
ಕಟಕ್: ಕೆಎಲ್ ರಾಹುಲ್ ಗೆ ಕಿರು ಮಾದರಿ ಕ್ರಿಕೆಟ್ ನಲ್ಲಿ ಜಾಗವಿಲ್ಲ ಎಂದು ಹೊರ ಹಾಕಿದವರಿಗೆ ನಿನ್ನೆಯ ಲಂಕಾ ವಿರುದ್ಧದ ಟಿ20 ಪಂದ್ಯದಲ್ಲಿ ಕನ್ನಡಿಗ ಬ್ಯಾಟ್ಸ್ ಮನ್ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ.
ಶಿಖರ್ ಧವನ್ ಫಾರ್ಮ್ ಗೆ ಮರಳಿದ ಮೇಲೆ ಕೆಎಲ್ ರಾಹುಲ್ ಗೆ ತಂಡದಲ್ಲಿ ಸ್ಥಾನವೇ ಸಿಗುತ್ತಿರಲಿಲ್ಲ. ಸಿಕ್ಕಿದರೂ ಸೂಕ್ತವಲ್ಲದ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದರು. ಆದರೆ ನಿನ್ನೆಯ ಪಂದ್ಯದಲ್ಲಿ ತಮ್ಮ ಎಂದಿನ ಆರಂಭಿಕ ಸ್ಥಾನ ಸಿಕ್ಕಿದ್ದೇ ತಡ, ರಾಹುಲ್ ಆ ಹತಾಶೆಯನ್ನೆಲ್ಲಾ ಬ್ಯಾಟ್ ಮೂಲಕ ತೀರಿಸಿಕೊಂಡರು.
ತಮಗೆ ಆರಂಭಿಕ ಸ್ಥಾನ ಕೊಟ್ಟರೆ ಎಂತಹಾ ಪ್ರಳಯಾಂತಕ ಎಂದು ತೋರಿಸಿಕೊಟ್ಟರು. ನಿನ್ನೆ ಕೇವಲ 48 ಬಾಲ್ ಗಳಲ್ಲಿ 61 ರನ್ ಸಿಡಿಸಿದರು. ಇದರಲ್ಲಿ 7 ಬೌಂಡರಿ ಮತ್ತು ಒಂದು ಸಿಕ್ಸರ್ ಸಹ ಸೇರಿತ್ತು. ಅವರ ನಿನ್ನೆಯ ಇನಿಂಗ್ಸ್ ನಲ್ಲಿ ಮರಳಿ ಲಯಕ್ಕೆ ಬಂದ ಉತ್ಸಾಹವಿತ್ತು. ಆರಂಭಿಕ ಸ್ಥಾನ ತನಗೆ ಕೊಟ್ಟರೆ ತಾನೆಂತಹ ಅಪಾಯಕಾರಿ ಎಂದು ಅವರು ಈ ಮೂಲಕ ಸಾಬೀತುಪಡಿಸಿದರು.
ವಿಶೇಷವೆಂದರೆ ನಿನ್ನೆಯ ಪಂದ್ಯದಲ್ಲಿ ಮತ್ತೊಬ್ಬ ಕನ್ನಡಿಗ ಬ್ಯಾಟ್ಸ್ ಮನ್ ಮನೀಶ್ ಪಾಂಡೆ ಕೂಡಾ ಚುರುಕಿನ ಆಟವಾಡಿ ಗಮನ ಸೆಳೆದರು. ಮನೀಶ್ ಪಾಂಡೆ ಕೊನೆಯಲ್ಲಿ ಕೇವಲ 18 ಬಾಲ್ ಗಳಿಂದ ತಲಾ ಎರಡು ಸಿಕ್ಸರ್, ಬೌಂಡರಿ ಸಹಿತ 32 ರನ್ ಗಳಿಸಿದ್ದರಿಂದ ತಂಡದ ಮೊತ್ತ ಉಬ್ಬಿತು. ವಿಶೇಷವೆಂದರೆ ಬೌಲಿಂಗ್ ನಲ್ಲಿ ಮಿಂಚಿದ ಯಜುವೇಂದ್ರ ಚಾಹಲ್ ಕೂಡಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರೇ.
Comments are closed.