
ಮಂಗಳೂರು, ಜು.21: ದಕ್ಷಿಣ ಕನ್ನಡ ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ನೇತೃತ್ವದಲ್ಲಿ ನಗರದ ನೆಹರೂ ಮೈದಾನದಲ್ಲಿ ಹಮ್ಮಿಕೊಳ್ಳಲಾದ 20ನೇ ವರ್ಷದ ‘ಇಂಡಿಪೆಂಡೆನ್ಸ್ ಕಪ್’ ಫುಟ್ಬಾಲ್ ಪಂದ್ಯಾವಳಿಗೆ ಗುರುವಾರ ಮನಪಾ ಮೇಯರ್ ಕೆ. ಹರಿನಾಥ್ ಅವರು ಚಾಲನೆ ನೀಡಿದರು.
ಪಂದ್ಯಾವಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ನೆಹರು ಮೈದಾನವನ್ನು ಫುಟ್ಬಾಲ್ ಮೈದಾನ ಮಾಡುವ ನಿಟ್ಟಿನಲ್ಲಿ ಪಾಲಿಕೆ ಸಭೆಯಲ್ಲಿ ನಿರ್ಧರಿಸಲಾಗಿದೆ. ಮುಂದಿನ ಸಭೆಯಲ್ಲಿ ಈ ಬಗ್ಗೆ ದೃಢೀಕರಿಸಲಾಗುವುದು ಎಂದು ಹೇಳಿದರು. ಸಮಾರಂಭದಲ್ಲಿ ಮೇಯರ್ ಹರಿನಾಥ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಾಲಾ ಕಾಲೇಜು ಮಟ್ಟದಲ್ಲಿಯೇ ಪುಟ್ಬಾಲ್ ಆಟದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಆಸಕ್ತಿ ಬೆಳೆಸುವ ಮತ್ತು ಆ ಮೂಲಕ ವಿದ್ಯಾರ್ಥಿಗಳಲ್ಲಿ ಪ್ರತಿಭಾವಂತ ಆಟಗಾರರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ದೇಶದ 50ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ಫುಟ್ಬಾಲ್ ಸಂಸ್ಥೆ ಇಂಡಿಪೆಂಡೆನ್ಸ್ ಕಪ್ ಪುಟ್ಬಾಲ್ ಪಂದ್ಯಾವಳಿಯನ್ನು ಹುಟ್ಟು ಹಾಕಿತು. ಕಳೆದ 10 ವರ್ಷ ಅವಧಿಯಲ್ಲಿ ಇಲ್ಲಿನ 200 ಕ್ಕೂ ಅಧಿಕ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದಾರೆ.

ಪಂದ್ಯಾವಳಿ ಏಳು ವಿಭಾಗಗಳಲ್ಲಿ ನಡೆಯಲ್ಲಿದ್ದು, ತಂಡಗಳು ಆಗಮಿಸುತ್ತಿದ್ದು ಸುಮಾರು 250 ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ. ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬಾಲಕ ಹಾಗೂ ಬಾಲಕಿಯರಿಗೆ (5 ರಿಂದ 7ನೆ ತರಗತಿ ತನಕ) ಪ್ರೌಢ ಶಾಲಾ ವಿಭಾಗದಲ್ಲಿ ಬಾಲಕರು ಹಾಗೂ ಬಾಲಕಿಯರಿಗೆ (8 ರಿಂದ 10 ನೆ ತರಗತಿ ತನಕ), ಪಿಯು ಕಾಲೇಜು ವಿಭಾಗ ಹಾಗೂ ಕಾಲೇಜು ವಿಭಾಗದಲ್ಲಿ ಬಾಲಕರು ಹಾಗೂ ಕಾಲೇಜು ಮಹಿಳಾ ತಂಡಗಳಿಗೆ (ಪಿಯು ಕಾಲೇಜು ಹಾಗೂ ಕಾಲೇಜು ಬಾಲಕಿಯರ ಮಿಶ್ರ ತಂಡ) ಹೀಗೆ ಒಟ್ಟು 7 ವಿಭಾಗಗಳಲ್ಲಿ ಪಂದ್ಯಾಟ ನಡೆಯಲಿದೆ.
ಕಾಲೇಜು ವಿಭಾಗದಲ್ಲಿ ಎಲ್ಲಾ ರೀತಿಯ ಪದವಿ ಕಾಲೇಜು (3 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಕೋರ್ಸುಗಳಲ್ಲಿ ಕಲಿಯುವವರು) ವೃತ್ತಿಪರ ಕಾಲೇಜು (ಇಂಜಿನಿಯರಿಂಗ್, ಮೆಡಿಕಲ್, ಪಾರಾ ಮೆಡಿಕಲ್, 3 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ಡಿಪ್ಲೊಮಾ ಕೋರ್ಸು ಮಾಡುವ ವಿದ್ಯಾರ್ಥಿಗಳಿಗೆ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಅಧ್ಯಕ್ಷ ಡಿ.ಎಂ.ಅಸ್ಲಾಂ ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಪಂದ್ಯಾಟ ಜುಲೈ 21 ರಿಂದ 23ವರೆಗೆ ನಡೆಯಲಿದ್ದು, ಹೈಸ್ಕೂಲ್ ಬಾಲಕ ಹಾಗೂ ಬಾಲಕಿಯರ ವಿಭಾಗದ ಪಂದ್ಯಗಳು ಜುಲೈ 24ರಿಂದ 31ರವೆರೆಗೆ ನಡೆಯಲಿದೆ, ಕಾಲೇಜು ಮಹಿಳಾ ವಿಭಾಗದ ಪಂದ್ಯಗಳು ಆಗಸ್ಟ್ 1 ಮತ್ತು 2ರಂದು ಹಾಗೂ ಪಿಯು ಕಾಲೇಜು ಬಾಲಕರ ವಿಭಾಗ ಆಗಸ್ಟ್ 3 ರಿಂದ 8ರವರೆಗೆ ನಡೆಯಲಿದೆ, ಕಾಲೇಜು ವಿಭಾಗದ ಪಂದ್ಯಾಟ ಆಗಸ್ಟ್ 9 ರಿಂದ 14ರವರೆಗೆ ನಡೆಯಲಿದ್ದು, ಆಗಸ್ಟ್ 2 ನೋಂದಾಯಿಸಲು ಕಡೆಯ ದಿನಾಂಕವಾಗಿದೆ ಎಂದು ಅಸ್ಲಾಂ ತಿಳಿಸಿದರು.
ಆಗಸ್ಟ್ 15ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ನಡೆಯಲಿದೆ. ವಿಜೇತ ತಂಡಗಳಿಗೆ ಆಕರ್ಷಕ ರೋಲಿಂಗ್ ಟ್ರೋಫಿ, ಶಾಶ್ವತ ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಗುವುದು. 20ನೆ ವರ್ಷದ ಪಂದ್ಯಾವಳಿ ಪ್ರಯುಕ್ತ ಎಲ್ಲಾ ವಿಭಾಗಗಳಲ್ಲಿ ಉತ್ತಮ ಆಟಗಾರ, ಆಟಗಾರ್ತಿ, ಉತ್ತಮ ಗೋಲ್ ಕೀಪರ್ ಹಾಗೂ ಉತ್ತಮ ರಕ್ಷಣೆ ಆಟಗಾರ, ಆಟಗಾರ್ತಿ ಎಂಬ ವಿಶೇಷ ಬಹುಮಾನ ಪ್ರಕಟಿಸಲಾಗಿದೆ ಎಂದು ಅಸ್ಲಾಂ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮನಪಾ ಮುಖ್ಯ ಸಚೇತಕ ಶಶಿಧರ್ ಹೆಗ್ಡೆ, ಮಾಜಿ ಮೇಯರ್ ಮಹಾಬಲ ಮಾರ್ಲ,ವಿಜಯ್ ಸುವರ್ಣ, ಹನೀಫ್, ಉಮೇಶ್, ಅನಿಲ್ ಪಿ.ವಿ., ಹುಸೈನ್ ಬೋಳಾರ್, ಬಾಲಕೃಷ್ಣ ಪೈ ಮತ್ತಿತರರು ಉಪಸ್ಥಿತರಿದ್ದರು.
Comments are closed.