ಕ್ರೀಡೆ

ಕೊಹ್ಲಿಗೆ ಅನುಭವ ಸಾಲದು: ಟೀಮ್ ಇಂಡಿಯಾ ನಾಯಕನ ವೈಫಲ್ಯಗಳ ಕುರಿತು ಮಾತನಾಡಿದ ಸುನಿಲ್ ಗವಾಸ್ಕರ್

Pinterest LinkedIn Tumblr


ಹೊಸದಿಲ್ಲಿ: ಕೊನೆಗೂ ಟೀಮ್ ಇಂಡಿಯಾ ವಿರಾಟ್ ಕೊಹ್ಲಿ ವೈಫಲ್ಯಗಳ ಬಗ್ಗೆ ಮಾತನಾಡಲು ಮಾಜಿ ನಾಯಕ ಸುನಿಲ್ ಗವಾಸ್ಕರ್ ಧೈರ್ಯ ತೋರಿದ್ದಾರೆ.

ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾಕ್ಕೆ ಎದುರಾದ 4-1ರ ಅಂತರದ ಹೀನಾಯ ಸೋಲಿನ ಬಳಿಗ ಕೊಹ್ಲಿ ವೈಫಲ್ಯಗಳ ಬಗ್ಗೆ ಗವಾಸ್ಕರ್ ಮನ ಬಿಚ್ಚಿದ್ದಾರೆ.

ತಾಂತ್ರಿಕ ಸಮಸ್ಯೆಗಳನ್ನು ನಿಭಾಯಿಸಲು ಅನುಭವದ ಕೊರತೆ, ಆಡುವ ಬಳಗವನ್ನು ಆರಿಸುವುದರಲ್ಲಿ ಮಾಡಿರುವ ಎಡವಟ್ಟು, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಕೊಹ್ಲಿ ತಂದಿರುವ ತಪ್ಪಾದ ಬದಲಾವಣೆಗಳ ಬಗ್ಗೆ ಗವಾಸ್ಕರ್ ಪ್ರಶ್ನೆ ಮಾಡಿದ್ದಾರೆ.

ಆಂಗ್ಲರ ನಾಡಿನಲ್ಲಿ ಭಾರತದ ಸರಣಿ ಸೋಲು ಅಚ್ಚರಿ ತಂದಿಲ್ಲ. ಯಾಕೆಂದರೆ ಟೀಮ್ ಇಂಡಿಯಾ ಬೇಕಾದಷ್ಟು ಪೂರ್ವ ತಯಾರಿಯನ್ನು ನಡೆಸಿಲ್ಲ. ದಕ್ಷಿಣ ಆಫ್ರಿಕಾದಲ್ಲೂ ಇದೇ ಸಂಭಿವಿಸಿತ್ತು. ಮತ್ತದೇ ತಪ್ಪು ಮಾಡುವ ಮೂಲಕ ಭಾರತ ಸೋಲಿಗೆ ತಯಾರಿ ನಡೆಸಿದಂತಿದೆ ಎಂದು ಗವಾಸ್ಕರ್ ಬೊಟ್ಟು ಮಾಡಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವಾಗ ಪೂರ್ವ ತಯಾರಿಯು ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಗಿಟ್ಟಿಸಿಕೊಳ್ಳುತ್ತದೆ. ಹಾಗಾಗಿ ಸೋಲು ಅಚ್ಚರಿ ತಂದಿಲ್ಲ. ಮುಂಬರುವ ಆಸ್ಟ್ರೇಲಿಯಾ ಸರಣಿಯಲ್ಲಾದರೂ ಇದೇ ತಪ್ಪು ಪುನರಾವರ್ತಿಸಬಾರದು ಎಂದರು.

ಬ್ಯಾಟ್ಸ್‌ಮನ್ ಆಗಿ ಯಶ ಸಾಧಿಸಿದರೂ ಓರ್ವ ಕ್ಯಾಪ್ಟನ್ ಆಗಿ ವೈಫಲ್ಯ ಅನುಭವಿಸಿರುವ ವಿರಾಟ್ ಕೊಹ್ಲಿ ನಾಯಕತ್ವ ಬಗ್ಗೆ ಮಾತನಾಡಿದ ಗವಾಸ್ಕರ್, ವಿರಾಟ್ ತುಂಬಾನೇ ಕಲಿಯಲಿಕ್ಕಿದೆ. ದಕ್ಷಿಣ ಆಫ್ರಿಕಾ ಬಳಿಕ ಇಂಗ್ಲೆಂಡ್‌ನಲ್ಲಿ ನೋಡಿರುವಂತೆಯೇ ಸರಿಯಾದ ಸಂದರ್ಭದಲ್ಲಿ ಕ್ಷೇತ್ರರಕ್ಷಣೆ ಹಾಗೂ ಬೌಲಿಂಗ್ ಬದಲಾವಣೆ ಮಾಡಿದ್ದರೆ ಫಲಿತಾಂಶ ಬೇರೆಯೇ ಆಗಿರುತ್ತಿತ್ತು ಎಂದರು.

ಮಹೇಂದ್ರ ಸಿಂಗ್ ಧೋನಿ ಬಳಿಕ ನಾಯಕತ್ವ ವಹಿಸಿರುವ ಕೊಹ್ಲಿ, ತಾಂತ್ರಿಕ ಕೌಶಲ್ಯದಲ್ಲಿ ಇನ್ನೂ ಸಾಕಷ್ಟು ಅನುಭವ ಗಳಿಸಬೇಕಿದೆ. ಭಾರತದ ಪಿಚ್‌ನಲ್ಲಿ ಬೇಗನೇ ವಿಕೆಟುಗಳು ಬೀಳಬಹುದು. ಆದರೆ ಜೊತೆಯಾಟವನ್ನು ಮುರಿಯುವುದನ್ನು ಕರಗತ ಮಾಡಿಕೊಳ್ಳಬೇಕು ಎಂದರು.

ಅದೇ ಹೊತ್ತಿಗೆ ತಂಡದ ಆಯ್ಕೆ ವಿಚಾರದಲ್ಲೂ ಕೊಹ್ಲಿ ಅತಿ ಹೆಚ್ಚು ಪ್ರಾಮಾಣಿಕತೆಯನ್ನು ಮೆರೆಯಬೇಕಿದೆ ಎಂದರು. ಸಮಸ್ಯೆ ಎಲ್ಲಿದೆ ಎಂಬುದನ್ನು ಅರಿತುಕೊಂಡು ಪಿಚ್ ಹಾಗೂ ಪರಿಸ್ಥಿತಿಗೆ ಹೊಂದಿಕೊಂಡು ಅತ್ಯುತ್ತಮ ಅಗ್ರ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಹಾಗೂ ಆಲರೌಂಡರ್‌ಗಳನ್ನು ಆಯ್ಕೆ ಮಾಡಬೇಕಿದೆ ಎಂದರು.

ಇದಕ್ಕೂ ಮೊದಲು ಈಗಿನ ಭಾರತ ತಂಡ ಕಳೆದ 15-20 ವರ್ಷಗಳಲ್ಲೇ ಶ್ರೇಷ್ಠ ಭಾರತ ತಂಡ ಎಂಬ ಕೋಚ್ ರವಿಶಾಸ್ತ್ರಿ ಹೇಳಿಕೆಗೂ ಗವಾಸ್ಕರ್ ಪ್ರತ್ಯುತ್ತರ ನೀಡಿದ್ದರು. 1980ರ ದಶಕದಲ್ಲಿ ಇಂಗ್ಲೆಂಡ್ ನೆಲದಲ್ಲಿ ಭಾರತ ಸರಣಿ ಗೆದ್ದಿದೆ. 2007ರಲ್ಲೂ ರಾಹುಲ್ ದ್ರಾವಿಡ್ ಮುಂದಾಳತ್ವದಲ್ಲೂ ಸರಣಿ ಗೆದ್ದಿದ್ದೇವೆ ಎಂದರು ಹೇಳಿದರು.

Comments are closed.