ಅಂತರಾಷ್ಟ್ರೀಯ

ನಿಷೇಧಿತ ಉಗ್ರ ಹಫೀಜ್ ಸಯೀದ್’ಗೆ ಆಶ್ರಯ: ಪಾಕ್ ವಿರುದ್ಧ ಭಾರತ ತೀವ್ರ ವಾಗ್ದಾಳಿ

Pinterest LinkedIn Tumblr


ಜಿನಿವಾ; ವಿಶ್ವಸಂಸ್ಥೆ ನಿಷೇಧ ಹೇರಿರುವ ಉಗ್ರ ಹಫೀಜ್ ಸಯೀದ್’ಗೆ ಪಾಕಿಸ್ತಾನ ಆಶ್ರಯ ನೀಡಿರುವ ಹಿನ್ನಲೆಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಶನಿವಾರ ತೀವ್ರವಾಗಿ ಕಿಡಿಕಾರಿದೆ.

ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗದ 37ನೇ ಸಭೆಯಲ್ಲಿ ಮಾತನಾಡಿರುವ ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗದ ಭಾರತದ ಖಾಯಂ ಎರಡನೇ ಕಾರ್ಯದರ್ಶಿ ಮಿನಿ ದೇವಿ ಕುಮಾಮ್ ಅವರು, ಹಫೀಜ್ ಸಯೀದ್ ಮೇಲೆ ವಿಶ್ವಸಂಸ್ಥೆಯೇ ನಿಷೇಧ ಹೇರಿದ್ದರೂ, ಇಂತಹ ಉಗ್ರನಿಗೆ ಪಾಕಿಸ್ತಾನ ಆಶ್ರಯ ನೀಡುವ ಮೂಲಕ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿಯಮ 1267ನ್ನು ಪಾಕಿಸ್ತಾನ ಉಲ್ಲಂಘನೆ ಮಾಡಿದೆ. ತನ್ನ ದೇಶದ ಬೆಂಬಲದೊಂದಿಗೆ ಹಫೀಜ್ ತನ್ನ ಚಟುವಟಿಕೆಗಳನ್ನು ಮುಂದುವರೆಸುತ್ತಿದೆ. ವಿಶ್ವಸಂಸ್ಥೆ ನಿಷೇಧ ಮಾಡಿರುವ ಉಗ್ರ ಸಂಘಟನೆಗಳು ಇಂದು ಪಾಕಿಸ್ತಾನದಲ್ಲಿ ರಾಜಕೀಯವಾಗಿ ಮುಖ್ಯವಾಹಿನಿಯಲ್ಲಿದೆ ಎಂದು ಹೇಳಿದ್ದಾರೆ.

ಪಾಕಿಸ್ತಾನದ ಅಂತರಾಷ್ಟ್ರೀಯ ಕಟ್ಟುಪಾಡುಗಳನ್ನು ಬಳಸಿಕೊಂಡು ಬಹಿರಂಗವಾಗಿಯೇ ಹಣವನ್ನು ಗಳಿಸುತ್ತಿದ್ದಾರೆ. ಭಾರತದ ಗಡಿ ನುಸುಳುವ ಉಗ್ರರಿಗೆ ಪಾಕಿಸ್ತಾನ ಬೆಂಬಲವನ್ನು ನೀಡುತ್ತಿದೆ. 2008ರಲ್ಲಿ ಮುಂಬೈ ಮೇಲೆ ನಡೆದ ದಾಳಿ ಹಾಗೂ 2016ರ ಪಠಾಣ್ ಕೋಟ್ ವಾಯುನೆಲೆ ಮೇಲೆ ನಡೆದ ದಾಳಿ ಹಾಗೂ ಉರಿ ದಾಳಿಯಲ್ಲಿ ಭಾಗಿಯಾಗಿದ್ದ ಎಲ್ಲಾ ಉಗ್ರರ ವಿರುದ್ಧ ಕೂಡಲೇ ಪಾಕಿಸ್ತಾನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇವೆಂದು ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ಉಗ್ರರು ಹುಟ್ಟಿಕೊಳ್ಳುತ್ತಿದ್ದು, ಬೀದಿ ಬೀದಿಗಳಲ್ಲಿ ತಲೆಎತ್ತಿ ಓಡಾಡುತ್ತಿದ್ದಾರೆ. ಭಾರತದಲ್ಲಿ ಮಾನವ ಹಕ್ಕುಗಳ ರಕ್ಷಣೆ ಬಗ್ಗೆ ಉಪನ್ಯಾಸ ನೀಡಲಾಗುತ್ತದೆ ಎಂದು ಹೇಳುತ್ತಾರೆ. ತಮ್ಮ ದೇಶದಲ್ಲಿಯೇ ಪರಿಸ್ಥಿತಿ ಕೆಟ್ಟದಾಗಿರುವಾಗ ಒಂದು ದೇಶದಿಂದ ಪ್ರಜಾಪ್ರಭುತ್ವ ಹಾಗೂ ಮಾನ ಹಕ್ಕುಗಳ ಬಗ್ಗೆ ವಿಶ್ವಕ್ಕೆ ಪಾಠದ ಅಗತ್ಯವಿಲ್ಲ ಎಂದಿದ್ದಾರೆ.

ಹಿಂದು, ಸಿಖ್ ಮತ್ತು ಕ್ರಿಶ್ಚಿಯನ್ ಮಹಿಳೆಯರು, ಅಲ್ಪಸಂಖ್ಯಾತರನ್ನು ಬಲವಂತದಿಂದ ಧರ್ಮದ ಪರಿವರ್ತನೆಗಳಿಸುವುದು ಹಾಗೂ ಬಲವಂತದಿಂದ ವಿವಾಹ ಮಾಡಿಸುವುದಕ್ಕೆ ಪಾಕಿಸ್ತಾನ ಕೂಡಲೇ ಕಡಿವಾಣ ಹಾಕಬೇಕೆಂದು ಭಾರತ ಆಗ್ರಹಿಸುತ್ತದೆ ಎಂದು ಹೇಳಿದ್ದಾರೆ.

ಸಿಂಧ್, ಬಲೂಚಿಸ್ತಾನ ಮತ್ತು ಖೈಬರ್, ಪಖ್ತುಂಖ್ವಾದಲ್ಲಿರುವ ಜನರ ಮೇಲೆ ಪಾಕಿಸ್ತಾನ ದೌರ್ಜನ್ಯವೆಸಗುತ್ತಿದ್ದು, ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡುತ್ತಿದೆ. ಈ ದೌರ್ಜನ್ಯಗಳನ್ನು ನಿಲ್ಲಿಸುವಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಪಾಕಿಸ್ತಾನಕ್ಕೆ ಸೂಚನೆ ನೀಡಬೇಕು. ಪತ್ರಕರ್ತರು, ಹೋರಾಟಗಾರರು, ಭದ್ರತಾ ಸಂಸ್ಥೆಗಳ ಅಧಿಕಾರಿಗಳನ್ನು ಹತ್ಯೆ ಮಾಡಲಾಗುತ್ತಿದ್ದು, ಪಾಕಿಸ್ತಾನ ಇದನ್ನು ನಿಲ್ಲಿಸಬೇಕು ಎಂದು ಕುಮಾಮ್ ಆಗ್ರಹಿಸಿದ್ದಾರೆ.

Comments are closed.