
ಮಂಗಳೂರು,ಸೆ.15 : ‘ಸಮಗ್ರ ಆರೋಗ್ಯ ನೀತಿಯನ್ನು ಸರಕಾರ ಜಾರಿ ಮಾಡಲಿದೆ. ಹರೀಶ್ ಸಾಂತ್ವನ ಯೋಜನೆ ವಿಫಲಗೊಂಡಿರುವ ಬಗ್ಗೆ ಮಾತುಗಳು ಕೇಳಿಬರುತ್ತಿದೆ. ಆದರೆ ಈ ಯೋಜನೆ ಖಂಡಿತಾ ವಿಫಲವಾಗಿಲ್ಲ. ಮುಂದಿನ ದಿನಗಳಲ್ಲಿ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ವಿಸ್ತರಿಸಲಾಗುವುದು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್ ಕುಮಾರ್ ಹೇಳಿದರು.
ಕಾಸರಗೋಡಿನಲ್ಲಿ ನಡೆಯಲಿರುವ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗುತ್ತಿದ್ದ ಸಂದರ್ಭ ಮಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು.
”ರೋಗಿ ಮೃತಪಟ್ಟ ನಂತರವೂ ವೆಂಟಿಲೇಟರ್ ನಲ್ಲಿ ಇಡುವ, ಅಗತ್ಯವಿಲ್ಲದಿದ್ದರೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುವ ಪ್ರಕ್ರಿಯೆ ಹೆಚ್ಚಾಗಿ ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುತ್ತಿದೆ. ವೈದ್ಯರು, ಖಾಸಗಿ ಆಸ್ಪತ್ರೆಯವರು ವಸೂಲಿ ಮಾಡುವ ಅಧಿಕ ದರವನ್ನು ನಿಯಂತ್ರಿಸುವ ದರ ಪಟ್ಟಿ ನಮ್ಮಲ್ಲಿಲ್ಲ. ಖಾಸಗಿ ಆಸ್ಪತ್ರೆಗಳು ಅಸಹಾಯಕ ಸ್ಥಿತಿಯಲ್ಲಿ ಬರುವವರಿಗೆ ದೇವಾಲಯವಾಗಬೇಕು, ನರಕವಾಗಬಾರದು ಎಂದು ಸಚಿವರು ಖಾಸಗಿ ಆಸ್ಪತ್ರೆಗಳ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದರು.

ವೃತ್ತಿಪರ ನೀತಿ ಸಂಹಿತೆಯನ್ನು ಮರೆತುಬಿಟ್ಟರೆ ವೈದ್ಯರಿರಿಗೆ ಶಿಕ್ಷೆ ನೀಡುವ ವ್ಯವಸ್ಥೆ ನಮ್ಮಲ್ಲಿಲ್ಲ.ಆಸ್ಪತ್ರೆಗೆ ಬರುವ ವ್ಯಕ್ತಿಯ ಹಿನ್ನೆಲೆ, ಅಂತಸ್ತು ನೋಡಿ ಚಿಕಿತ್ಸೆ ಕೊಡುವುದನ್ನು ಬಿಟ್ಟು, ಜನರ ಖಾಯಿಲೆಗೆ ತಕ್ಕಂತಹ ಚಿಕಿತ್ಸೆ ನೀಡಲು ಮುಂದಾಗಬೇಕು. ರೋಗಿಗಳಲ್ಲಿ ಮನುಷ್ಯತ್ವೆ ಕಾಣದೆ ಇರುವವರು ಎಂಬಿಬಿಎಸ್ ಮಾಡಿದರೂ ವೈದ್ಯರಾಗಲು ಸಾಧ್ಯವಿಲ್ಲ ಎಂದರು.
ಬಡಜನರ ತೆರಿಗೆ ಹಣವನ್ನು ಉಪಯೋಗಿಸಿಕೊಂಡು ರಚಿಸಲಾದ ಮೆಡಿಕಲ್ ಕಾಲೇಜುಗಳಲ್ಲಿ ಕಲಿತು ವೈದ್ಯರಾದವರು ಹಳ್ಳಿಗಳಲ್ಲಿ ಕೆಲಸ ಸೇವೆ ಸಲ್ಲಿಸಲುಮುಂದಾಗದೆ ಕೇವಲ ನಗರದಲ್ಲಿ ಕೆಲಸ ಮಾಡುತ್ತಾರೆ. ವಿದ್ಯೆಯನ್ನು ಹಳ್ಳಿಯ ಜನರು ಕಟ್ಟಿದ ತೆರಿಗೆಯಲ್ಲಿ ಕಲಿಯಬೇಕು, ಆದರೆ ಸೇವೆ ನೀಡುವಾಗ ಮಾತ್ರ ಈ ಜನರು ಬೇಡ ಎಂಬುದು ಎಷ್ಟರಮಟ್ಟಿಗೆ ಸರಿ ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಜನರು ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯದೆ ಪ್ರಾಣದ ಆಸೆಯಿಂದ ಖಾಸಗಿ ಆಸ್ಪತ್ರೆಗೆ ಹೋದರೆ ಅಲ್ಲಿ ದುಬಾರಿ ಶುಲ್ಕವನ್ನು ವಸೂಲು ಮಾಡುವ ಮೂಲಕ ಗುಣಮುಖವಾಗುವ ರೋಗಿಯ ಕುಟುಂಬವನ್ನು ಹೈರಾಣ ಮಾಡಲಾಗುತ್ತದೆ.ಜನರು ಖಾಯಿಲೆ ಬಂದರೆ ಕುಸಿದು ಹೋಗುವ ಪರಿಸ್ಥಿತಿ ನಿವಾರಣೆ ಆಗಲು ಖಾಸಗಿ ಆಸ್ಪತ್ರೆಗಳು, ವೈದ್ಯರುಗಳು ಕಾರ್ಯೋನ್ಮುಖವಾಗಬೇಕು ಎಂದು ಅವರು ಸಲಹೆ ನೀಡಿದರು.
ಈ ಸಂದರ್ಭ ಅರಣ್ಯ ಮತ್ತು ಪರಿಸರ ಸಚಿವ ರಮಾನಾಥ ರೈ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ, ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೋ ಮುಂತಾದವರು ಸಚಿವರ ಜೊತೆಯಲ್ಲಿದ್ದರು.
Comments are closed.