ಸುಳ್ಯ, ಸೆಪ್ಟಂಬರ್.23: ಐರ್ವನಾಡು ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಹಿಂದಿರುಗುತ್ತಿದ್ದ ಕಾಂಗ್ರೆಸ್ ಮುಖಂಡರೊಬ್ಬರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕಡಿದು ಬರ್ಬರವಾಗಿ ಹತ್ಯೆಗೈದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ದುಷ್ಕರ್ಮಿಗಳ ದಾಳಿಯಿಂದ ಹತ್ಯೆಗೀಡಾದವರನ್ನು ಬೆಳ್ಳಾರೆಯ ಕಾಂಗ್ರೆಸ್ ಮುಖಂಡ, ಸುಳ್ಯ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಕರಾವಳಿ ವಿಭಾಗದ ಅಧ್ಯಕ್ಷ ಹಾಗೂ ತಾ.ಪಂ ಮಾಜಿ ಸದಸ್ಯೆ ವಹೀದಾ ಇಸ್ಮಾಯಿಲ್ ಎಂಬವರ ಪತಿ ಇಸ್ಮಾಯೀಲ್ ನೇಲ್ಯಮಜಲು ಎಂದು ಗುರುತಿಸಲಾಗಿದೆ.
ಬೆಳ್ಳಾರೆಯವರಾದ ಇಸ್ಮಾಯೀಲ್ ಅವರು ನ್ಯಾಯಾಲಯದಲ್ಲಿದ್ದ ಯಾವುದೋ ಪ್ರಕರಣವೊಂದಕ್ಕೆ ಸಂಬಂಧಿಸಿ ಇಂದು ಸುಳ್ಯಕ್ಕೆ ಆಗಮಿಸಿದ್ದರು. ಬಳಿಕ ಶುಕ್ರವಾರದ ಜುಮಾ ನಮಾಜ್ಗಾಗಿ ಅವರು ಐವರ್ನಾಡು ಮಸೀದಿಗೆ ತೆರಳಿ ನಮಾಝ್ ಮುಗಿಸಿ ಮನೆಗೆ ವಾಪಸ್ ಹೋಗುತ್ತಿದ್ದ ವೇಳೆ ಏಕಾಏಕಿ ನುಗ್ಗಿದ್ದ ದುಷ್ಕರ್ಮಿಗಳು ಇವರ ಮೇಲೆ ತಲವಾರಿನಿಂದ ದಾಳಿ ನಡೆಸಿದ್ದಾರೆನ್ನಲಾಗಿದೆ. ಹಲ್ಲೆಯಿಂದ ಗಂಭೀರಗಾಯಗೊಂಡ ಇಸ್ಮಾಯಿಲ್ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಹತ್ಯೆಗೆ ನಿರ್ಧಿಷ್ಟ ಕಾರಣ ತಿಳಿದುಬಂದಿಲ್ಲ.ಆದರೆ ಮೃತ ಇಸ್ಮಾಯಿಲ್ ಹಾಗೂ ಅವರ ಪತ್ನಿಯ ಮೇಲೆ ಎರಡು ವರ್ಷಗಳ ಹಿಂದೆ ಜಾಗದ ತಕರಾರಿನ ಕಾರಣ ಕೊಲೆಯತ್ನ ನಡೆದಿತ್ತು ಎನ್ನಲಾಗಿದೆ. ಜಾಗದ ತಕರಾರಿಗೆ ಸಂಬಂಧಿಸಿದಂತೆ ಇವರನ್ನು ಹತ್ಯೆ ಗೈಯಲಾಗಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.
ಈ ಬಗ್ಗೆ ಸುಳ್ಯ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಈ ಬಗ್ಗೆ ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.









Comments are closed.