಲ್ಲಿದ್ದ ಮಾನಸಿಕ ಸ್ಥಿತಿ ಕುರಿತು ಮೃತದೇಹಗಳ ಮೇಲೆ ನಡೆಸಿದ ಸಮಗ್ರ ಪರೀಕ್ಷೆಯಿಂದ ಈ ಸಂಗತಿ ಬಯಲಾಗಿದೆ ಎಂದು ದಿಲ್ಲಿ ಪೊಲೀಸರು ಸಿಬಿಐಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ‘‘ಹನ್ನೊಂದು ಜನರ ಮಾನಸಿಕ ಸ್ಥಿತಿ ಸರಿಯಾಗಿಯೇ ಇತ್ತು. ಅವರಲ್ಲಿ ಯಾರೊಬ್ಬರಿಗೂ ಆತ್ಮಹತ್ಯೆ ಮಾಡಿಕೊಳ್ಳುವ ಇಚ್ಛೆ ಇರಲಿಲ್ಲ. ಆದರೆ, ಅಪಾಯಕಾರಿ ಧಾರ್ಮಿಕ ಆಚರಣೆ ವೇಳೆ ಘಟಿಸಿದ ಅವಘಡಕ್ಕೆ ಎಲ್ಲರೂ ಬಲಿಯಾದರು,’’ ಎಂದು ವರದಿ ತಿಳಿಸಿದೆ.
ಮೃತ ಚುಂದವಾಟ್ ಕುಟುಂಬದ ಸದಸ್ಯರು ಬರೆದಿಟ್ಟ ಪತ್ರಗಳ ಅಧ್ಯಯನ ಹಾಗೂ ಅವರ ಕುಟುಂಬದ ಇತರೆ ಸದಸ್ಯರ ಅಭಿಪ್ರಾಯ ಕಲೆಹಾಕಿದ ಸಿಬಿಐನ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು, ಈ ಘಟನೆಯ ಹಿಂದೆ ಬೇರೆಯವರ ಚಿತಾವಣೆ ಇಲ್ಲ ಎನ್ನುವುದನ್ನೂ ಸ್ಪಷ್ಟಪಡಿಸಿದ್ದಾರೆ.
Comments are closed.