ಮನೋರಂಜನೆ

ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್ ಪ್ರಕರಣ: ಪೊಲೀಸರಿಗೆ ಬೇರೆ ಕೆಲ್ಸ ಇಲ್ಲವೇ ಎಂದ ಸುಪ್ರೀಂ!

Pinterest LinkedIn Tumblr


ನವದೆಹಲಿ: ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಕಣ್ಸಸನ್ನೆ ಮಾಡುವ ಮೂಲಕ ಒಂದೇ ದಿನದಲ್ಲಿ ಸ್ಟಾರ್ ಆದ ಪ್ರಿಯಾ ವಾರಿಯಾರ್ ನಟನೆಯ ಚಿತ್ರದ ಹಾಡು ಧಾರ್ಮಿಕ ನಂಬಿಕೆ ಹಾಗೂ ಭಾವನೆಗೆ ಧಕ್ಕೆ ತರುವಂತಿದ್ದು, ಅದ್ದರಿಂದ ಹಾಡನ್ನು ನಿಷೇಧ ಮಾಡಿ ನಟಿಯ ವಿರುದ್ಧ ಕ್ರಮಕೈಗೊಳ್ಳುವಂತೆ ಹೈದರಾಬಾದ್ ಮೂಲದ ಕೆಲ ಯುವಕರು ದೂರು ನೀಡಿದ್ದರು. ಈ ದೂರನ್ನು ಸ್ವೀಕರಿಸಿದ ಹೈದರಾಬಾದ್ ಪೊಲೀಸರು ಚಿತ್ರದ ನಿರ್ದೇಶಕ, ನಿರ್ಮಾಪಕ ಹಾಗೂ ನಟಿ ಪ್ರಿಯಾ ವಾರಿಯಾರ್ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣ ದಾಖಲಾಗಿದ್ದನ್ನು ಪ್ರಶ್ನಿಸಿ ಚಿತ್ರ ತಂಡ ಸುಪ್ರೀಂ ಮೆಟ್ಟಿಲು ಏರಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು, ಸಿನಿಮಾದಲ್ಲಿ ಕಣ್ಣು ಹೊಡೆಯುವುದು ದೈವ ವಿರೋಧಿ ಹಾಗೂ ನೈತಿಕ ವಿರೋಧಿಯೂ ಅಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೇ ಪ್ರಕರಣದಲ್ಲಿ ಪೊಲೀಸರಿಗೆ ಮಾಡಲು ಬೇರೆ ಕೆಲಸವಿಲ್ಲವೇ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದು ಕೇಸ್ ವಜಾಗೊಳಿಸುವಂತೆ ಆದೇಶಿಸಿದ್ದಾರೆ.

ಏನಿದು ಪ್ರಕರಣ?
ಒರು ಅಡಾರ್ ಲವ್ ಚಿತ್ರದ ಮಾಣಿಕ್ಯ ಮಲರಾಯ ಪೂವಿ ಹಾಡಿನಲ್ಲಿ ಮುಸಲ್ಮಾನರ ಧಾರ್ಮಿಕ ಭಾವನೆಗೆ ಧಕ್ಕೆ ಆಗುವ ವಿಚಾರಗಳಿವೆ ಎಂದು ಹೈದರಾಬಾದಿನ ಫಲಕ್‍ನಾಮಾ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಮೊಹಮ್ಮದ್ ಅಬ್ದುಲ್ ಖಾನ್ ತನ್ನ ಸ್ನೇಹಿತರ ಜೊತೆ ದೂರು ದಾಖಲಿಸಿದ್ದರು. ಹಾಡಿನಲ್ಲಿ ಪ್ರವಾದಿ ಕೀರ್ತನೆಗಳನ್ನು ಬಳಸಿರುವುದು ಸರಿಯಲ್ಲ ಎಂದು ದೂರಿನಲ್ಲಿ ತಿಳಿಸಿದ್ದರು.

ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಲು ಸೂಚನೆ ನೀಡುವಂತೆ ನಟಿ ಪ್ರಿಯಾ ವರಿಯಾರ್ ಪರವಾಗಿ ಚಿತ್ರ ತಂಡ ಸುಪ್ರೀಂ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. ಜನವರಿಯಲ್ಲಿ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಪೊಲೀಸ್ ತನಿಖೆಗೆ ತಡೆ ನೀಡಿತ್ತು.

ಮಲಯಾಳಂಯೇತರ ರಾಜ್ಯಗಳಲ್ಲಿ ದೂರು ದಾಖಲಿಸಿರುವವರು ಹಾಡನ್ನ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಪ್ರವಾದಿ ಹಾಗೂ ಅವರ ಮೊದಲ ಪತ್ನಿ ಖದೀಜಾ ಅವರ ನಡುವಿನ ಪ್ರೀತಿಯನ್ನು ಹಾಡು ಶ್ಲಾಘಿಸುತ್ತದೆ ಎಂದು ಪ್ರಿಯಾ ಪರ ಸಲ್ಲಿಸಿದ್ದ ಅರ್ಜಿಯಲ್ಲಿ ಸ್ಪಷ್ಟನೆ ನೀಡಲಾಗಿತ್ತು. ಇದು ಜಾನಪದ ಹಾಡು. ಜಬ್ಬರ್ ಎಂಬವರು 1978ರಲ್ಲಿ ರಚಿಸಿದ್ದಾರೆ. ಕಳೆದ 40 ವರ್ಷಗಳಿಂದ ಮುಸ್ಲಿಮರು ಇದನ್ನು ಬಳಸುತ್ತಿದ್ದು, ಈಗ ಏಕೆ ವಿರೋಧಿಸುತ್ತಿದ್ದಾರೆ ಎಂದು ಚಿತ್ರ ತಂಡ ಪ್ರಶ್ನಿಸಿತ್ತು.

Comments are closed.