ಕರ್ನಾಟಕ

ತಮಿಳುನಾಡಿಗೆ KSRTC ಬಸ್ ಸಂಚಾರ ಸ್ಥಗಿತ

Pinterest LinkedIn Tumblr


ಬೆಂಗಳೂರು: ತಮಿಳುನಾಡಿನ ಮಾಜಿ ಸಿಎಂ ಕರುಣಾನಿಧಿ ನಿಧನಗೊಂಡಿದ್ದು ಮುಂಜಾಗೃತಾ ದೃಷ್ಟಿಯಿಂದ ಎಚ್ಚೆತ್ತುಕೊಂಡ ಸಾರಿಗೆ ಇಲಾಖೆ ರಾಜ್ಯದಿಂದ ತಮಿಳುನಾಡಿಗೆ ಬಸ್ ಸಂಚಾರವನ್ನು ಸ್ಥಗಿತಗೊಳಿಸಿದೆ.

ಇಂದು ಸಂಜೆ ಕರುಣಾನಿಧಿ ಸ್ಥಿತಿ ಚಿಂತಾಜನಕ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸ್ ಇಲಾಖೆ ಉಭಯ ರಾಜ್ಯಗಳ ಗಡಿ ಭಾಗದಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡಿದೆ.

ಪ್ರತಿದಿನ 432 ಕೆಎಸ್‍ಆರ್ ಟಿಸಿ ಬಸ್ಸುಗಳು ತಮಿಳುನಾಡಿಗೆ ಸಂಚಾರ ಮಾಡುತ್ತವೆ. ಅವುಗಳಲ್ಲಿ ರಾತ್ರಿ ಅವಧಿಯಲ್ಲಿ 150ರಿಂದ 160 ಬಸ್ಸು ತಮಿಳುನಾಡಿಗೆ ಹೋಗುತ್ತಿದ್ದವು. ಇನ್ನು ಚೆನ್ನೈಗೆ ಸುಮಾರು 87 ಬಸ್ಸುಗಳು ಓಡಾಡುತ್ತವೆ. ಹೀಗಾಗಿ ಕೆಎಸ್‍ಆರ್ ಟಿಸಿ ಒಂದು ದಿನಕ್ಕೆ ಸರಾಸರಿ ರೂ.61.71 ಲಕ್ಷ ರೂ. ಆದಾಯ ಪಡೆಯುತ್ತಿದೆ.

ತಮಿಳುನಾಡು ಕಡೆಯಿಂದಲೂ ಯಾವುದೇ ಬಸ್ ಸಂಚಾರವಿಲ್ಲ. ಈಗಾಗಲೇ ತಮಿಳುನಾಡಿನಲ್ಲಿ ಉಳಿರುವ ಬಸ್ಸುಗಳನ್ನು ಅಲ್ಲಿಯೇ ನಿಲ್ಲಿಸಲಾಗಿದೆ. ಬಸ್‍ಗಳಿಗೆ ಯಾವುದೇ ಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮದಿಂದ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಸಂಚಾರ ಸ್ಥಗಿತಗೊಳಿಸುವಂತೆ ಈಗಾಗಲೇ ನಮ್ಮ ಸಿಬ್ಬಂದಿಗೆ ತಿಳಿಸಲಾಗಿದೆ ಎಂದು ಕೆಎಸ್‍ಆರ್ ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಅನಾಹುತಗಳನ್ನು ತಡೆಯುವ ಉದ್ದೇಶದಿಂದ ಕರ್ನಾಟಕ – ತಮಿಳುನಾಡು ಗಡಿ ಭಾಗ ಸೇರಿದಂತೆ, ಬೆಂಗಳೂರಿನ ಕೆಲವು ತಮಿಳು ಭಾಷಿಕರ ಪ್ರದೇಶಗಳಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.

Comments are closed.