ಉಡುಪಿ: ಹಿರಿಯ ಅಧಿಕಾರಿಗಳ ಕಿರುಕುಳ ಆಗುತ್ತಿದೆ ಎಂದುದರ ಬಗ್ಗೆ ಡೈರಿಯಲ್ಲಿ ಬರೆದಿಟ್ಟು ಠಾಣೆಯಿಂದ ಹೊರಹೋಗಿ ಯಾರ ಸಂಪರ್ಕಕ್ಕೂ ಸಿಗದಿರುವ ಉಡುಪಿ ಜಿಲ್ಲೆ ಕೋಟ ಪೊಲೀಸ್ ಠಾಣೆ ಎಸ್.ಐ. ಕಬ್ಬಾಳರಾಜ್ ಮನವೊಲಿಕೆಯ ಬಗ್ಗೆ ಇಲಾಖಾ ಮಟ್ಟದಲ್ಲಿ ಹರಸಾಹಸ ನಡೆಯುತ್ತಿದೆ ಎನ್ನಲಾಗಿದ್ದು ನಾಳೆ (ಶುಕ್ರವಾರ) ಕಬ್ಬಾಳರಾಜ್ ಅವರು ಕೋಟಕ್ಕೆ ವಾಪಾಸ್ಸಾಗುವ ಬಗ್ಗೆ ಮೂಲಗಳ ಮಾಹಿತಿಯಿದೆ.

ಇನ್ನು ಕೋಟ ಎಸ್ ಐ ಕಬ್ಬಾಳರಾಜ್ ರಾಜೀನಾಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ಎಸ್ಪಿ ಕೆ.ಟಿ ಬಾಲಕೃಷ್ಣ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಕಬ್ಬಾಳರಾಜ ಅವರ ರಾಜೀನಾಮೆ ಖಚಿತ ಪಡಿಸಿದ ಉಡುಪಿ ಎಸ್ಪಿ ಅವರು, ಕಬ್ಬಾಳ್ ರಾಜ್ ಠಾಣೆಯಲ್ಲಿ ರಾಜೀನಾಮೆ ಪತ್ರ ಬರೆದಿಟ್ಟು ಹೋಗಿದ್ದಾರೆ ವೈಯಕ್ತಿಕ ಕಾರಣ ಎಂದು ನಮೂದಿಸಿದ್ದಾರೆ ಪತ್ರ ಇನ್ನೂ ನನ್ನ ಕೈ ಸೇರಿಲ್ಲ. ಎಸ್ ಐ ಸಂಪರ್ಕಕ್ಕೆ ಪ್ರಯತ್ನಿಸಲಾಗುತ್ತಿದೆ, ಸಂಪರ್ಕಕ್ಕೆ ಬಂದ ನಂತರ ಕೌನ್ಸಲಿಂಗ್ ಮಾಡುತ್ತೇವೆ. ಕಬ್ಬಾಳ್ ರಾಜ್ ಈ ಹಿಂದೆಯೂ ರಾಜೀನಾಮೆ ನೀಡಿ ವಾಪಾಸ್ ಪಡೆದಿದ್ದರು ಎಂದಿದ್ದಾರೆ. ಇನ್ನು ನ್ಯಾಯಾಲಯದಲ್ಲಿರುವ ಸಿವಿಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕರೆ ಮಾಡಿದ್ದು, ಇದೇ ಮೊದಲ ಬಾರಿ ಎಸ್ ಐ ಜೊತೆ ನಾನು ಮಾತನಾಡಿರುವುದು ಎಂದು ಕೂಡ ಎಸ್ಪಿ ಸ್ಪಷ್ಟನೆ ನೀಡಿದ್ದಾರೆ. ಡಿಎಸ್ಪಿ, ಹಿರಿಯ ಅಧಿಕಾರಿಗಳು ಅವರ ಸಂಪರ್ಕಕ್ಕೆ ಪ್ರಯತ್ನ ಮಾಡುತ್ತಿದ್ದಾರೆ ಎಂದು ಉಡುಪಿ ಎಸ್ ಪಿ ಕೆ.ಟಿ ಬಾಲಕೃಷ್ಣ ಹೇಳಿದ್ದಾರೆ.
ಗುರುವಾರ ಮಧ್ಯಾಹ್ನ ಉಡುಪಿಯ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಗೆ ಕೋಟದ ಹಲವು ಜನಪ್ರತಿನಿಧಿಗಳು, ಸಂಘಟನೆಯ ಪ್ರಮುಖರು ಹಾಗೂ ಸಾರ್ವಜನಿಕರು ಭೇಟಿ ನೀಡಿ ಮನವಿ ನೀಡಿದ್ದಾರೆ. “ಒಂದು ವರ್ಷಗಳಿಗೂ ಅಧಿಕ ಕಾಲ ಕೋಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಕಬ್ಬಾಳರಾಜ್ ಅವರ ಸೇವೆ ಕೋಟ ವ್ಯಾಪ್ತಿಗೆ ಅಗತ್ಯವಾಗಿದ್ದು, ಅವರು ನಿಯುಕ್ತಿಗೊಂಡ ಬಳಿಕ ಬಹುತೇಕ ಎಲ್ಲಾ ಕಾನೂನು ಬಾಹಿರ ಚಟುವಟಿಕೆಗಳು ನಿಂತಿದ್ದು, ಯಾವುದೋ ಕಾರಣಕ್ಕೆ ರಾಜಿನಾಮೆ ನೀಡಿದ್ದಾರೆಂಬ ಬಗ್ಗೆ ಅರಿತ ನಾವು ರಾಜಿನಾಮೆ ಅಂಗೀಕರಿಸದಂತೆ ಹಾಗೂ ಮುಂದಿನ ದಿನಗಳಲ್ಲಿ ಇಲ್ಲೆಯೇ ಅವರು ಮುಂದುವರಿಯುವಂತೆ ಅನುವು ಮಾಡಿಕೊಡಬೇಕು” ಎನ್ನುವ ಉಲ್ಲೇಖ ಈ ಮನವಿಯಲ್ಲಿದೆ.
ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್, ಸ್ಥಳಿಯ ತಾಲ್ಲೂಕು ಪಂಚಾಯತ್ ಸದಸ್ಯರು, ರಿಕ್ಷಾ ಯೂನಿಯನ್, ಸ್ಥಳೀಯ ವಿವಿಧ ಸಂಘಟನೆಗಳು, ಸಾರ್ವಜನಿಕರು ಮನವಿಯನ್ನು ಎಸ್ಪಿ ಅವರಿಗೆ ನೀಡಿದ್ದಾರೆ.
ಇದನ್ನೂ ಓದಿ: https://www.kannadigaworld.com/kannada/karavali-kn/283525.html
Comments are closed.