ಕುಂದಾಪುರ: ಬ್ರಿಟೀಷರ ದಾಸ್ಯದಿಂದ ಹೊರತಂದು ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಶ್ರಮಿಸಿದ ಹಲವು ಮಹಾನ್ ನಾಯಕರ ತ್ಯಾಗ ಹಾಗೂ ಬಲಿದಾನಗಳನ್ನು ಸ್ಮರಿಸುವ ಮೂಲಕ ಅವರು ಹಾಕಿಕೊಟ್ಟ ಉತ್ತಮ ಹೆಜ್ಜೆಯಲ್ಲಿ ನಾವು ಸಾಗಬೇಕು ಎಂದು ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಟಿ. ಭೂಬಾಲನ್ ಹೇಳಿದರು.
ಅವರು ಇಲ್ಲಿನ ಗಾಂಧಿ ಮೈದಾನದಲ್ಲಿ ಬುಧವಾರ ನಡೆದ 72 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿದ ಬಳಿಕ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.


(ಕುಂದಾಪುರ ಗಾಂಧಿ ಮೈದಾನ)


(ಕುಂದಾಪುರ ಪುರಸಭೆ)
ಸ್ವತಂತ್ರ್ಯೋತ್ಸವದ ಮಹತ್ವವನ್ನು ಕಡೆಗಣಿಸಬಾರದು. ಹಿರಿಯರ ಭವ್ಯ ಭಾರತದ ಕನಸು ನನಸು ಮಾಡುವಲ್ಲಿ ಅವಿರತ ಶ್ರಮ ವಹಿಸಬೇಕು. ದೇಶವಾಸಿಗಳ ಅಭಿವೃದ್ದಿಯ ಚಿಂತನೆಯಲ್ಲಿ ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳು ನಮ್ಮ ಸಮಾಜದ ಕಟ್ಟಕಡೆಯ ಜನರಿಗೂ ತಲುಪಬೇಕು ಎನ್ನುವುದೆ ಸ್ವಾತಂತ್ರ್ಯದ ಪರಮ ಗುರಿಯಾಗಿದ್ದು ಸರ್ಕಾರದ ಪರಿಣಾಮಕಾರಿ ಜನಪರ ಯೋಜನೆಗಳನ್ನು ಜನರು ಸದುಪಯೋಗ ಪಡಿಸಿಕೊಂಡಾಗ ಮಾತ್ರ ಯೋಜನೆಯ ಜಾರಿಯ ಉದ್ದೇಶಗಳು ಸಾರ್ಥಕತೆ ಪಡೆಯಲು ಸಾಧ್ಯ. ಕೇವಲ ಸರಕಾರದ ಯೋಜನೆಗಳಷ್ಟೇ ಅಲ್ಲದೇ ಪ್ರತಿಯೊಬ್ಬ ನಾಗರಿಕನು ಕೂಡ ಪ್ರಗತಿಯ ರೂವಾರಿಗಳಗಬೇಕಿದೆ. ರಾಜ್ಯದ ಜನರಿಗಾಗಿ ಸರಕಾರವು ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿ ಭಾಗ್ಯ, ಮನಸ್ವಿನಿ, ಬಾಪೂಜಿ ಸೇವಾಕೇಂದ್ರ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ರೂಪಿಸಿದ್ದು ಅದನ್ನು ಪರಿಣಾಮಕಾರಿಯಾಗಿ ಅನುಷ್ಟಾನ ಮಾಡಲಾಗುತ್ತಿದೆ.
ಭಾರತ ದೇಶವು ಹಲವು ಜಾತಿ, ಧರ್ಮಗಳು ಹಾಗೂ ಭಾಷೆಯ ಬೀಡಾಗಿದ್ದು ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತಿದ್ದೇವೆ. ಸಾಮರಸ್ಯವೇ ಜೀವನವೆಂಬ ಕಲ್ಪನೆಯೊಂದಿಗೆ ರಾಷ್ಟ್ರಪ್ರೇಮದ ಚಿಂತನೆಯೊಂದಿಗೆ ಯುವಜನತೆ ಮುನ್ನುಗ್ಗಬೇಕು. ಸಾಧನೆ ನಿರಂತರವಾಗಿದ್ದು ಸಾಧಿಸಿದವರನ್ನು ಸ್ಮರಿಸಬೇಕಿದೆ. ಪ್ರತಿಯೊಬ್ಬ ನಾಗರೀಕನು ತಮ್ಮತಮ್ಮ ಕಾರ್ಯಕ್ಷೇತ್ರದಲ್ಲಿ ಸೇವಾಮನೋಭಾವನೆಯಿಂದ ಕೆಲಸ ಮಾಡಿದರೇ ದೇಶವು ವಿಶ್ವದಲ್ಲಿಯೇ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಕರೆಕೊಟ್ಟರು.
ವಿಶೇಷ ಪರೇಡ್….
ಕುಂದಾಪುರ ಠಾಣಾಧಿಕಾರಿ ಹರೀಶ್ ಆರ್. ನಾಯ್ಕ್ ಅವರ ನೇತೃತ್ವದಲ್ಲಿ ಪೊಲೀಸ್, ಗೃಹ ರಕ್ಷಕ, ಎನ್ಸಿಸಿ, ಸ್ಕೌಟ್ಸ್ ಎಂಡ್ ಗೈಡ್ಸ್, ಭಾರತ್ ಸೇವಾದಳ ತಂಡ, ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಇದೇ ಮೊದಲ ಬಾರಿಗೆ ತೆರೆದ ಜೀಪಿನಲ್ಲಿ ಎಸಿ ಭೂಬಾಲನ್ ಹಾಗೂ ಖಡ್ಗಧಾರಿಯಾದ ಪಿ.ಎಸ್.ಐ. ಹರೀಶ್ ಅವರೊಂದಿಗೆ ಪರೇಡ್ ವೀಕ್ಷಣೆ ನಡೆಸಿದ್ದು ವಿಶೇಷವಾಗಿತ್ತು.
ಕುಂದಾಪುರ ತಾಲ್ಲೂಕು ಪಂಚಾಯತ್ ಅಧ್ಯಕ್ಷೆ ಜಯಶ್ರೀ ಎಸ್. ಮೊಗವೀರ, ಪುರಸಭೆ ಅಧ್ಯಕ್ಷೆ ವಸಂತಿ ಸಾರಂಗ್, ಪುರಸಭಾ ಉಪಾಧ್ಯಕ್ಷ ರಾಜೇಶ್ ಕಾವೇರಿ, ಕುಂದಾಪುರ ಡಿವೈಎಸ್ಪಿ ಬಿ.ಪಿ. ದಿನೇಶ್ ಕುಮಾರ್, ತಹಶಿಲ್ದಾರ್ ತಿಪ್ಪೇಸ್ವಾಮಿ, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್, ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಕುಂದಾಪುರ ಸರ್ಕಲ್ ಇನ್ಸ್ಪೆಕ್ಟರ್ ಮಂಜಪ್ಪ, ತಾಲ್ಲೂಕು ಪಂಚಾಯಿತಿ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಕಿರಣ್ ಫೆಡ್ನೇಕರ್, ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಕುಸುಮಾಕರ್ ಶೆಟ್ಟಿ, ಪುರಸಭೆ ಹಾಗೂ ತಾ.ಪಂ. ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.
(ಚಿತ್ರ, ವರದಿ- ಯೋಗೀಶ್ ಕುಂಭಾಸಿ)
Comments are closed.