ರಾಷ್ಟ್ರೀಯ

ಜಯಾ ಚಿಕಿತ್ಸೆ ವಿಡಿಯೊ ಚಿತ್ರೀಕರಿಸಿದ್ದು ಶಶಿಕಲಾ: ದಿನಕರನ್‌

Pinterest LinkedIn Tumblr


ಚೆನ್ನೈ: ಜಿದ್ದಾಜಿದ್ದಿನ ಹೋರಾಟ ಎಂದೇ ಬಿಂಬಿತವಾಗಿದ್ದ ಚೆನ್ನೈನ ಆರ್‌.ಕೆ.ನಗರ ಕ್ಷೇತ್ರಕ್ಕೆ ಗುರುವಾರ ಉಪ ಚುನಾವಣೆ ನಡೆದ ಬೆನ್ನಲ್ಲೇ ಮಾಜಿ ಸಿಎಂ ಜಯಲಲಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಡಿಯೊ ಬಿಡುಗಡೆ ವಿವಾದಕ್ಕೆ ತಾರ್ಕಿಕ ಅಂತ್ಯ ಹಾಡುವ ಪ್ರಯತ್ನ ನಡೆದಿದೆ.

”ಖಾಸಗಿ ಆಸ್ಪತ್ರೆಯಲ್ಲಿ ಜಯಾ ಚಿಕಿತ್ಸೆ ಪಡೆಯುತ್ತಿದ್ದ ವಿಡಿಯೊವನ್ನು ಚಿತ್ರೀಕರಿಸಿದ್ದು ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿ.ಕೆ.ಶಶಿಕಲಾ. ಆದರೆ ಇದನ್ನು ನನ್ನ ಅನುಮತಿ ಇಲ್ಲದೆಯೇ ಸಾಮಾಜಿಕ ಜಾಲತಾಣಗಳಿಗೆ ಬಿಡುಗಡೆ ಮಾಡಿದ್ದು ಸಹವರ್ತಿ ಪಿ.ವೆಟ್ರಿವೇಲ್‌. ವಿಡಿಯೊ ಸೋರಿಕೆಯಾಗಿರುವುದಕ್ಕೆ ಬೇಸರವಾಗಿದೆ” ಎಂದು ಟಿಟಿವಿ ದಿನಕರನ್‌ ಸ್ಪಷ್ಟನೆ ನೀಡಿದ್ದಾರೆ.

”ಅಮ್ಮ (ಜಯಾ) ಕೋರಿಕೆ ಮೇರೆಗೆ ಚಿನ್ನಮ್ಮ (ಶಶಿಕಲಾ) ಕಳೆದ ನವೆಂಬರ್‌ನಲ್ಲಿ ಈ ವಿಡಿಯೊ ಶೂಟ್‌ ಮಾಡಿದ್ದರು. ಇದೊಂದು ಅಪ್ಪಟ ಖಾಸಗಿ ವಿಚಾರವಾಗಿತ್ತು. ಪಕ್ಷದ ಹಿರಿಯ ಪದಾಧಿಕಾರಿಗಳು ಇದನ್ನು ಬಿಡುಗಡೆ ಮಾಡುವಂತೆ ಈ ಹಿಂದೆ ಮನವಿ ಮಾಡಿಕೊಂಡಿದ್ದರಾದರೂ ಚಿನ್ನಮ್ಮ ಅದನ್ನು ತಿರಸ್ಕರಿಸಿದ್ದರು. ಬಿಡುಗಡೆಗೆ ನನ್ನ ವಿರೋಧವೂ ಇತ್ತು. ಆದರೆ ಪಿ.ವೆಟ್ರಿವೇಲ್‌ ಅನುಮತಿ ಇಲ್ಲದೇ ಬಿಡುಗಡೆ ಮಾಡಿದ್ದು ಅತೀವ ಬೇಸರ ತರಿಸಿದೆ” ಎಂದು ದಿನಕರನ್‌ ಮಾಧ್ಯಮಗಳಿಗೆ ಹೇಳಿದ್ದಾರೆ.

ಶೇ.77.68 ಮತದಾನ

ಆರ್‌.ಕೆ.ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಶೇ.77.68ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಇದು 2015ರಲ್ಲಿ ನಡೆದ ಮತದಾನ (ಶೇ.75.92)ಕ್ಕಿಂತ ಹೆಚ್ಚು.

Comments are closed.