
ನವದೆಹಲಿ: ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಿರ್ದೇಶನ ಸೂಚಿಸುವ ಕುರಿತಾಗಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಬುಧವಾರ ಸಮ್ಮತಿಸಿದೆ.
ಕಾವೇರಿ ನೀರು ಹಂಚಿಕೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಉಂಟಾದ ಅಶಾಂತ ಪರಿಸ್ಥಿತಿ, ಉಗ್ರ ಪ್ರತಿಭಟನೆಯನ್ನು ತಹಬದಿಗೆ ತರಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ಅರ್ಜಿ ವಿಚಾರಣೆಯನ್ನು ಗುರುವಾರ ನಡೆಸಲು ಮುಖ್ಯನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಮತ್ತು ಎ.ಎಂ.ಖನ್ವಿಲ್ಕರ್ ಅವರನ್ನು ಒಳಗೊಂಡ ನ್ಯಾಯಪೀಠ ಒಪ್ಪಿಗೆ ನೀಡಿದೆ.
ಪ್ರತಿಭಟನೆ ವೇಳೆ ಸಂಭವಿಸುವ ಆಸ್ತಿ ಹಾನಿಗೆ ಪ್ರತಿಭಟನಾ ನಿರತ ನಾಯಕರು ಕಾರಣರಾಗುತ್ತಾರೆ ಹಾಗೂ ನಷ್ಟವನ್ನು ಅವರೇ ಭರಿಸಬೇಕು ಎಂಬ ಸೂಚನೆಯನ್ನು ನೀಡುವಂತೆಯೂ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಶಿವಕುಮಾರ್ ಮನವಿ ಮಾಡಿದ್ದಾರೆ.
ಸೆ.12ರಂದು ಸುಪ್ರೀಂ ಕೋರ್ಟ್ ಹಿಂದಿನ ಆದೇಶವನ್ನು ಬದಲಿಸಿ, 15 ಸಾವಿರ ಕ್ಯೂಸೆಕ್ ಬದಲು 12 ಸಾವಿರ ಕ್ಯೂಸೆಕ್ ನೀರನ್ನು ಸೆ.20ರವರೆಗೂ ಹರಿಸುವಂತೆ ತೀರ್ಪು ನೀಡಿದ ನಂತರದಲ್ಲಿ ಪ್ರತಿಭಟನೆ ಉಗ್ರ ರೂಪ ಪಡೆದಿತ್ತು.
Comments are closed.