ರಾಷ್ಟ್ರೀಯ

ಜೆಡಿಯು ತೆಕ್ಕೆಗೆ ಮೋದಿಗೆ ನೆರವಾಗಿದ್ದ ಪ್ರಶಾಂತ್ ಕಿಶೋರ್

Pinterest LinkedIn Tumblr


ಹೊಸದಿಲ್ಲಿ: ಮೋದಿಯನ್ನು ಪ್ರಧಾನಿ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಪ್ರಶಾಂತ್ ಕಿಶೋರ್ ಜೆಡಿಯುಗೆ ಸೇರ್ಪಡೆಯಾಗಿದ್ದಾರೆ. ಬಿಹಾರದ ಪಟನಾದಲ್ಲಿ ನಡೆದ ಜೆಡಿಯು ಪಕ್ಷದ ಸಭೆಯಲ್ಲಿ ರಾಜಕೀಯ ತಜ್ಞ ಪ್ರಶಾಂತ್ ಕಿಶೋರ್‌ರನ್ನು ಬಿಹಾರ ಸಿಎಂ ನಿತೀಶ್ ಕುಮಾರ್ ತಮ್ಮ ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು.

2014ರ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು ಗೆಲ್ಲಿಸಲು ಚುನಾವಣಾ ರಣತಂತ್ರಜ್ಞ ಪ್ರಶಾಂತ್ ಕಿಶೋರ್ ಪ್ರಮುಖ ಪಾತ್ರ ವಹಿಸಿದ್ದರು. ಬಳಿಕ, ಬಿಜೆಪಿ ಜತೆಗಿನ ಸಖ್ಯ ತೊರೆದು ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಮಹಾಮೈತ್ರಿಕೂಟವನ್ನು ಗೆಲ್ಲಿಸಲು ಸಹಾಯ ಮಾಡಿದ್ದರು. ಆ ವೇಳೆ ಎನ್‌ಡಿಎ ತೊರೆದಿದ್ದ ನಿತೀಶ್‌ ಕುಮಾರ್‌ರನ್ನು ಮತ್ತೆ ಸಿಎಂ ಮಾಡಲು ಮಹಾಮೈತ್ರಿಕೂಟಕ್ಕೆ ನೆರವಾಗಿದ್ದರು.

ಬಳಿಕ ಜೆಡಿಯುಗೆ ರಾಜಕೀಯ ಸಲಹೆಗಾರರಾಗಿದ್ದ ಪ್ರಶಾಂತ್ ಕಿಶೋರ್ ಪಕ್ಷದ ಆಪ್ತ ವಲಯಗಳಲ್ಲಿ ಗುರುತಿಸಿಕೊಂಡಿದ್ದರು. ಈಗ, ಜನತಾದಳ ( ಯು ) ನಿತೀಶ್‌ ಬಣದೊಂದಿಗೆ ಸೇರಿಕೊಳ್ಳುವ ಮೂಲಕ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ್ದಾರೆ. ಅಲ್ಲದೆ, ಎನ್‌ಡಿಎಗೆ ಮರಳಿರುವ ಜೆಡಿಯುನೊಂದಿಗೆ ಹೊಸ ರಾಜಕೀಯ ಜೀವನಕ್ಕೆ ಅಡಿಯಿಡುತ್ತಿರುವುದಾಗಿ ಇಂದು ಬೆಳಗ್ಗೆ ಪಕ್ಷಕ್ಕೆ ಸೇರುವ ಬಗ್ಗೆ ಪ್ರಶಾಂತ್ ಕಿಶೋರ್ ಟ್ವೀಟ್‌ ಮೂಲಕ ಸುಳಿವು ನೀಡಿದ್ದರು.

ಇನ್ನು, ಭಾರತೀಯ ರಾಜಕೀಯ ಕಾರ್ಯ ಸಮಿತಿಯ ಸಂಸ್ಥಾಪಕರೂ ಆಗಿರುವ ಪ್ರಶಾಂತ್ ಕಿಶೋರ್, ಜೆಡಿಯುನಲ್ಲಿ ನಂಬರ್ 2 ಆಗಿ ಗುರುತಿಸಿಕೊಳ್ಳಲಿದ್ದಾರೆ ಎಂದು ಪಕ್ಷದ ನಾಯಕರೊಬ್ಬರು ವಿಜಯ ಕರ್ನಾಟಕ ಸೋದರ ಪತ್ರಿಕೆ ಎಕನಾಮಿಕ್ ಟೈಮ್ಸ್‌ಗೆ ಹೇಳಿಕೊಂಡಿದ್ದಾರೆ. ಅಲ್ಲದೆ, ಮುಂಬರುವ ಲೋಕಸಭೆ ಚುನಾವಣೆಯಲ್ಲೂ ಅವರಿಗೆ ಪಕ್ಷ ಟಿಕೆಟ್ ನೀಡಲಿದೆ ಎಂದು ಹೇಳಲಾಗುತ್ತಿದೆ. ಜತೆಗೆ ಬಿಹಾರದಲ್ಲಿ ಸದ್ಯ ಎನ್‌ಡಿಎ ಮೈತ್ರಿಕೂಟದ 4 ಪಕ್ಷಗಳು ಸೀಟು ಹೊಂದಾಣಿಕೆಗಾಗಿ ಹರಸಾಹಸ ಪಡುತ್ತಿರುವ ಹಿನ್ನೆಲೆಯಲ್ಲಿ ಬಿಹಾರ ಸಿಎಂ ನಿತೀಶ್‌ ಕುಮಾರ್‌ರನ್ನು ಮುಂದಿನ ಪ್ರಧಾನಿಯಾಗಲು ರಾಜಕೀಯ ಸಲಹೆಗಾರರಾಗಿದ್ದ ಪ್ರಶಾಂತ್ ಕಿಶೋರ್ ನೆರವಾಗ್ತಾರಾ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.

Comments are closed.