
ಹೊಸದಿಲ್ಲಿ: ಅತ್ಯಾಚಾರ ಪ್ರಕರಣಗಳ ಬಗ್ಗೆ ‘ದೃಢೀಕರಿಸದ’ ವರದಿಗಳನ್ನು ‘ವೈಭವೀಕರಣ’ ಮಾಡಬೇಡಿ ಎಂದು ಹರ್ಯಾಣದ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಜನತೆಗೆ ಮನವಿ ಮಾಡಿದ್ದಾರೆ.
‘ಘಟನೆ ನಡೆದಿದೆಯೇ, ಇಲ್ಲವೇ, ಎಂಬುದನ್ನು ದೃಢೀಕರಿಸದೆ ವದಂತಿಗಳನ್ನೇ ವೈಭವೀಕರಿಸುವ ಪ್ರಯತ್ನಗಳು ನಡೆಯುತ್ತಿವೆ. ಹೀಗಾಗಬಾರದು’ ಎಂದು ಅವರು ನುಡಿದರು.
ತಮ್ಮ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಹಲವಾರು ಅತ್ಯಾಚಾರ ಪ್ರಕರಣಗಳ ಹಿನ್ನೆಲೆಯಲ್ಲಿ ಖಟ್ಟರ್ ಸರಕಾರ ತೀವ್ರ ಟೀಕೆಗೆ ಗುರಿಯಾಗಿದೆ. ಒಂದು ವಾರದಿಂದೀಚೆಗೆ 6 ಅತ್ಯಾಚಾರ ಪ್ರಕರಣಗಳು ಹರ್ಯಾಣದಲ್ಲಿ ನಡೆದಿವೆ.
ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷತೆ ಒದಗಿಸಲು ಖಟ್ಟರ್ ಸರಕಾರ ವಿಫಲವಾಗಿದೆ ಎಂದು ಆರೋಪಿಸಿರುವ ಪ್ರತಿಪಕ್ಷ ಕಾಂಗ್ರೆಸ್, ಸರಕಾರದ ವಜಾಕ್ಕೆ ಒತ್ತಾಯಿಸಿದೆ.
ಇದೇ ವೇಳೆ, ಕುರುಕ್ಷೇತ್ರದ ಬಿಜೆಪಿ ಸಂಸದ ರಾಜ್ಕುಮಾರ್ ಸೈನಿ ಅತ್ಯಾಚಾರ ಕುರಿತು ನೀಡಿದ ಹೇಳಿಕೆ ವಿವಾದ ಸೃಷ್ಟಿಸಿದೆ. ‘ಅತ್ಯಾಚಾರ ಘಟನೆಗಳು ಹೊಸದೇನಲ್ಲ, ಹಿಂದಿನಿಂದಲೂ ನಡೆಯುತ್ತಿದ್ದವು. ಆದರೆ ಇತ್ತೀಚೆಗೆ ಸಾಮಾಜಿಕ ಕ್ರಿಯಾಶೀಲತೆ ಹೆಚ್ಚಾಗಿದೆ. ಜನಸಂಖ್ಯೆಯೂ ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ಅತ್ಯಾಚಾರ ಪ್ರಕರಣಗಳೂ ಹೆಚ್ಚಿವೆ. ಅಷ್ಟಕ್ಕೂ ಅತ್ಯಾಚಾರಗಳು ಸರಕಾರದ ಅನುಮತಿ ಪಡೆದು ನಡೆಯುತ್ತಿಲ್ಲ’ ಎಂದು ಅವರು ಹೇಳಿದ್ದಾರೆ.
ಈ ನಡುವೆ, 12 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ ಅಪರಾಧಿಗಳಿಗೆ ಮರಣದಂಡನೆ ವಿಧಿಸಬೇಕೆಂದು ಸಿಎಂ ಖಟ್ಟರ್ ಪ್ರತಿಪಾದಿಸಿದ್ದಾರೆ.
Comments are closed.