ಕರಾವಳಿ

ತಿರುಪತಿ ಮತ್ತು ಶಬರಿಮಲೆ ದೇವಸ್ಥಾನಗಳಲ್ಲಿ ತುಳುವಿನಲ್ಲಿ ಮಾಹಿತಿ ನೀಡಲು ಒತ್ತಾಯ

Pinterest LinkedIn Tumblr

ಮಂಗಳೂರು ಆಗಸ್ಟ್ 09: ತುಳುವರು ಹೆಚ್ಚಾಗಿ ಭೇಟಿ ನೀಡುತ್ತಿರುವ ಆಂಧ್ರಪ್ರದೇಶದ ತಿರುಪತಿ ತಿರುಮಲ ದೇವಸ್ಥಾನ ಮತ್ತು ಕೇರಳದ ಶಬರಿ ಮಲೆ ಅಯ್ಯಪ್ಪ ದೇವಸ್ಥಾನಗಳಲ್ಲಿ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ತುಳುಭಾಷೆಯಲ್ಲಿ ಸಾರ್ವಜನಿಕ ಮಾಹಿತಿ ನೀಡುವ ವ್ಯವಸ್ಥೆ ಮಾಡಬೇಕೆಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ. ಸಿ. ಭಂಡಾರಿಯವರು ಎರಡೂ ದೇವಸ್ಥಾನಗಳ ಮುಖ್ಯಸ್ಥರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ತಿರುಪತಿಯ ತಿರುಮಲ ದೇವಸ್ಥಾನಗಳಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸಾವಿರಾರು ಭಕ್ತರು ವರ್ಷಂಪ್ರತಿ ಮುಡಿಪು ಅರ್ಪಿಸುವ ಉದ್ದೇಶದಿಂದ ಭೇಟಿ ನೀಡುತ್ತಾರೆ. ಈ ಸಂದರ್ಭದಲ್ಲಿ ಕುಟುಂಬದ ಹಿರಿಯರ ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಜನರು ದೇವಸ್ಥಾನಕ್ಕೆ ಹೋಗುತ್ತಾರೆ. ಆದರೆ ಅಲ್ಲಿಯ ವ್ಯವಸ್ಥೆ ಹಾಗೂ ಭಾಷಾ ಸಮಸ್ಯೆಯ ಅರಿವಿಲ್ಲದೆ ಹಲವಾರು ಮಂದಿ ನಾಪತ್ತೆಯಾಗುವುದನ್ನು ಕೇಳಿದ್ದೇವೆ.

ಅದೇ ರೀತಿ ಶಬರಿಮಲೆ ಅಯ್ಯಪ್ಪ ಕ್ಷೇತ್ರಕ್ಕೆ ಕೂಡಾ ವರ್ಷವಿಡೀ ಮಾಲಾಧಾರಿ ಭಕ್ತರು ಶೃದ್ಧೆಯಿಂದ ಭೇಟಿ ನೀಡುತ್ತಾರೆ. ಅವರಲ್ಲಿ ಹೆಚ್ಚಿನವರು ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರಾಗಿರುತ್ತಾರೆ. ಅಂತವರಿಗೆ ಭಾಷಾ ಸಮಸ್ಯೆಯಿಂದ ದೇವಸ್ಥಾನದ ಪ್ರಕಟಣೆಗಳು, ಘೋಷಣೆಗಳು ಅರ್ಧವಾಗುವುದಿಲ್ಲ. ಆದುದರಿಂದ ತಿರುಪತಿ ಮತ್ತು ಶಬರಿಮಲೆ ದೇವಸ್ಥಾನಗಳಲ್ಲಿ ತುಳು ಭಾಷೆಯಲ್ಲಿ ಸಾರ್ವಜನಿಕ ಮಾಹಿತಿ ಪ್ರಕಟಣೆ ಹಾಗೂ ಘೋಷಣೆಗಳು ಅಗತ್ಯವಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

Comments are closed.