
ಪಾಟ್ನಾ: ಯುವಕನೊಬ್ಬ ತನ್ನ ಮಗಳನ್ನು ಪ್ರೀತಿಸಿ ಸವಾಲು ಹಾಕಿದ್ದನೆಂದು ಆತನ ಕತ್ತು ಸೀಳಿ ಕೊಂದು, ನಂತರ ತಾನಾಗಿಯೇ ಪೊಲೀಸರಿಗೆ ಶರಣಾದ ಘಟನೆ ಬಿಹಾರದ ನೆವೇದಾ ಜಿಲ್ಲೆಯ ಪಕ್ರಿಬ್ರಾವ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಪಿಂಟು ಕುಮಾರ್ (18) ಹತ್ಯೆಯಾದ ಯುವಕ. ಪಿಂಟು ಕುಮಾರ್ ಬೆಳಗ್ಗೆ ಮಾರ್ಕೆಟ್ಗೆಂದು ಹೋಗಿದ್ದ ವೇಳೆ ಯುವತಿಯ ತಂದೆ ಕಪಿಲ್ ಯಾದವ್ ಆತನ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ಪಕ್ರಿಭ್ರಾವ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದು ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ.
ನನಗೆ ನಿನ್ನ ಮಗಳ ಜೊತೆ ಸಂಬಂಧ ಇದೆ. ಏನು ಮಾಡುತ್ತಿಯಾ ಎಂದು ನನಗೆ ಸವಾಲನ್ನು ಹಾಕಿದ್ದನು. ಇದರಿಂದ ನಾನು ಕೋಪಗೊಂಡು ಆತನನ್ನು ಕೊಲೆ ಮಾಡಿದೆ ಎಂದು ಯುವತಿಯ ತಂದೆ ಕಪಿಲ್ ಪೊಲೀಸರಿಗೆ ತಿಳಿಸಿದ್ದಾನೆ.
ಕಪಿಲ್ ಯಾದವ್ ಮಗಳು ಶೃತಿ ಯಾದವ್ ಹಾಗೂ ಪಿಂಟು ನಡುವೆ ಅಕ್ರಮ ಸಂಬಂಧವಿತ್ತು. ಅಷ್ಟೇ ಅಲ್ಲದೇ 2 ತಿಂಗಳ ಹಿಂದೆ ಇಬ್ಬರೂ ಮಾತನಾಡುತ್ತಿದ್ದರು ಎಂದು ಸ್ಥಳೀಯರು ಹೇಳುತ್ತಿದ್ದರು. ಪಿಂಟು ಹಾಗೂ ಕಪಿಲ್ ನಡುವೆ ವಾಗ್ವಾದ ನಡೆದು ಈ ಪ್ರಕರಣದ ಪೊಲೀಸ್ ಠಾಣೆ ಮೆಟ್ಟೀಲೆರಿತ್ತು. ನಂತರ ಅವರನ್ನು ಸಂಧಾನ ಮಾಡಿ ಕಳುಹಿಸಲಾಗಿತ್ತು. ಆದರೆ ಯಾವುದೇ ಲಿಖಿತ ದೂರನ್ನು ದಾಖಲಿಸಿಕೊಂಡಿರಲಿಲ್ಲ ಎಂದು ಎಸ್ಎಚ್ಓ ಸಂಜಯ್ ಕುಮಾರ್ ತಿಳಿಸಿದ್ದಾರೆ.
ಈ ವಿವಾದ ಆದ ಬಳಿಕ ಕಪಿಲ್ ಗ್ರಾಮವನ್ನು ಬಿಟ್ಟು ಹೋಗಿದ್ದನು. ನಂತರ ಮತ್ತೆ ಗ್ರಾಮಕ್ಕೆ ವಾಪಸ್ಸಾಗಿದ್ದನು. ಇದು ಪ್ರೀತಿಗೆ ಸಂಬಂಧಪಟ್ಟ ವಿಷಯವಾಗಿದ್ದು, ಇದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಎಸ್ಡಿಪಿಒ ಶ್ರೀ ಪ್ರಕಾಶ್ ಸಿಂಗ್ ಹೇಳಿದ್ದಾರೆ.
ಈ ಹಿಂದೆ ಯುವಕನಿಗೆ ಯುವತಿಯ ತಂದೆ ಕಪಿಲ್ ಎಚ್ಚರಿಕೆ ನೀಡಿದ್ದರು. ಆದರೆ ಅವನು ಮಾತನ್ನು ಕೇಳದೆ ತನ್ನ ಸಾವನ್ನು ತಾನೇ ಬರಮಾಡಿಕೊಂಡ ಎಂದು ಎಸ್ಪಿ ವಿಕ್ರಮ್ ವರ್ಮನ್ ಕೂಡ ಹೇಳಿದ್ದಾರೆ.
ಆರೋಪಿ ಕಪಿಲ್ ಹತ್ಯೆ ಮಾಡಿದ ಶಸ್ತ್ರ ಹಿಡಿದುಕೊಂಡು ಪೊಲೀಸರಿಗೆ ಶರಣಾಗಿದ್ದ. ನಂತರ ಕೆಲವು ಸ್ಥಳೀಯರ ಸಹಾಯ ಪಡೆದು ಪರಿಸ್ಥಿತಿಯನ್ನು ನಿಯಂತ್ರಿಸಿ, ಪಿಂಟು ದೇಹವನ್ನು ಮರಣೋತ್ತರ ಪರೀಕ್ಷೆಗೆ ಕರೆದೊಯ್ಯಲಾಗಿತ್ತು. ಅಷ್ಟೇ ಅಲ್ಲದೇ ಪಿಂಟು ಕುಟುಂಬಕ್ಕೆ ಸಹಾಯಧನ ನೀಡಲಾಗಿತ್ತು ಎಂದು ಹೇಳಲಾಗಿದೆ.
ಘಟನಾ ಸ್ಥಳಕ್ಕೆ ತಡವಾಗಿ ಬಂದಿದ್ದಕ್ಕೆ ಸ್ಥಳೀಯರು ಪೊಲೀಸರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿ, ವಾಹನವನ್ನು ಹಾನಿಗೊಳಿಸಿದ್ದರು.
Comments are closed.