
ಮಂಗಳೂರು, ಸೆ.23: ಕಾವೇರಿ ನದಿ ನೀರಿನ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ರಾಜ್ಯದ ಮುಖ್ಯಮಂತ್ರಿ ಕರೆದ ಸರ್ವಪಕ್ಷಗಳ ಸಭೆಗೆ ಬಿಜೆಪಿ ಸದಸ್ಯರು ಹಾಜರಾಗದಿರುವುದು ದುರಾದೃಷ್ಟಕರ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಜನರ ಸಮಸ್ಯೆ ಪರಿಹರಿಸುವಲ್ಲಿ ಬಿಜೆಪಿ ಶಾಸಕರು, ಸಂಸದರು ನಿರಾಸಕ್ತರಾಗಿದ್ದಾರೆ. ಅದಕ್ಕೆ ರಾಜ್ಯದ ಸಮಸ್ಯೆ ಎದುರಿಸಲು ಪಕ್ಷಾತೀತವಾಗಿ ಒಗ್ಗಟ್ಟನ್ನು ಪ್ರದರ್ಶಿಸುವ ಬದಲು ಬಿಜೆಪಿ ಸರ್ವಪಕ್ಷಗಳ ಸಭೆಯಲ್ಲಿ ಭಾಗವಹಿಸದೆ ದೂರ ಉಳಿದಿದೆ ಎಂದು ದೂರಿದ್ದಾರೆ.
ಕಾವೇರಿ ನದಿ ನೀರಿನ ಸಮಸ್ಯೆಯ ಬಗ್ಗೆ ಶುಕ್ರವಾರ ತುರ್ತು ಅಧಿವೇಶನ ಕರೆಯಲಾಗಿದೆ. ಈ ಅಧಿವೇಶನದಲ್ಲಿ ರಾಜ್ಯದ ಜನರ ಹಿತದೃಷ್ಟಿಯಿಂದ ಮುಂದೆ ಕೈ ಗೊಳ್ಳಬಹುದಾದ ಕ್ರಮಗಳ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹೇಳಿದರು.

ರಾಜ್ಯದ ಬಿಜೆಪಿ ಸಂಸದರು ಕೇಂದ್ರ ಸರಕಾರದ ಮೂಲಕ ಸಮಸ್ಯೆ ಬಗೆಹರಿಸುವ ಬಗ್ಗೆ ಪ್ರಯತ್ನವನ್ನು ಮಾಡಿಲ್ಲ. ಪ್ರಧಾನಿಯೂ ಎರಡೂ ರಾಜ್ಯಗಳ ಮುಖ್ಯ ಮಂತ್ರಿಗಳನ್ನು ಕರೆದು ಈ ಬಗ್ಗೆ ಸಮಸ್ಯೆ ಬಗೆಹರಿಸುವ ಸಮಾಲೋಚನೆಯನ್ನು ಮಾಡಿಲ್ಲ. ಸುಪ್ರೀಂ ಕೋರ್ಟ್ ರಾಜ್ಯದ ಪರವಾಗಿಲ್ಲ. ಸ್ಪಂದಿಸ ಬೇಕಾದ ಪ್ರಧಾನಿ ಅವರು ಮುಖ್ಯಮಂತ್ರಿಗಳ ಜೊತೆ ಚರ್ಚಿಸಲು ಅವಕಾಶ ನೀಡಿಲ್ಲ. ಕೇವಲ ಭಾಷಣದಲ್ಲಿ ಭಾಯಿಬೆಹನ್ ಅಂದರೆ ಸಾಲಾದು. ಬದಲಾಗಿ ನಾಡಿನ ಜನತೆ ಸಂಕಷ್ಟಕ್ಕೂ ಸ್ಪಂದಿಸ ಬೇಕಿದೆ ಎಂದು ಅವರು ಟೀಕಿಸಿದರು.
ಕಾವೇರಿ ವಿಚಾರದಲ್ಲಿ ಕನಿಷ್ಠ ಸಚಿವರನ್ನು ಕಳುಹಿಸಿ ಮಾಹಿತಿ ಪಡೆಯಬಹುದಿತ್ತು. ಕೇಂದ್ರ ಸರ್ಕಾರ ರಾಜ್ಯದ ಪರ ಅಫಿದಾವಿತ್ ಸಲ್ಲಿಸಬೇಕಿತ್ತು. ಸಿಎಂ ವಾಚ್ ಪ್ರಕರಣದ ಬಗ್ಗೆ ಪ್ರತಿಭಟಿಸಿದ ರಾಜ್ಯದ ಬಿಜೆಪಿ ಸಂಸದರು ಈಗೆಲ್ಲಿದ್ದಾರೆ ಎಂದು ಅವರು ಪ್ರಶ್ನಿಸಿದರು.

ಉಗ್ರರ ದಾಳಿ ಖಂಡನೀಯ – ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿ : ಖಾದರ್
ಉಗ್ರರ ದಾಳಿಯನ್ನು ಖಂಡಿಸಿರುವ ಸಚಿವ ಯು.ಟಿ.ಖಾದರ್, ಉರಿ ಸೇನಾ ನೆಲೆ ಮೇಲೆ ಉಗ್ರರು ನಡೆಸಿರುವ ದಾಳಿ ಖಂಡನೀಯ. ಭಾರತ ಇದರಿಂದ ಪಾಠ ಕಲಿಯಬೇಕು. ಈ ಬಗ್ಗೆ ದೇಶದ ಪ್ರಧಾನಿ ಹೇಳಿರುವಂತೆ ಪಾಕಿಸ್ತಾನಕ್ಕೆ’ತಕ್ಕ ಉತ್ತರ’ ಏಕೆ ನೀಡುತ್ತಿಲ್ಲ.. ಪ್ರಧಾನಿ ಮೋದಿಯವರು ಈಗ ಪಾಕಿಸ್ತಾನದ ವಿರುದ್ಧ ಯಾಕೆ ಕ್ರಮಕ್ಕೆ ಹಿಂಜರಿಯುತ್ತಿದ್ದಾರೆ.ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿ. ಅಧಿಕಾರ ಇಲ್ಲದೆ ಇದ್ದಾಗ ಉಗ್ರರ ಬಗ್ಗೆ ಹೇಳುತ್ತಿದ್ದ ಮಾತುಗಳ ಪ್ರಕಾರ ಈಗ ಏಕೆ ಪ್ರಧಾನಿ ನಡೆದುಕೊಳ್ಳುತ್ತಿಲ್ಲ ಎಂದು ಸಚಿವ ಖಾದರ್ ಪ್ರಶ್ನಿಸಿದರು.
ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಉಳ್ಳಾಲ ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು.
Comments are closed.