ರಾಷ್ಟ್ರೀಯ

ವಕೀಲರ ದುಬಾರಿ ಶುಲ್ಕಕ್ಕೆ ಕಡಿವಾಣ ಹಾಕಿ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ

Pinterest LinkedIn Tumblr


ಹೊಸದಿಲ್ಲಿ: ಕಾನೂನು ಸಲಹೆ ವ್ಯವಹಾರವು ಅತ್ಯಂತ ದುಬಾರಿಯಾಗುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿದೆ.

ವಕೀಲರು ಕಕ್ಷಿದಾರರಿಂದ ‘ಭರಿಸಲಾಗದ’ ಶುಲ್ಕ ವಸೂಲಿ ಮಾಡುತ್ತಿರುವುದರಿಂದ ಬಡವರಿಗೆ ನ್ಯಾಯ ಕೈಗೆಟುಕದಂತಾಗಿದೆ; ಇದನ್ನು ನಿಯಂತ್ರಿಸಲು ವಕೀಲರ ಶುಲ್ಕಗಳಿಗೆ ಕನಿಷ್ಠ ಹಾಗೂ ಗರಿಷ್ಠ ಮಿತಿ ನಿಗದಿಪಡಿಸಲು ಕಾನೂನು ರೂಪಿಸಿ ಎಂದು ಕೇಂದ್ರ ಸರಕಾರಕ್ಕೆ ಸಲಹೆ ನೀಡಿದೆ.

ಕಾನೂನು ಆಯೋಗದ ವರದಿಗಳು ಮತ್ತು ಸುಪ್ರೀಂ ಕೋರ್ಟಿನ ಹಲವು ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಮೂರ್ತಿ ಆದರ್ಶ್‌ ಕೆ. ಗೋಯಲ್ ಮತ್ತು ಯು.ಯು. ಲಲಿತ್‌ ಅವರನ್ನೊಳಗೊಂಡ ಪೀಠ ಈ ಸಲಹೆ ನೀಡಿದೆ. ಕಾನೂನು ವೃತ್ತಿಯಲ್ಲಿ ನೀತಿ ಸಂಹಿತೆಯ ಪಾಲನೆಗೆ ಕೇಂದ್ರ ಸರಕಾರ ಮಧ್ಯಪ್ರವೇಶಿಸಲು ಹಾಗೂ ಸೂಕ್ತ ಕಾನುನು ರೂಪಿಸಲು ಇದು ಸಕಾಲ ಎಂದು ನ್ಯಾಯಪೀಠ ಹೇಳಿದೆ.

ಹಣಕಾಸಿನ ಕೊರತೆಯಿಂದಾಗಿ ಬಡವರು ಸಮರ್ಥ ವಕೀಲರ ಸೇವೆ ಪಡೆಯಲು ತೊಂದರೆಯಾಗಬಾರದು ಎಂದು ಕೋರ್ಟ್‌ ತಿಳಿಸಿದೆ. ನ್ಯಾಯಾಲಯದ ತೀರ್ಪಿನ ಫಲಾನುಭವಿಗಳ ಲಾಭದಲ್ಲಿ ಪಾಲು ಪಡೆಯುವ ವಕೀಲರ ಪ್ರವೃತ್ತಿಯನ್ನೂ ಅದು ಖಂಡಿಸಿದೆ. ವೃತ್ತಿಯ ಘನತೆ ಮರೆತು ವರ್ತಿಸುವ ತಪ್ಪಿತಸ್ಥ ವಕೀಲರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಕೋರ್ಟ್‌ ಸೂಚಿಸಿದೆ.

Comments are closed.